ಸುಮಲತಾ ಕುರಿತ ಹೇಳಿಕೆ: ಸಚಿವ ರೇವಣ್ಣ ವಿರುದ್ಧ ಅಂಬರೀಷ್ ಅಭಿಮಾನಿಗಳ ಆಕ್ರೋಶ

Update: 2019-03-08 17:23 GMT

ಮಂಡ್ಯ, ಮಾ.8: ಜಿಲ್ಲೆಯಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಸುಮಲತಾ ಅವರು ಅಂಬರೀಷ್ ಸಚಿವರಾಗಿದ್ದಾಗ ಮನೆಗೆ ಹೋದ ಎಷ್ಟು ಜನರಿಗೆ ನೀರು ಕೊಟ್ಟಿದ್ದರು ಎಂದು ನಿನ್ನೆ ಸಚಿವ ಡಿ.ಸಿ.ತಮ್ಮಣ್ಣ ಟೀಕಿಸಿದ್ದರು. ಶುಕ್ರವಾರ ಸಚಿವ ಎಚ್.ಡಿ.ರೇವಣ್ಣ ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುವಾಗ ಗಂಡ ಸತ್ತು ಒಂದು ತಿಂಗಳಾಗಿಲ್ಲ, ಆಗಲೇ ರಾಜಕೀಯ ಮಾಡುತ್ತಿದ್ದಾರೆಂದು ಹೇಳಿ ಅಂಬರೀಷ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಸಚಿವ ಎಚ್.ಡಿ.ರೇವಣ್ಣ ಅವರ ಈ ವಿವಾದಾತ್ಮಕ ಹೇಳಿಕೆಗೆ ಮಂಡ್ಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ಅಂಬರೀಷ್ ಅವರ ಅಭಿಮಾನಿಯೊಬ್ಬ ಸಿ.ಎಂ.ಕುಮಾರಸ್ವಾಮಿ ಹಾಗು ಎಚ್.ಡಿ ರೇವಣ್ಣ ಅವರನ್ನು ತರಾಟೆಗೆ ತೆಗೆದುಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಿಳಾ ದಿನಾಚರಣೆ ದಿನ ಮಹಿಳೆಯರಿಗೆ ಗೌರವ ಕೊಡುವುದನ್ನು ಕಲಿಯಿರಿ. ಅಂಬರೀಷ್ ಅವರ ಪ್ರತಿರೂಪ ಸುಮಲತಾ. ಮಂಡ್ಯದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕಿತ್ತು. ಅದು ಹೇಗೆ ಗೆಲ್ಲುತ್ತೀರೋ ನೋಡೋಣ ಬನ್ನಿ ಎಂದು ಅಂಬಿ ಅಭಿಮಾನಿಯೊಬ್ಬ ಸಿಎಂ ಹಾಗೂ ಸಚಿವ ರೇವಣ್ಣ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ.

ರೇವಣ್ಣ ಅವರು ದಿನಬೆಳಗಾದರೆ ದೇವರ ಮೊರೆ ಹೋಗುತ್ತಾರೆ. ಪೂಜೆ ಪುನಸ್ಕಾರ ಮಾಡಿ ಚುನಾವಣೆ ಗೆಲ್ಲಬಹುದು ಅಂದುಕೊಂಡಿದ್ದಾರೆ. ಆದರೆ, ಅದೆಲ್ಲಾ ಇಲ್ಲಿ ನಡೆಯುವುದಿಲ್ಲ. ಮಂಡ್ಯದ ಜನರು ಈ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತಾರೆ ಎಂದು ಆತ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News