ಶಿಕ್ಷಣ ಕ್ಷೇತ್ರ ಉದ್ದಿಮೆಯಾಗಿ ರೂಪಾಂತರಗೊಂಡಿದೆ: ಡಾ.ಕಿಶೋರ್ ಸಿಂಗ್
ಬೆಂಗಳೂರು, ಫೆ.26: ಇಂದಿನ ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಣ ಕ್ಷೇತ್ರವಿಂದು ಹಣ ಮಾಡುವ ಉದ್ದಿಮೆಯಾಗಿ ರೂಪಾಂತರಗೊಂಡಿದೆ ಎಂದು ವಿಶ್ವಸಂಸ್ಥೆಯ ಶಿಕ್ಷಣ ಹಕ್ಕುಗಳ ಮಾಜಿ ವಿಶೇಷ ವರದಿಗಾರ ಡಾ.ಕಿಶೋರ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದ ಶಿಕ್ಷಕರ ಸದನದಲ್ಲಿ ಮಗು ಮತ್ತು ಕಾನೂನು ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಯೂನಿವರ್ಸಿಟಿ ಸಹಯೋಗದೊಂದಿಗೆ ಆಯೋಜಿಸಿದ್ದ ‘ಮೌಲ್ಯ ಬಿಕ್ಕಟ್ಟು ಮತ್ತು ಶಿಕ್ಷಣ ವ್ಯವಸ್ಥೆ- ಸಮಸ್ಯೆ ಹಾಗೂ ಸವಾಲುಗಳು’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳಿಗೆ ಮುಂದಿನ ಭವಿಷ್ಯಕ್ಕೆ ಭದ್ರಬುನಾದಿಯಾಗಬೇಕಿದ್ದ ಶಿಕ್ಷಣ ವ್ಯವಸ್ಥೆಯಿಂದು ಉಳ್ಳವರ ಪಾಲಾಗುತ್ತಿದೆ. ಸ್ಥಿತಿವಂತರಷ್ಟೇ ಶಿಕ್ಷಣ ಪಡಯಬೇಕು ಎಂಬ ಅನಾದಿಕಾಲದ ವ್ಯವಸ್ಥೆ ಮರು ಸ್ಥಾಪನೆಯಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಎಲ್ಲ ಕ್ಷೇತ್ರಗಳನ್ನು ಆಕ್ರಮಿಸಿಕೊಂಡಿರುವ ಕಾರ್ಪೋರೇಟ್ ವ್ಯವಸ್ಥೆ ಇಲ್ಲಿಗೂ ವಿಸ್ತರಣೆಯಾಗಿರುವುದು ದುರಂತ ಎಂದು ಹೇಳಿದರು.
ವಿಶ್ವದಾದ್ಯಂತ ಎಲ್ಲ ವಯಲಗಳಲ್ಲಿ ಬಂಡವಾಳಶಾಹಿಗಳ ಕೈವಾಡವಿದೆ. ಅದು ಶಿಕ್ಷಣ ಕ್ಷೇತ್ರವನ್ನೂ ಆವರಿಸಿಕೊಂಡಿದ್ದು, ಇದನ್ನು ಮಾರಾಟದ ಕ್ಷೇತ್ರವನ್ನಾಗಿ ಮಾಡಿಕೊಳ್ಳಲಾಗಿದೆ. ಹೀಗಾಗಿ, ಬಂಡವಾಳಶಾಹಿಗಳಿಂದ ಶಿಕ್ಷಣ ಕ್ಷೇತ್ರ ಬಿಡುಗಡೆಯಾಗಬೇಕು. ಎಲ್ಲರಿಗೂ ಶಿಕ್ಷಣ ಮತ್ತು ಆರೋಗ್ಯ ಸಿಕ್ಕಿದಾಗಲೇ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದು ಅವರು ನುಡಿದರು.
ಭಾರತದಲ್ಲಿ ಶಿಕ್ಷಣವನ್ನು ದಾನ ಎಂದು ಹೇಳಲಾಗುತ್ತದೆ. ಅದರಲ್ಲೂ ಪ್ರಾಥಮಿಕ ಶಿಕ್ಷಣ ಸೇವೆ ಅತ್ಯಂತ ಮಹತ್ವದಾಗಿದೆ. ಇದೊಂದು ಪವಿತ್ರವಾದ ವೃತ್ತಿಯಾಗಿದ್ದು, ಇಲ್ಲಿ ಸೇವೆಸಲ್ಲಿಸುವ ಪ್ರತಿಯೊಬ್ಬರು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತಾರೆ ಎಂದು ತಿಳಿಸಿದರು.
ಶಿಕ್ಷಣ ಮಕ್ಕಳಿಗೆ ಅಕ್ಷರ ಜ್ಞಾನ ನೀಡುತ್ತದೆ. ಅದರ ಜತೆಗೆ, ಸೌಹಾರ್ದ, ಸಂಸ್ಕಾರ, ಸಮಾನತೆಯನ್ನೂ ಕಲಿಸುತ್ತದೆ. ಅಕ್ಷರ ಜ್ಞಾನವಿದ್ದರೆ ಮಾನವೀಯ ಮೌಲ್ಯಗಳು ಹಾಗೂ ವೈಚಾರಿಕ ಮನೋಭಾವ ಬೆಳೆಯಲು ಹೆಚ್ಚು ಸಹಕಾರವಾಗುತ್ತದೆ. ಆದುದರಿಂದಾಗಿ ಸರಕಾರಗಳು ಎಲ್ಲರಿಗೂ ಶಿಕ್ಷಣ ಸಿಗುವಂತೆ ಮಾಡಬೇಕು. ಸರಕಾರಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಆಗ್ರಹಿಸಿದರು.
ಒಂದು ದೇಶ ಬದಲಾವಣೆ ಕಾಣಬೇಕಾದರೆ ಶಿಕ್ಷಣ ಅತ್ಯಗತ್ಯ. ದೇಶದಲ್ಲಿ ಅನೇಕರು ಶಿಕ್ಷಣ ನೀಡುವ ಮೂಲಕ ಹಲವು ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಲು ಶ್ರಮಿಸಿದ್ದಾರೆ. ಹೀಗಾಗಿ, ದೇಶದ ಬದಲಾವಣೆಗಾಗಿ ಹಾಗೂ ಉಜ್ಜಲ ಭವಿಷ್ಯಕ್ಕಾಗಿ ಎಲ್ಲರನ್ನೂ ಶಿಕ್ಷಿತರನ್ನಾಗಿ ಮಾಡಬೇಕು ಎಂದು ಅವರು ಕರೆ ನೀಡಿದರು.
ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ ಮಾತನಾಡಿ, ದೇಶ ಮತ್ತು ರಾಜ್ಯದಲ್ಲಿನ ಶೈಕ್ಷಣಿಕ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿಗೆ. ಅವೈಜ್ಞಾನಿಕ ಪಠ್ಯ ಕ್ರಮಗಳು, ಬೋಧನಾ ವಿಧಾನಗಳಿಂದ ಗುಣಮಟ್ಟದ ಶಿಕ್ಷಣ ಸಿಗಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸರಕಾರಿ ಶಾಲೆಗಳು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿವೆ. ಅಲ್ಲದೆ, ಅಧ್ಯಾಪಕರೂ ಹಲವು ಸಮಸ್ಯೆಗಳಿಂದ ನರಳುತ್ತಿದ್ದಾರೆ. ಇಂತಹ ದುಸ್ಥಿತಿಯಲ್ಲಿ ಸರಕಾರಿ ಶಾಲೆಗಳಿಂದ ಗುಣಾತ್ಮಕ ಶಿಕ್ಷಣ ನಿರೀಕ್ಷಿಸುವುದು ಕಷ್ಟ ಸಾಧ್ಯ. ಹೀಗಾಗಿ, ಆಳುವವರು ಬಡವರ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದರ ಕಡೆ ಗಮನ ಹರಿಸಬೇಕು. ಶಿಕ್ಷಕರು ಫಲಿತಾಂಶದ ಕಡೆಗೆ ಎದುರು ನೋಡದೇ ಮಕ್ಕಳ ಭವಿಷ್ಯವನ್ನು ನೋಡಬೇಕಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ, ನಿವೃತ್ತ ಶಿಕ್ಷಣ ಇಲಾಖೆಯ ನೌಕರರ ಸಂಘದ ತಿರುಮಲರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.