ಮಹದಾಯಿ ಹೋರಾಟಗಾರರ ಮೇಲೆ ಮತ್ತೊಮ್ಮೆ ಪ್ರಕರಣ ದಾಖಲು

Update: 2019-02-26 14:43 GMT
ಸಾಂದರ್ಭಿಕ ಚಿತ್ರ

ಧಾರವಾಡ, ಫೆ.26: ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರ ರೈತರ ಮೇಲೆ ದಾಖಲಿಸಿದ್ದ ಎಲ್ಲ ಪ್ರಕರಣ ಹಿಂಪಡೆಯಬೇಕೆಂದು ಹಿಂದಿನ ಸಿದ್ದರಾಮಯ್ಯ ಸರಕಾರ ಆದೇಶ ನೀಡಿದ್ದರೂ ಇದುವರೆಗೂ ರೈತರಿಗೆ ಈ ಪ್ರಕರಣಗಳಿಂದ ಮುಕ್ತಿ ದೊರೆತಿಲ್ಲ ಎಂದು ಹೋರಾಟಗಾರರು ಆರೋಪಿಸಿದ್ದಾರೆ.

25 ರೈತರ ಮೇಲೆ ಸಿಆರ್‌ಪಿಸಿ ಕಲಂ 107 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ, ನವಲಗುಂದ ತಾಲೂಕು ದಂಡಾಧಿಕಾರಿಗಳಿಗೆ ವರದಿ ನೀಡಿದ್ದಾರೆ. ಅದರನ್ವಯ ದಂಡಾಧಿಕಾರಿಗಳ ಕೋರ್ಟ್‌ಗೆ ಫೆ. 25ರಂದು ಹಾಜರಾಗಬೇಕೆಂದು 25 ರೈತರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಸರಕಾರ ಆದೇಶ ನೀಡಿದ್ದರೂ ಈ ರೀತಿಯಾಗಿ ಪ್ರಕರಣ ದಾಖಲಿಸಿಕೊಂಡಿರುವುದು ಸರಿಯಲ್ಲ. ಕೂಡಲೇ ಸರಕಾರ ಈ ಕುರಿತು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಮಹದಾಯಿ ಹೋರಾಟ ನೇತೃತ್ವ ವಹಿಸಿದ್ದ ಲೋಕನಾಥ ಹೆಬಸೂರ, ಸತ್ಯನಾರಾಯಣ ಹೆಬಸೂರ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ದೇವೇಂದ್ರಪ್ಪಹಳ್ಳದ ಸೇರಿದಂತೆ 25 ಜನರ ವಿರುದ್ಧ ಪೊಲೀಸ್ ಇಲಾಖೆ ಸಿಆರ್‌ಪಿಸಿ ಕಲಂ 107 ಅಡಿಯಲ್ಲಿ ಫೆ. 4ರಂದು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ ಮತ್ತೊಮ್ಮೆ ವರದಿ ಸಲ್ಲಿಸಿದ್ದಾರೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೋಟಿಸ್‌ನಲ್ಲಿ ಏನಿದೆ?: ಪೊಲೀಸ್ ವರದಿ ಅನ್ವಯ 25 ರೈತರಿಗೆ ತಾಲೂಕಾ ದಂಡಾಧಿಕಾರಿಗಳು ನೋಟಿಸ್ ರವಾನಿಸಿದ್ದಾರೆ. ಬರಲಿರುವ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಸಾರ್ವಜನಿಕರಲ್ಲಿ ಪ್ರಭಾವ ಬೀರುತ್ತಾ, ಆಸೆ-ಆಕಾಂಕ್ಷೆಗಳನ್ನು ನೀಡುತ್ತಾ, ಪಕ್ಷಭೇದ ಉಂಟುಮಾಡಿ ಅಕ್ರಮ ಎಸಗುವ ಸಂಭವ ಇದೆ. ಶಾಂತಿಗೆ ಭಂಗವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಲಂ 107ರ ಅಡಿ ಪ್ರಕರಣವನ್ನು ಪಟ್ಟಣದ ಪೊಲೀಸ್ ಅಧಿಕಾರಿ ದಾಖಲಿಸಿದ್ದಾರೆ. ಈ ಕುರಿತಾಗಿ ದಂಡಾಧಿಕಾರಿಗಳ ಕಾರ್ಯಾಲಯಕ್ಕೆ ಖುದ್ದಾಗಿ ಹಾಜರಾಗಿ ವಿವರಣೆ ನೀಡುವುದರ ಜತೆಗೆ 50 ಸಾವಿರ ರೂ. ಮುಚ್ಚಳಿಕೆ ಬಾಂಡ್ ನೀಡಿ ಜಾಮೀನು ಪಡೆಯಬೇಕು ಎಂದು ಸೂಚಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಹೋರಾಟಗಾರ ಸುಬಾಷಚಂದ್ರಗೌಡ ಪಾಟೀಲ ಹೇಳಿದ್ದಾರೆ.

ಗಲಭೆ ನಂತರ ಶಾಂತವಾಗಿ ಹೋರಾಟ ನಡೆಸುತ್ತಿದ್ದ ರೈತ ಹೋರಾಟಗಾರಿಗೆ ಪೊಲೀಸರು ಶಾಕ್ ನೀಡಿದ್ದು, ರೈತರು ಮತ್ತೆ ಹೋರಾಟದ ಹಾದಿ ಹಿಡಿಯುವಂತೆ ಮಾಡಿದೆ. ಮಹದಾಯಿ ನ್ಯಾಯಾಧೀಕರಣದಲ್ಲಿ ತೀರ್ಪು ನೀಡಿದರೂ ಉಭಯ ಸರಕಾರಗಳು ನೀರು ಹರಿಸಲು ಯಾವುದೇ ಪ್ರಕ್ರಿಯೆ ಆರಂಭಿಸಿಲ್ಲ. ಕೂಡಲೇ ಸರಕಾರಗಳು ಎಚ್ಚೆತ್ತುಕೊಳ್ಳದಿದ್ದರೆ ಶಾಸಕರ, ಸಂಸದರ ಮನೆ ಮುಂದೆ ಪ್ರತಿಭಟನೆಗೆ ಮುಂದಾಗಿ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಪಾಟೀಲ ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News