ಅಂಬರೀಶ್ ಸಚಿವರಾಗಿದ್ದಾಗ ಮನೆಗೆ ಬಂದ ಎಷ್ಟು ಮಂದಿಗೆ ಸುಮಲತಾ 1 ಗ್ಲಾಸ್ ನೀರು ಕೊಟ್ಟಿದ್ದಾರೆ ?
ಮಂಡ್ಯ, ಮಾ.7: ತನ್ನ ಸಂಬಂಧಿ ಅಂಬರೀಶ್ ಕುಟುಂಬದ ವಿರುದ್ಧವೇ ಸಚಿವ ಡಿ.ಸಿ.ತಮ್ಮಣ್ಣ ವಾಗ್ದಾಳಿ ನಡೆಸಿದ್ದು, ಅಂಬರೀಶ್ ಶಾಸಕ ಮತ್ತು ಸಚಿವರು ಆಗಿದ್ದಾಗ ಅವರ ಮನೆಗೆ ಹೋದ ಎಷ್ಟು ಜನಸಾಮಾನ್ಯರನ್ನು ಈಯಮ್ಮ ಮಾತಾಡಿಸಿದ್ದಾರೆ ಎಂದು ಅಂಬರೀಶ್ ಪತ್ನಿ ಸುಮಲತಾ ಅವರನ್ನು ಪ್ರಶ್ನಿಸಿದ್ದಾರೆ.
ಮದ್ದೂರು ತಾಲೂಕು ಕೂಳಗೆ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡುವಂತೆ ಕೋರಿದರು.
ಅಂಬರೀಶ್ ಶಾಸಕ ಹಾಗೂ ಸಚಿವ ಆಗಿದ್ದಾಗ ಅವರ ಮನೆಗೆ ಹೋದ ಎಷ್ಟು ಜನ ಸಾಮಾನ್ಯರನ್ನು ಈಯಮ್ಮ ಮಾತಾಡಿಸಿದ್ದಾರೆ? ಎಷ್ಟು ಜನರಿಗೆ ಒಂದು ಗ್ಲಾಸ್ ಕುಡಿಯಲು ನೀರು ಕೊಟ್ಟು, ನಿಮ್ಮ ಊರು ಯಾವುದು? ಏನು ನಿನ್ನ ಸಮಸ್ಯೆ ಎಂದು ಕೇಳಿದ್ದಾರೆ? ಎಂದು ಅವರು ಪ್ರಶ್ನಿಸಿದರು.
ಇವತ್ತು ಅವರ (ಅಂಬರೀಶ್) ಹೆಸರೇಳಿಕೊಂಡು ಬಂದು ನಾನೇನೋ ಉದ್ದಾರ ಮಾಡುತ್ತೇನೆ ಅಂತಿದ್ದಾರೆ. ಬಣ್ಣದವರ ಮಾತಿಗೆ ಜಿಲ್ಲೆಯ ಜನರು ಯಾರೂ ಬೆರಗು ಆಗೋದು ಬೇಡ. ಯಾರಿಗೆ ಈ ಸಮಾಜದ ಬಗ್ಗೆ ಚಿಂತನೆ ಇದೆ, ಸದಾ ರೈತರ ಬಗ್ಗೆ ಚಿಂತೆ ಮಾಡುತ್ತಾರೆ ಅನ್ನೋದನ್ನು ನೋಡಿ ಎಂದು ಅವರು ಹೇಳಿದರು.
ಯಾರು ನಮಗೆ ಸ್ಪಂದಿಸುತ್ತಾರೆ, ನಮ್ಮ ಜೊತೆಗೆ ನಿಲ್ಲುತ್ತಾರೆ ಎಂಬವರನ್ನು ಆಯ್ಕೆ ಮಾಡಿ. ಬಣ್ಣದ ಮಾತಿಗೆ ಬೆರಗಾಗಿ ನಮ್ಮ ಯುವಕರು ಅಂತಹವರನ್ನು ಆಯ್ಕೆ ಮಾಡಿದರೆ ನಮ್ಮ ಸರ್ವನಾಶಕ್ಕೆ ನಾವೇ ಕಾರಣರಾಗುತ್ತೇವೆ. ಆದ್ದರಿಂದ ರೈತರ ಮಗನಾದ ನಿಖಿಲ್ ಅವರನ್ನು ಭಾರೀ ಅಂತರದಿಂದ ಆಯ್ಕೆ ಮಾಡಿ ಎಂದು ತಮ್ಮಣ್ಣ ಕ್ಷೇತ್ರದ ಮತದಾರರಿಗೆ ಮನವಿ ಮಾಡಿದರು.