×
Ad

ಪತ್ನಿಗೆ ಅನ್ನ, ಬಟ್ಟೆ ನೀಡದಿರುವುದು ಕ್ರೌರ್ಯ ಎನಿಸಿಕೊಳ್ಳುವುದಿಲ್ಲ: ಹೈಕೋರ್ಟ್ ಅಭಿಪ್ರಾಯ

Update: 2019-03-04 23:32 IST

ಬೆಂಗಳೂರು, ಮಾ.4: ಪತ್ನಿಗೆ ಪತಿಯ ಕುಟುಂಬದವರು ಅನ್ನ, ಬಟ್ಟೆ ನೀಡದಿರುವುದು ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಕ್ರೌರ್ಯ ಎಂದು ಪರಿಗಣಿಸಲು ಬರುವುದಿಲ್ಲ ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಮೈಸೂರಿನ ಫಾತಿಮಾ ಹಾಗೂ ಅಕ್ಬರ್(ಇಬ್ಬರ ಹೆಸರು ಬದಲಿಸಲಾಗಿದೆ) 1993ರಲ್ಲಿ ಮದುವೆಯಾಗಿದ್ದರು. ದಂಪತಿಗೆ ನಾಲ್ವರು ಮಕ್ಕಳಿದ್ದರು. ಮದುವೆಯಾಗಿ ಕೆಲವೆ ವರ್ಷಗಳಲ್ಲಿ ಅವರು ಪ್ರತ್ಯೇಕಗೊಂಡಿದ್ದರು. ಫಾತಿಮ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. 2014ರ ಆ.21ರಂದು ಪತಿಗೆ ಕರೆ ಮಾಡಿದ್ದ ಫಾತಿಮ, ನಾನು ತಲೆನೋವಿಂದ ನರಳುತ್ತಿದ್ದೇನೆ. ಈ ಕೂಡಲೇ ನೀನು ಮನೆಗೆ ಬರಬೇಕು. ಬರಲಿಲ್ಲವೆಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು. ಆದರೆ, ಅಕ್ಬರ್ ನಾನು ಮನೆಗೆ ಬರುವುದಿಲ್ಲ. ನೀನು ಏನಾದರೂ ಮಾಡಿಕೊ ಎಂದು ಹೇಳಿದ್ದರು. ಪತಿಯ ಈ ಮಾತುಗಳಿಂದ ಬೇಸತ್ತ ಫಾತಿಮ ಮರುದಿನ ಅಂದರೆ 2014ರ ಆ.22ರಂದು ಬೆಳಗ್ಗೆ 9ಗಂಟೆಗೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ್ದ ಪೊಲೀಸರು ಅಕ್ಬರ್, ಆತನ ತಾಯಿ ಹಾಗೂ ಸಹೋದರನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498(ಎ) ಅಡಿ ಕ್ರೌರ್ಯ ಮೆರೆದ ಮತ್ತು ಸೆಕ್ಷನ್ 306 ಅಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹಾಗೂ ಸೆಕ್ಷನ್ 34 ಅಡಿ ಕ್ರಿಮಿನಲ್ ಸಂಚು ಆರೋಪ ಸಂಬಂಧ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ತಮ್ಮ ವಿರುದ್ಧದ ಈ ದೋಷಾರೋಪಪಟ್ಟಿ ರದ್ದುಪಡಿಸುವಂತೆ ಕೋರಿ ಪ್ರಕರಣದ ಆರೋಪಿಗಳಾದ ಅಕ್ಬರ್, ಆತನ ತಾಯಿ ಹಾಗೂ 3ನೆ ಆರೋಪಿಯಾಗಿದ್ದ ಸೋದರ ಹೈಕೋರ್ಟ್ ಮೆಟ್ಟಿಲೇರಿದ್ದರು. ಫಾತಿಮ ಪರ ವಕೀಲರು, ಅರ್ಜಿದಾರರು ಮೃತಳೊಂದಿಗೆ ಅಹಿತಕರವಾಗಿ ವರ್ತಿಸುತ್ತಿದ್ದರು. ಅನ್ನ, ಬಟ್ಟೆ ನೀಡುತ್ತಿರಲಿಲ್ಲ. ಇದರಿಂದ, ರೋಸಿ ಹೋಗಿದ್ದ ಫಾತಿಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಾದ ಮಂಡಿಸಿದ್ದರು. ಈ ವಾದವನ್ನು ಅರ್ಜಿದಾರರ ಪರ ವಕೀಲರು ಅಲ್ಲೆಗೆಳೆದಿದ್ದರು.

ಮದುವೆಯಾಗಿ ಕೆಲವೆ ವರ್ಷಕ್ಕೆ ದಂಪತಿ ಬೇರ್ಪಟ್ಟಿದ್ದಾರೆ. ಮೃತಳು ಮಕ್ಕಳೊಂದಿಗೆ ಪ್ರತ್ಯೇಕವಾಗಿ ನೆಲೆಸಿದ್ದರು. ಇದರಿಂದ ಅಕ್ಬರ್, ಆತನ ತಾಯಿ ಹಾಗೂ ಸಹೋದರ ಫಾತಿಮ ಜೊತೆಗೆ ವಾಸವಿರಲಿಲ್ಲ. ಆರೋಪಿಗಳು ಫಾತಿಮರೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದರು ಹಾಗೂ ಅನ್ನ, ಬಟ್ಟೆ ನೀಡದೆ ಶೋಷಿತ ಕಿರುಕುಳ ನೀಡಿದ್ದರು ಎಂಬುದು ಸುಳ್ಳು ಹಾಗೂ ನಂಬಲರ್ಹವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಮುಖ್ಯವಾಗಿ ಅನ್ನ, ಬಟ್ಟೆ ನೀಡದಿರುವುದು ಕ್ರೌರ್ಯ ಎಂಬುದಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು. ಅಲ್ಲದೆ, ಆತ್ಮಹತ್ಯೆಗೆ ಪ್ರಚೋದನೆ ನೀಡಲಾಯಿತು ಎಂಬ ಆರೋಪ ಪರಿಶೀಲಿಸುವುದಾದರೆ, ಅಕ್ಬರ್ ಮನೆಗೆ ಬರುವುದಿಲ್ಲ ಎಂದು ಹೇಳಿದ ತಕ್ಷಣವೇ ಫಾತಿಮ ಅತ್ಮಹತ್ಯೆಗೆ ಶರಣಾಗಿಲ್ಲ. 2014ರ ಆ.21ರಂದು ಫಾತಿಮ ಕರೆ ಮಾಡಿದ್ದರೆ, ಮರುದಿನ ಅಂದರೆ ಆ.22ರಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಇನ್ನು ಮನೆಗೆ ಬರುವುದಿಲ್ಲ, ನೀನು ಏನಾದರೂ ಮಾಡಿಕೋ ಎಂದು ಅಕ್ಬರ್ ಹೇಳಿಕೆ ನೀಡಿರುವುದು ಆತ್ಮಹತ್ಯೆಗೆ ನೀಡಿದ ಪ್ರಚೋದನೆ ಎಂದು ತೀರ್ಮಾನಕ್ಕೆ ಬರಲಾಗುವುದಿಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿತು.

ದೋಷರೋಪ ಪಟ್ಟಿ ರದ್ದು: ಅಂತಿಮವಾಗಿ ಅಕ್ಬರ್ನ ತಾಯಿ ಹಾಗೂ ಸೋದರನ ವಿರುದ್ಧ ಕ್ರೌರ್ಯ ಮೆರೆದ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹಾಗೂ ಕ್ರಿಮಿನಲ್ ಸಂಚು ರೂಪಿಸಿದ ಆರೋಪದ ಮೇಲೆ ಪೊಲೀಸರು ದೋಷರೋಪ ಪಟ್ಟಿ ದಾಖಲಿಸಿರುವುದು ಅಕ್ರಮ ಹಾಗೂ ಕೋರ್ಟ್ ಪ್ರಕ್ರಿಯೆಯ ದುರ್ಬಳಕೆಯಾಗಿದೆ. ಹೀಗಾಗಿ, ಪ್ರಕರಣದ ಮುಂದುವರಿಯಲು ಅವಕಾಶ ಕಲ್ಪಿಸಲಾಗದು ಎಂದು ತಿಳಿಸಿದ ಹೈಕೋರ್ಟ್, ಅಕ್ಬರ್ ತಾಯಿ ಹಾಗೂ ಸೋದರನ ಮೇಲಿನ ದೋಷಾರೋಪ ಪಟ್ಟಿಯನ್ನು ರದ್ದುಪಡಿಸಿದೆ. ಆದರೆ, ಅಕ್ಬರ್ ವಿರುದ್ಧದ ಪ್ರಕರಣ ಮಾತ್ರ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News