ಔರಾದ್ಕರ್ ವರದಿ ಜಾರಿ ಕುರಿತು ಶೀಘ್ರವೇ ಉನ್ನತ ಅಧಿಕಾರಿಗಳ ಸಭೆ: ಎಂ.ಬಿ ಪಾಟೀಲ್

Update: 2019-03-06 16:59 GMT

ದಾವಣಗೆರೆ,ಮಾ.6: ಸಿಎಂ ಅವರು ಔರಾದ್ಕರ್ ಸಮಿತಿ ವರದಿ ಜಾರಿ ಕುರಿತಂತೆ ಶೀಘ್ರವೇ ಉನ್ನತ ಅಧಿಕಾರಿಗಳ ಸಭೆ ಕರೆಯಲಿದ್ದಾರೆಂದು ಗೃಹ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

ಇಲ್ಲಿನ ಎಸ್ಪಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಔರಾದ್ಕರ್ ಸಮಿತಿ ವರದಿ ಅನುಷ್ಟಾನ ಸೇರಿದಂತೆ ಪೊಲೀಸ್ ಇಲಾಖೆಯಲ್ಲಿ ಬದಲಾವಣೆ ತರಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಆದಷ್ಟು ಬೇಗ ಇಲಾಖೆಯಲ್ಲಿ ಸಾಕಷ್ಟು ಮಾರ್ಪಾಡು ತರುವುದು, ಇಲಾಖೆ ಭಡ್ತಿ ಸೇರಿದಂತೆ ಸಾಕಷ್ಟು ವಿಷಯಕ್ಕೆ ಒತ್ತು ನೀಡಿದ್ದೇವೆ ಎಂದರು. ನಿರಂತರ ಒತ್ತಡದಲ್ಲೇ ಕಾರ್ಯ ನಿರ್ವಹಿಸಬೇಕಾದ ಇಲಾಖೆ ಇದಾಗಿದ್ದು, ಇಂತಹ ಪೊಲೀಸ್ ಅಧಿಕಾರಿ, ಸಿಬ್ಬಂದಿ ಜೀವನವ ಮಟ್ಟ ಸುಧಾರಣೆ ಆಗಬೇಕು. ಇಲಾಖೆಯಲ್ಲಿ ಭಡ್ತಿ ಪಡೆದ ನಂತರ ಎಕ್ಸಿಕ್ಯೂಟಿವ್ ಹುದ್ದೆ 4 ವರ್ಷ, ನಾನ್ ಎಕ್ಸಿಕ್ಯೂಟಿವ್ ಹುದ್ದೆಯಲ್ಲಿ 2 ಸೇವೆ ಸಲ್ಲಿಸಬೇಕು. ಇಂತಹ ಸಾಕಷ್ಟು ವಿಚಾರಕ್ಕೆ ಗಮನ ಹರಿಸಿದ್ದೇವೆ ಎಂದರು.

ಪೊಲೀಸ್ ಸಬ್ ಇನ್ಸಪೆಕ್ಟರ್ ಗಳು ಎಕ್ಸಿಕ್ಯೂಟಿವ್, ನಾನ್ ಎಕ್ಸಿಕ್ಯೂಟಿವ್ ಹುದ್ದೆ ಹೀಗೆ ಎಲ್ಲಾ ಕಡೆ ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಮುಂದೆ ಪ್ರತಿ ಠಾಣೆಗೆ ಕಾನೂನು-ಸುವ್ಯವಸ್ಥೆಗೆ ಒಬ್ಬ ಎಸ್‍ಐ, ಅಪರಾಧ ವಿಭಾಗಕ್ಕೆ ಒಬ್ಬ ಎಸ್‍ಐ ನೇಮಿಸಲಿದ್ದೇವೆ ಎಂದರು.

ಹಾವೇರಿ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ಎಸ್ಪಿ, ಎಎಸ್ಪಿ, ಡಿಎಸ್ಪಿ, ಎಸ್‍ಐಗಳೊಂದಿಗೆ ಸಭೆ ನಡೆಸಿ, ಪರಿಶೀಲನೆ ನಡೆಸಿದ್ದು, ಮಂಗಳೂರು, ಹುಬ್ಬಳ್ಳಿ, ಮೈಸೂರಲ್ಲಿ ಸಭೆ ನಡೆದಿದೆ. ಇಂದು ದಾವಣಗೆರೆ ಸಭೆಗೆ ಬಂದಿದ್ದೇನೆ. ಜೂಜಾಟ, ಕಳ್ಳತನ, ಹಲ್ಲೆ, ಹತ್ಯೆ, ಅತ್ಯಾಚಾರ, ಅಪಹರಣ, ದರೋಡೆ, ಆನ್‍ಲೈನ್ ವಂಚನೆ ಪ್ರಕರಣಕ್ಕೆ ಕಡಿವಾಣ ಹಾಕಲು ಇಲಾಖೆ ಬದ್ಧವಾಗಿದೆ ಎಂದರು. 

ಈ ಸಂದರ್ಭ ಪೂರ್ವ ವಲಯದ ಪ್ರಭಾರ ಐಜಿಪಿ, ದಾವಣಗೆರೆ ಎಸ್ಪಿ ಆರ್.ಚೇತನ್, ಶಿವಮೊಗ್ಗ ಎಸ್ಪಿ ಡಾ.ಅಶ್ವಿನಿ, ಚಿತ್ರದುರ್ಗ ಎಸ್ಪಿ ಡಾ.ಕೆ.ಅರುಣ, ಹಾವೇರಿ ಎಸ್ಪಿ ಕೆ.ಪರಶುರಾಮ್ ಇದ್ದರು.

ಸೈಬರ್ ಕ್ರೈಂ ಕಡಿವಾಣಕ್ಕೆ ಇನ್ಫೋಸಿಸ್ ನೆರವು
ದಿನದಿನಕ್ಕೂ ಸೈಬರ್ ಕ್ರೈಂ ಪ್ರಕರಣ ಹೆಚ್ಚುತ್ತಿದ್ದು, ಇನ್ಫೋಸಿಸ್ ಸಂಸ್ಥೆಯ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಜೊತೆಗೆ ಸೈಬರ್ ಕ್ರೈಂ ತಡೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಫೇಸ್‍ಬುಕ್, ಟ್ವಿಟರ್, ವಾಟ್ಸಪ್ ಕಂಪನಿಗಳಿಗೆ ಕಿವಿಗೊಡುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಸೈಬರ್ ಕ್ರೈಂ ವಿಭಾಗ ಮತ್ತಷ್ಟು ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ಇನ್ಫೋಸಿಸ್ ಸಂಸ್ಥೆಯ ತಂತ್ರಜ್ಞರ ನೆರವು ಇಲಾಖೆ ಪಡೆಯಲಿದೆ. ಆನ್‍ಲೈನ್ ವಂಚನೆ ತಡೆಯುವುದು ನಮ್ಮ ಗುರಿ. 22 ಕೋಟಿ ವೆಚ್ಚದಲ್ಲಿ 5 ವರ್ಷ ಕಾಲ ಇನ್ಫೋಸಿಸ್ ಸಂಸ್ಥೆಯವರೇ ತರಬೇತಿ ನೀಡಿ, ನಿರ್ವಹಣೆ ಮಾಡಲಿದ್ದಾರೆ ಎಂದು ವಿವರಿಸಿದರು. 

ಪೊಲೀಸ್ ಇಲಾಖೆ ದಾವಣಗೆರೆ ಕಮೀಷನರೇಟ್ ಮಾಡುವ ಬಗ್ಗೆ ಹಿಂದಿನಿಂದಲೂ ಬೇಡಿಕೆ ಇದೆ. ರಾಜ್ಯದ ಮಹಾ ನಗರ ಪಾಲಿಕೆಗಳಲ್ಲಿ ಕಮೀಷನರೇಟ್ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಕಮೀಷನರೇಟ್ ಮಾಡಲು ಕೆಲ ಮಾನದಂಡಗಳೂ ಇವೆ. ಅವುಗಳನ್ನೆಲ್ಲಾ ಪರಿಶೀಲಿಸಿ, ಸೂಕ್ತವೆನಿಸಿದ್ದು ಕಂಡು ಬಂದರೆ ದಾವಣಗೆರೆ ಕಮೀಷನರೇಟ್ ಮಾಡಲಾಗುವುದು.
-ಎಂ.ಬಿ. ಪಾಟೀಲ್, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News