ಮುಖ್ಯಮಂತ್ರಿ ಉಪಕಾರ್ಯದರ್ಶಿಯ ನಕಲಿ ಲೆಟರ್ ಹೆಡ್ ಸೃಷ್ಟಿಸಿ ದಂಪತಿಗೆ 5 ಲಕ್ಷ ವಂಚನೆ
ಮದ್ದೂರು,ಮಾ.2: ಮುಖ್ಯಮಂತ್ರಿಯವರ ಉಪ ಕಾರ್ಯದರ್ಶಿಯ ಲೆಟರ್ ಹೆಡ್ ಅನ್ನು ನಕಲಿಯಾಗಿ ಸೃಷ್ಟಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಮಂಜೂರು ಮಾಡಿಸುವುದಾಗಿ ದಂಪತಿಯಿಂದ 5 ಲಕ್ಷ ರೂಪಾಯಿ ಪಡೆದು ವ್ಯಕ್ತಿಯೊಬ್ಬ ವಂಚಿಸಿರುವ ಘಟನೆ ಕೆಸ್ತೂರು ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕೆಸ್ತೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗುಮಾಸ್ತನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಟಿ.ಎಲ್.ನಂಜುಂಡಸ್ವಾಮಿ, ಅವರ ಪತ್ನಿ ಟಿ.ಎಂ.ಗಿರಿಜಾ ವಂಚನೆಗೊಳಗಾದವರು. ಇವರನ್ನು ತಾಲೂಕು ಮಲ್ಲನಕುಪ್ಪೆ ಗ್ರಾಮದ ಮೂಲ ನಿವಾಸಿ ಹಾಗೂ ಬೆಂಗಳೂರಿನ ಮಂಜುನಾಥ ನಗರದಲ್ಲಿ ವಾಸವಾಗಿರುವ ಎಂ.ರಾಮಚಂದ್ರೇಗೌಡ ಎಂಬುವರು ನಿವೇಶನ ಕೊಡಿಸುವುದಾಗಿ ವಂಚಿಸಿದ್ದಾರೆ ಎಂದು ಈತ ನೀಡಿರುವ ನಕಲಿ ದಾಖಲಾತಿಗಳೊಂದಿಗೆ ಗಿರಿಜಾ ಅವರು ಕೆಸ್ತೂರು ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ.
ಘಟನೆ ವಿವರ: ಮಲ್ಲನಕುಪ್ಪೆ ಮೂಲ ನಿವಾಸಿಯಾದ ರಾಮಚಂದ್ರೇಗೌಡ ಬೆಳೆಸಾಲ ಪಡೆಯಲು ಕೆಸ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬಂದಾಗ ಗುಮಾಸ್ತ ನಂಜುಂಡಸ್ವಾಮಿ ಅವರನ್ನು ಪರಿಚಯಿಸಿಕೊಂಡಿದ್ದಾನೆ. ಈ ಪರಿಚಯ ಸ್ನೇಹವಾಗಿ ಬೆಳೆದ ಬಳಿಕ ತಾನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ನಿಮಗೆ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿಯಲ್ಲಿ ಕಡಿಮೆ ಹಣದಲ್ಲಿ ನಿವೇಶನ ಕೊಡಿಸುವುದಾಗಿ ನಂಜುಂಡಸ್ವಾಮಿ ಅವರನ್ನು ಪುಸಲಾಯಿಸಿದ್ದಾನೆ. ಬಳಿಕ ತನಗೆ ವಿವಿಧ ಇಲಾಖಾ ಸಚಿವರಗಳ ಸಂಪರ್ಕವಿದ್ದು, ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿಗಳ ಪರಿಚಯವಿದ್ದು, ನಿಮ್ಮ ಕೆಲಸ ಸುಲಭವಾಗಲಿದೆ ಎಂದು ಹೇಳಿದ್ದಾನೆ. ಇದನ್ನು ನಂಬಿದ ನಂಜುಂಡಸ್ವಾಮಿ ಅವರು ತಮಗೆ ನಿವೇಶನ ಕೊಡಿಸುವಂತೆ ಆತನಲ್ಲಿ ವಿನಂತಿಸಿದ್ದಾರೆ.
ನಂಜುಂಡಸ್ವಾಮಿ ಅವರ ಅಮಾಯಕತೆಯನ್ನು ಬಂಡವಾಳ ಮಾಡಿಕೊಂಡ ರಾಮಚಂದ್ರೇಗೌಡ ಆಲಿಯಾಸ್ ಶ್ರೀರಾಮಚಂದ್ರ, ಜ.08ರಂದು ನಂಜುಂಡಸ್ವಾಮಿ ಅವರನ್ನು ಮತ್ತೇ ಭೇಟಿ ಮಾಡಿ ಅವರ ಪತ್ನಿ ಟಿ.ಎಂ.ಗಿರಿಜಾ ಅವರ ಹೆಸರಿನಲ್ಲಿ ನಿವೇಶನ ಕೋರಿ ಅರ್ಜಿಯನ್ನು ಬರೆಸಿಕೊಂಡಿದ್ದಾನೆ. ಬಳಿಕ ಜ.13ರಂದು ನಂಜುಂಡಸ್ವಾಮಿ ಅವರಿಗೆ ಪೋನ್ ಮಾಡಿ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿಯಲ್ಲಿ 26 -40 ಅಡಿ ಅಳತೆಯ ನಿವೇಶನ ಮಂಜೂರಾಗಿದೆ. ಕೂಡಲೇ ಗಿರಿಜಾ ಅವರ ಆಧಾರ್ ಚೀಟಿ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಸೇರಿದಂತೆ ಇನ್ನಿತರ ದಾಖಲಾತಿಗಳೊಂದಿಗೆ ಬೆಂಗಳೂರಿಗೆ ಬರಲು ತಿಳಿಸಿದ್ದಾನೆ.
ಈತನ ಮಾತು ನಂಬಿದ ನಂಜುಂಡಸ್ವಾಮಿ ದಂಪತಿ ಬೆಂಗಳೂರಿಗೆ ಹೋಗಿ ಆತನನ್ನು ಭೇಟಿಯಾಗಿದ್ದಾರೆ. ಆಗ ಆತನು ಅಲ್ಲಿಂದ ಇವರನ್ನು ಉಲ್ಲಾಳ ಉಪನಗರದ ವಿಶ್ವೇಶ್ವರಯ್ಯ ಬಡಾವಣೆಗೆ ಕರೆದೊಯ್ದಿದ್ದಾನೆ. ಅಲ್ಲಿ ಬಿಡಿಎ ನಿವೇಶನ ಸಂಖ್ಯೆ 140/1 ತೋರಿಸಿ ಇದೇ ನಿಮ್ಮ ನಿವೇಶನ ಎಂದು ತಿಳಿಸಿದ್ದಾನೆ. ಬಳಿಕ ತಮ್ಮ ಮನೆಗೆ ಗಿರಿಜಾ ಹಾಗೂ ನಂಜುಂಡಸ್ವಾಮಿ ಅವರನ್ನು ಕರೆದೊಯ್ದ ಈತ, ಮುಖ್ಯಮಂತ್ರಿಗಳ ಉಪಕಾರ್ಯದರ್ಶಿ ಅವರ ಶಿಫಾರಸ್ಸಿನ ನಕಲಿ ಪತ್ರವನ್ನು ತೋರಿಸಿ ನಂಬಿಕೆ ಹುಟ್ಟಿಸಿದ್ದಾನೆ.
ಬಳಿಕ ಜ.16ರಂದು ಕೆಸ್ತೂರಿಗೆ ಬಂದ ರಾಮಚಂದ್ರೇಗೌಡ, ನಾನು ಈಗಾಗಲೇ ನನ್ನ ಖಾತೆಯಿಂದ 4,22,830 ಹಣವನ್ನು ಬಿಡಿಎಗೆ ಪಾವತಿ ಮಾಡಿದ್ದೇನೆ ಎಂದು ತಿಳಿಸಿ ಬಿಡಿಎಗೆ ಪಾವತಿ ಮಾಡಿರುವ ಹಣದ ಚಲನ್ ಹಾಗೂ ಅವರು ನೀಡಿರುವ ಹಣದ ರಶೀದಿಯನ್ನು ತೋರಿಸಿ ಹಣ ನೀಡುವಂತೆ ಒತ್ತಾಯಿಸಿದ್ದಾನೆ. ಇದನ್ನು ನಂಬಿದ ನಂಜುಂಡಸ್ವಾಮಿ ಅವರು ತಮ್ಮ ಖಾತೆಯಿಂದ 2 ಲಕ್ಷ ರೂಪಾಯಿಗಳ ಚೆಕ್ ಅನ್ನು ಅಂದೇ ನೀಡಿದ್ದಾರೆ. ಬಳಿಕ ಜ.21ರಲ್ಲಿ 3 ಲಕ್ಷ ರೂಪಾಯಿ ಹಣವನ್ನು ನಗದಾಗಿ ನಂಜುಂಡಸ್ವಾಮಿ ರಾಮಚಂದ್ರೇಗೌಡನಿಗೆ ನೀಡಿದ್ದಾರೆ.
ಇದಾದ ಬಳಿಕ ಫೆ.14ರಂದು ನಿಮ್ಮ ನಿವೇಶನದ ನೊಂದಣಿ ಪ್ರಕ್ರಿಯೆ ಮಾಡಬೇಕಾಗಿದ್ದು, ಇದಕ್ಕೆ ನೊಂದಣಿ ಶುಲ್ಕವಾಗಿ 84,811 ರೂಪಾಯಿ ಪಾವತಿ ಮಾಡಬೇಕೆಂದು ಒತ್ತಾಯಿಸಿದ್ದಾನೆ. ಬಳಿಕ ಈಗಾಗಲೇ ಆ ಹಣವನ್ನು ತಾನೇ ಪಾವತಿಸಿರುವುದಾಗಿ ತಿಳಿಸಿ ಅದರ ನಕಲಿ ಚಲನ್ ಅನ್ನು ನಂಜುಂಡಸ್ವಾಮಿ ಅವರ ವಾಟ್ಸ್ ಆಪ್ ಮೂಲಕ ಕಳುಹಿಸಿದ್ದಾನೆ. ಕೂಡಲೇ ಬೆಂಗಳೂರಿಗೆ ಬಂದು ಹಣವನ್ನು ಕೊಡಲು ಒತ್ತಾಯಿಸಿದ್ದಾನೆ. ಇದರಿಂದ ಅನುಮಾನಗೊಂಡ ನಂಜುಂಡಸ್ವಾಮಿ ಕೂಡಲೇ ಬೆಂಗಳೂರಿನ ಬಿಡಿಎ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಅಲ್ಲದೇ ಆತ ನೀಡಿದ್ದ ಎಲ್ಲಾ ಚಲನ್ ಹಾಗೂ ರಶೀದಿಗಳನ್ನು ತೋರಿಸಿದಾಗ ಇವುಗಳೆಲ್ಲವೂ ನಕಲಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಳಿಕ ಈ ಕುರಿತು ರಾಮಚಂದ್ರೇಗೌಡನಿಗೆ ನಂಜುಂಡಸ್ವಾಮಿ ಅವರು ಪೋನಾಯಿಸಿದಾಗ, ಎಲ್ಲಾ ದಾಖಲಾತಿಗಳು ಅಸಲಿ ಎಂದು ಆತ ವಾದಿಸಿದ್ದಾನೆ. ಬಳಿಕ ಮೂರು ನಾಲ್ಕು ಬಾರಿ ಪೋನಾಯಿಸಿ, ಈ ಕುರಿತು ಪ್ರಶ್ನಿಸಲು ಆರಂಭಿಸಿದಾಗ ತನ್ನ ಪೋನನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಆಗ ತಾವು ಮೋಸ ಹೋಗಿರುವುದಾಗಿ ನಂಜುಂಡಸ್ವಾಮಿ ದಂಪತಿಗಳಿಗೆ ಗೊತ್ತಾಗಿದೆ.
ಬಳಿಕ ಗಿರಿಜಾ ಹಾಗೂ ನಂಜುಂಡಸ್ವಾಮಿ ಅವರು ರಾಮಚಂದ್ರೇಗೌಡನ ಮಂಜುನಾಥನಗರದ ನಿವಾಸಕ್ಕೆ ಹೋದಾಗ ಅಲ್ಲಿ ರಾಮಚಂದ್ರೇಗೌಡ ಸಿಗಲಿಲ್ಲ. ಈ ಬಗ್ಗೆ ಆತನ ಪತ್ನಿ ಮಂಜುಳಾ ಅವರನ್ನು ಪ್ರಶ್ನಿಸಿದಾಗ ಆಕೆಯು ಇವರೊಂದಿಗೆ ಜಗಳ ತೆಗೆದು ತನ್ನ ಮೇಲೆ ಹಲ್ಲೆ ಮಾಡಿದರು ಎಂದು ಸ್ಥಳೀಯ ಪೊಲೀಸ್ ಠಾಣೆಗೆ ಇವರ ಮೇಲೆ ದೂರು ನೀಡಿದ್ದಾಳೆ. ಅಲ್ಲದೇ ರೌಡಿಗಳ ಮೂಲಕ ರಾಮಚಂದ್ರೇಗೌಡ ನಂಜುಂಡಸ್ವಾಮಿ ದಂಪತಿಗೆ ಬೆದರಿಕೆ ಹಾಕಿಸಿ ಕೊಲೆ ಬೆದರಿಕೆವೊಡ್ಡಿದ್ದಾನೆ ಎಂದು ಗಿರಿಜಾ ನಂಜುಂಡಸ್ವಾಮಿ ದಂಪತಿ ಕೆಸ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ದೂರು ಸ್ವೀಕರಿಸಿರುವ ಪಿಎಸ್ಐ ಸಂತೋಷ್ ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.