ರೇವಣ್ಣ ಹೇಳಿಕೆಯಿಂದ ಗೌಡ ಜಾತಿಗೆ, ಭಾರತೀಯ ಸಂಸ್ಕೃತಿಗೆ ಅಗೌರವ: ಮಾಜಿ ಸಚಿವ ಎ.ಮಂಜು
ಮಂಡ್ಯ,ಮಾ.9: ಮಂಡ್ಯದವರು ಸ್ವಾಭಿಮಾನಿಗಳಾಗಬೇಕು. ಸ್ಥಳೀಯರಿಗೆ ಒತ್ತು ಕೊಟ್ಟರೆ ಮಂಡ್ಯದ ಗೌರವ ಹೆಚ್ಚುತ್ತದೆ ಎಂದು ಮಾಜಿ ಸಚಿವ ಎ.ಮಂಜು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಟುಂಬ ರಾಜಕಾರಣದ ವಿರುದ್ಧ ಬೆಳೆದವರು ದೇವೇಗೌಡರು. ಈಗ ಕುಟುಂಬ ಬಿಟ್ಟು ರಾಜಕಾರಣ ಮಾಡಲಾಗಲ್ಲ ಎನ್ನುತ್ತಾರೆ. ಅಂಬಿಯಿಂದ ಹೆಚ್ಚು ಸಹಾಯ ಆಗಿರುವುದೇ ಜೆಡಿಎಸ್ಗೆ. ಅಂತವರೇ ಅಂಬಿ ವಿರುದ್ಧ ಮಾತಾಡುತ್ತಾರೆ. ಸುಮಲತಾ ಮಂಡ್ಯ ಗೌಡ್ತಿ ಅಲ್ಲ ಅನ್ನುತ್ತಾರೆ ಎಂದು ಟೀಕಿಸಿದರು.
ರೇವಣ್ಣ ಹೆಣ್ಣಿನ ಬಗ್ಗೆ ಸಣ್ಣತನದ ಹೇಳಿಕೆ ಕೊಡುತ್ತಾರೆ. ಇದು ನಮ್ಮ ಗೌಡ ಜಾತಿಗೆ, ಭಾರತೀಯ ಸಂಸ್ಕೃತಿಗೆ ಅಗೌರವ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸ್ಥಳೀಯರಿಗೆ ಟಿಕೆಟ್ ಕೊಡಿಸುವ ಬದಲು ಸಿನಿಮಾ ಟಿಕೆಟ್ ಕೊಡಿಸ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ದೇವೇಗೌಡರ ಫ್ಯಾಮಿಲಿಯ ರಾಜಕೀಯ ಉದ್ಧಾರಕ್ಕಾಗಿ ಮೈತ್ರಿಯಾಗಬೇಕು. ನಿಖಿಲ್ಗೆ ರಾಜಕೀಯ ಪ್ರಬುದ್ಧತೆ ಇಲ್ಲ. ಅವರಪ್ಪ ಸಿಎಂ, ತಾತ ಮಾಜಿ ಪ್ರಧಾನಿ. ಸೇವೆ ಮಾಡಲು ಅಷ್ಟೇ ಸಾಕು, ಅಧಿಕಾರ ಬೇಕಾಗಿಲ್ಲ. ಅಂಬರೀಶ್ ಪಾರ್ಥಿವ ಶರೀರ ತಂದಿದ್ದೇ ರಾಜಕೀಯ ಲಾಭಕ್ಕಾಗಿ. ಅಂಬಿ ನುಡಿ ನಮನಕ್ಕೆ ಸಾಮೂಹಿಕವಾಗಿ ಗೈರಾಗಿದ್ದರು. ಆ ಮೂಲಕ ರಾಜಕೀಯ ಉದ್ದೇಶಕ್ಕಾಗಿ ಅನ್ನೋದನ್ನು ಸಾಬೀತು ಮಾಡಿದರು ಎಂದರು. ಅಂಬಿ ಪಾರ್ಥಿವ ಶರೀರ ತಂದಿದ್ದು ನಾನೇ ಎಂಬ ಸಿಎಂ ಹೇಳಿಕೆಯನ್ನು ಅಲ್ಲಗೆಳೆದ ಅವರು, ಅದು ಅವರ ಕುಟುಂಬದ ತೀರ್ಮಾನ ಹೊರತು ಸಿಎಂ ಪಾತ್ರವಿಲ್ಲ ಎಂದು ಕುಟುಕಿದರು.
ನಿಖಿಲ್ನಿಂದ ಅಭಿವೃದ್ಧಿ ಸಾಧ್ಯ ಎಂಬ ವಿಚಾರದ ಕುರಿತು ಮಾತನಾಡಿದ ಅವರು, ಕ್ಷೇತ್ರದಲ್ಲಿರುವ ಮೂವರು ಸಚಿವರು ರಾಜೀನಾಮೆ ನೀಡಲಿ. ಅವರೆಲ್ಲ ಅಸಮರ್ಥರು ಅನ್ನೋದನ್ನು ಒಪ್ಪಿಕೊಂಡಂತಾಗಿದೆ. ಹಾಸನದಲ್ಲಿ ದೇವೇಗೌಡ ಸ್ಪರ್ಧಿಸಿದರೆ ಮಾತ್ರ ನಮ್ಮ ಬೆಂಬಲ ಎಂದರು.