ದೇಶದ ಅಭಿವೃದ್ಧಿಗೆ ಕಾರ್ಮಿಕರ ಶ್ರಮವೇ ಮೂಲ ಕಾರಣ: ಈಶ್ವರ್ ಖಂಡ್ರೆ
ಬೆಂಗಳೂರು, ಮಾ.1: ಇವತ್ತು ಭಾರತ ಸಾಮಾಜಿಕ, ಆರ್ಥಿಕ ಹಾಗೂ ಆಧುನೀಕರಣ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಆಮೂಲಾಗ್ರವಾಗಿ ಮುಂದುವರೆದಿರುವುದಕ್ಕೆ ಕಾರ್ಮಿಕರ ಶ್ರಮವೇ ಮೂಲ ಕಾರಣವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದರು.
ಶುಕ್ರವಾರ ದೇವರಾಜ ಅರಸು ಭವನದಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ವತಿಯಿಂದ ಆಯೋಜಿಸಿದ್ದ ಬೃಹತ್ ಕಾರ್ಮಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರಗಳ ಅಭಿವೃದ್ದಿ, ರಾಷ್ಟ್ರೀಯ ಹೆದ್ದಾರಿಗಳು, ಬೃಹತ್ ಕಟ್ಟಡಗಳು, ಕಾರ್ಖಾನಗೆಳ ಅಭಿವೃದ್ಧಿಯ ಹಿಂದೆ ಕಾರ್ಮಿಕರ ಶ್ರಮವಿದೆ ಎಂದು ತಿಳಿಸಿದರು.
ಇವತ್ತು ಅಸಂಘಟಿತ ಕಾರ್ಮಿಕರ ದಿನಾಚರಣೆ ಆಯೋಜಿಸಿರುವುದು ಮಹತ್ವದಾಗಿದೆ. ಈ ದಿನವನ್ನು ಕಾರ್ಮಿಕರ ಸ್ಥಿತಿ-ಗತಿ ಏನಿದೆ ಎಂದು ಚಿಂತನೆ ನಡೆಸಬೇಕು. ಜೊತೆಗೆ ಎಲ್ಲಾ ವರ್ಗದ ಕಾರ್ಮಿಕರ ಸರ್ವತೋಮುಖ ಅಭಿವೃದ್ಧಿಗೆ ಉತ್ತಮವಾದ ಯೋಜನೆಗಳನ್ನು ಹಾಕಿಕೊಳ್ಳಬೇಕಿದೆ ಎಂದು ಅವರು ಹೇಳಿದರು.
12ನೆ ಶತಮಾನದಲೇ ಕಾಯಕ ಯೋಗಿ ಬಸವಣ್ಣ ಕಾಯಕವೇ ಕೈಲಾಸ ಎಂದು ಸಂದೇಶ ಸಾರಿದ್ದು, ಅವರ ಚಿಂತನೆಗಳನ್ನು ಕಾಂಗ್ರೆಸ್ ಸಿದ್ಧಾಂತವಾಗಿ ರೂಪಿಸಿಕೊಂಡಿದೆ. ಹೀಗಾಗಿ ಕಾರ್ಮಿಕರ ಅಭಿವೃದ್ಧಿಗೆ ಮತ್ತಷ್ಟು ಕಾರ್ಯಕ್ರಮಗಳನ್ನು ರೂಪಿಸಲು ಬದ್ಧರಾಗಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷ ಎಸ್.ಎಸ್.ಪ್ರಕಾಶಂ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕೆಪಿಸಿಸಿ ಕಾರ್ಮಿಕರ ಘಟಕ ನಿರಂತರವಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಕಾರ್ಮಿಕ ಘಟಕ ಕಳೆದ 25 ವರ್ಷಗಳಿಂದ ಉತ್ತಮವಾಗಿ ಸೇವೆ ಸಲ್ಲಿಸುತ್ತಿದೆ. ರಾಜ್ಯದಲ್ಲಿ 14ಲಕ್ಷ ಜನ ಕಾರ್ಮಿಕ ವಿಭಾಗದ ಸದಸ್ಯರಾಗಿದ್ದಾರೆ. ನಾನಾ ಕಾರ್ಮಿಕ ವಿಭಾಗಗಳಿಂದ ಹಾಗೂ ಅಸಂಘಟಿತ ಕಾರ್ಮಿಕರು ಸೇರಿದಂತೆ ರಾಜ್ಯದ 30 ಜಿಲ್ಲೆಗಳು, 176 ತಾಲೂಕುಗಳಲ್ಲಿ ಹಾಗೂ 198 ಬಿಬಿಎಂಪಿ ವಾರ್ಡ್ಗಳಲ್ಲಿ ಕಾರ್ಮಿಕರ ಘಟಕ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ಸಮಾವೇಶದಲ್ಲಿ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್, ಓಬಿಸಿ ವಿಭಾಗದ ಅಧ್ಯಕ್ಷ ಲಕ್ಷ್ಮಿ ನಾರಾಯಣ್ ಸೇರಿದಂತೆ ಪ್ರಮುಖರಿದ್ದರು.
ಕಾರ್ಮಿಕರಿಗೆ 2 ಟಿಕೆಟ್
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಬ್ಬರು ಕಾರ್ಮಿಕ ಮುಖಂಡರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಮೂಲಕ ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡಲಿ. ಈ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಮಾತನಾಡಲಿದ್ದೇನೆ.
-ಎಸ್.ಎಸ್.ಪ್ರಕಾಶಂ, ಅಧ್ಯಕ್ಷ, ಕೆಪಿಸಿಸಿ ಕಾರ್ಮಿಕ ವಿಭಾಗ