ನಕ್ಸಲರ ಚಲನವಲನ ಹಿನ್ನೆಲೆ: ಕೊಡಗು ಗಡಿಗಳಲ್ಲಿ ಕಟ್ಟೆಚ್ಚರ

Update: 2019-03-09 14:27 GMT
ಸಾಂದರ್ಭಿಕ ಚಿತ್ರ

ಮಡಿಕೇರಿ, ಮಾ.9: ಕೇರಳದ ವಯನಾಡು, ಚಾಮರಾಜನಗರ ಗಡಿ ಸೇರಿದಂತೆ ಕೊಡಗು-ಕೇರಳ ಗಡಿಗಳಿಗೆ ಹೊಂದಿಕೊಂಡಂತಿರುವ ದಟ್ಟ ಅರಣ್ಯಗಳಲ್ಲಿ ಶಂಕಿತ ನಕ್ಸಲರ ಚಲನವಲನ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಗಡಿ ಭಾಗಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ. 

ಕೇರಳದ ವಯನಾಡಿನ ಅರಣ್ಯದಲ್ಲಿ ಶಂಕಿತ ನಕ್ಸಲರು ಮತ್ತು ಕೇರಳ ನಕ್ಸಲ್ ನಿಗ್ರಹ ದಳದ ಥಂಡರ್ ಬೋಲ್ಟ್ ಕಮಾಂಡೊಗಳ ನಡುವೆ ಪರಸ್ಪರ ಗುಂಡಿನ ಚಕಮಕಿ ನಡೆದಿದೆ ಎನ್ನಲಾಗುತ್ತಿದೆ. ಗುಂಡಿನ ಚಕಮಕಿಯ ಬಳಿಕ ನಕ್ಸಲರು ತಪ್ಪಿಸಿಕೊಂಡಿದ್ದು, ಕೊಡಗು ಜಿಲ್ಲೆಯ ಕಡೆ ನುಸುಳುವ ಸಾಧ್ಯತೆಯಿದೆ ಎಂದು ರಾಜ್ಯ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. 

ನಕ್ಸಲ್ ನಿಗ್ರಹ ದಳದ 2 ತಂಡಗಳ 60 ಶಸ್ತ್ರಸಜ್ಜಿತ ಸಿಬ್ಬಂದಿಗಳು ಮತ್ತು ಪೊಲೀಸ್ ಸಶಸ್ತ್ರ ದಳದ ಸಿಬ್ಬಂದಿಗಳು ಕೂಂಬಿಂಗ್ ನಡೆಸುತ್ತಿದ್ದು, ಜಿಲ್ಲೆಯ ಗಡಿ ಭಾಗಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ. ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದ ಬರುವ ವಾಹನಗಳನ್ನು ಕೂಡ ಚೆಕ್‍ಪೋಸ್ಟ್ ಗಳಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಭಾಗಮಂಡಲ, ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಗಳು ನೆರೆಯ ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವುದರಿಂದ ಇಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಮಾತ್ರವಲ್ಲದೆ, ವಿರಾಜಪೇಟೆಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಕುಟ್ಟದಿಂದ ದಕ್ಷಿಣ ಕೊಡಗಿನ ಕುಟ್ಟದವರೆಗೆ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ. 

ಚುನಾವಣೆ ಸಂದರ್ಭ ಕರ್ನಾಟಕದ ಗಡಿ ಭಾಗಗಳಲ್ಲಿ ನಕ್ಸಲರ ಹೆಜ್ಜೆ ಗುರುತುಗಳು ಕಂಡು ಬರಲಿವೆ ಎಂದು ರಾಜ್ಯ ಗುಪ್ತದಳ ಮಾಹಿತಿ ನೀಡಿರುವ ಹಿನ್ನಲೆಯಲ್ಲಿ ಕಳೆದ 15  ದಿನಗಳಿಂದ ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೂಂಬಿಂಗ್ ನಡೆಸಲಾಗುತ್ತಿದೆ. ಭಾಗಮಂಡಲ ಮತ್ತು ವಿರಾಜಪೇಟೆಯ ಆರ್ಜಿ ನಕ್ಸಲ್ ನಿಗ್ರಹ ದಳದ ಸಿಬ್ಬಂದಿಗಳು ನಾಪೋಕ್ಲುವಿನ ನಾಲಾಡಿ, ಕಕ್ಕಬ್ಬೆ, ಇರ್ಪು, ಚೇಲಾವರ, ಗಾಳಿಬೀಡು, ಸಂಪಾಜೆ, ಕರಿಕೆ, ಚೇಂಬೇರಿ, ಪಾಣತ್ತೂರು ಸೇರಿದಂತೆ ಕೊಡಗು ಗಡಿಯಲ್ಲಿ ಬಿರುಸಿನ ಶೋಧ ನಡೆಸುತ್ತಿದ್ದಾರೆ. ಕೊಡಗು ಜಿಲ್ಲೆಯ ಸುಮಾರು 200 ಕಿ.ಮೀ. ವ್ಯಾಪ್ತಿಯಲ್ಲಿ ಸಮಾಜ ಘಾತುಕ ಕೃತ್ಯಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೂಂಬಿಂಗ್ ನಡೆಸಲಾಗುತ್ತಿದೆ.

ಈ ಹಿಂದೆ ಶಂಕಿತ ನಕ್ಸಲರ ತಂಡ ಅತ್ಯಾಧುನಿಕ ಶಸ್ತ್ರಗಳೊಂದಿಗೆ ಕಾಲೂರು, ಸಂಪಾಜೆ, ನಾಲಾಡಿ ವ್ಯಾಪ್ತಿಯಲ್ಲಿ ಪ್ರತ್ಯಕ್ಷರಾಗಿ ಕೊಡಗು ಜಿಲ್ಲೆಯಲ್ಲೂ ಕಾಣಿಸಿಕೊಂಡಿದ್ದರು. ಕುಗ್ರಾಮಗಳ ಒಂಟಿ ಮನೆಗಳಿಗೆ ನುಗ್ಗಿ ತಮ್ಮನ್ನು ನಕ್ಸಲರು ಎಂದು ಪರಿಚಯಿಸಿಕೊಂಡಿದ್ದರು. ಬಳಿಕ ಮನೆ ಮಂದಿಯನ್ನು ಬೆದರಿಸಿ, ಮನೆಯಲ್ಲಿಯೇ ಊಟ ಮಾಡಿ, ದಿನಸಿ ಪದಾರ್ಥಗಳನ್ನು ಹೊತ್ತೊಯ್ದಿದ್ದರು. ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ಈ ಕುರಿತು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳೂ ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದೀಗ ಮತ್ತೆ ನಕ್ಸಲರು ಜಿಲ್ಲೆಯ ಗಡಿಭಾಗದ ಮೂಲಕ ನುಸುಳುವ ಮುನ್ಸೂಚನೆ ದೊರೆತಿರುವುದರಿಂದ ಸಹಜವಾಗಿಯೇ ಗ್ರಾಮೀಣ ಭಾಗದಲ್ಲಿ ಆತಂಕ ಹೆಚ್ಚಾಗಿದೆ. ಜಿಲ್ಲೆಯ ಎಲ್ಲಾ ಚೆಕ್‍ಪೋಸ್ಟ್ ಗಳಲ್ಲಿ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News