ಪಾಕಿಸ್ತಾನಕ್ಕೆ ಬುದ್ಧಿ ಬರದಿದ್ದರೆ ಯುದ್ಧದ ಹಂತಕ್ಕೆ ಹೋಗಬೇಕಾಗುತ್ತದೆ: ಡಿ.ವಿ.ಸದಾನಂದಗೌಡ

Update: 2019-02-26 14:53 GMT

ಬೆಂಗಳೂರು, ಫೆ.26: ಯೋಧರ ಒಂದೊಂದು ರಕ್ತದ ಹನಿಗೂ ನ್ಯಾಯ ಒದಗಿಸುತ್ತೇನೆಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದರು. ಭಾರತ ಏನು ಮಾಡಬೇಕಿತ್ತೋ ಅದನ್ನು ನಮ್ಮ ಸೇನೆ ಮಾಡಿದೆ. ಪೂರ್ಣ ಪ್ರಮಾಣದ ಉಗ್ರ ತರಬೇತಿ ಕೇಂದ್ರಗಳು ಧ್ವಂಸ ಆಗಿವೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಶಕ್ತಿ ಪರೀಕ್ಷೆ ಮಾಡುವ ಪಾಕಿಸ್ತಾನದ ಪ್ರಯತ್ನ ಸಾಧ್ಯವಿಲ್ಲ. ಭಾರತ ಎಲ್ಲದಕ್ಕೂ ತಯಾರಾಗಿದೆ. ಆದರೆ, ಭಯೋತ್ಪಾದನೆಯನ್ನು ಮಾತ್ರ ಹತ್ತಿಕ್ಕುವ ಕೆಲಸ ಮಾಡುತ್ತಿದ್ದೇವೆ ಎಂಬ ಸಂದೇಶವನ್ನು ಮೋದಿ ಕೊಟ್ಟಿದ್ದಾರೆ ಎಂದರು.

ಇದು ಪಾಕಿಸ್ತಾನಕ್ಕೆ ಎಚ್ಚರಿಕೆ ಗಂಟೆ, ಮೋದಿ ನುಡಿದಂತೆ ನಡೆದಿದ್ದಾರೆ. ಇದನ್ನು ರಾಜಕೀಯ ಮಾಡುವುದು ಸೂಕ್ತ ಅಲ್ಲ. ಹಿಂದೆ ಯಾರು ಏನು ಮಾಡಿದ್ದರೂ ಪಾಕಿಸ್ತಾನವನ್ನು ಹೆಡೆಮುರಿ ಕಟ್ಟುವ ಕೆಲಸ ಆಗಿರಲಿಲ್ಲ. ಗಡಿಯ ಒಳಗೆ ಹೋಗಿ ಹೊರಗೆ ಬಂದಿರಬಹುದು. ಆದರೆ, ನಾವು ಈಗಿನ ಕಾಲಘಟ್ಟಕ್ಕೆ ಏನು ಬೇಕೋ ಅದನ್ನು ಮಾಡಿದ್ದೇವೆ ಎಂದು ಸದಾನಂದ ಗೌಡ ಹೇಳಿದರು.

ಕಾಂಗ್ರೆಸ್ ನಾಯಕರಿಗೂ ಪಾಕಿಸ್ತಾನಕ್ಕೂ ಏನು ಸಂಬಂಧ ಇದೆಯೋ ಗೊತ್ತಿಲ್ಲ. ಇದರಲ್ಲಿ ರಾಜಕಾರಣ ಮಾಡುತ್ತಾರೆ ಎಂದರೆ, ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ಪಾಕಿಸ್ತಾನಕ್ಕೆ ಬುದ್ಧಿ ಬರದಿದ್ದರೆ ಯುದ್ಧದ ಹಂತಕ್ಕೆ ಹೋಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News