ಶಾಸಕ ರವೀಂದ್ರ ನಿವಾಸಕ್ಕೆ ಅನಿತಾ ಕುಮಾರಸ್ವಾಮಿ, ನಿಖಿಲ್ ಭೇಟಿ

Update: 2019-03-10 17:47 GMT

ಮಂಡ್ಯ, ಮಾ.10: ಅನಿತಾ ಕುಮಾರಸ್ವಾಮಿ ಅತೃಪ್ತ ಸ್ವಪಕ್ಷೀಯ ಶಾಸಕನ ಮನವೊಲಿಕೆಗೆ ಮುಂದಾಗಿದ್ದು, ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ನಿವಾಸಕ್ಕೆ ಪುತ್ರ ನಿಖಿಲ್, ಜೆಡಿಎಸ್ ಮಂಡ್ಯ ಜಿಲ್ಲಾಧ್ಯಕ್ಷ ಡಿ.ರಮೇಶ್ ಜೊತೆ ರವಿವಾರ ತೆರಳಿ ಮಾತುಕತೆ ನಡೆಸಿದರು. ಬೆಳಗ್ಗೆ ಭೇಟಿ ನೀಡಿ, ಸುಮಾರು ಎರಡು ಗಂಟೆ ಚರ್ಚೆ ಮಾಡಿ ಬಂಡಾಯ ಶಮನಕ್ಕೆ ಮುಂದಾಗಿದ್ದಾರೆ.

ರವೀಂದ್ರ ಶ್ರೀಕಂಠಯ್ಯ ಅನುದಾನ ಹಂಚಿಕೆ ತಾರತಮ್ಯ, ಕೆ.ಆರ್.ಎಸ್ ನಿವಾಸಿಗಳಿಗೆ ಹಕ್ಕುಪತ್ರ ನೀಡದ ಕುರಿತು ಅಸಮಾಧಾನಗೊಂಡಿದ್ದರು. ಹೀಗಾಗಿ ಕಳೆದ ವಾರ ನಡೆದ ಸಿಎಂ ಕಾರ್ಯಕ್ರಮಕ್ಕೆ ಗೈರುಹಾಜರಾಗಿ ಅಸಮಾಧಾನ ಹೊರ ಹಾಕಿದ್ದರು.

ಜೆಡಿಎಸ್ ನಾಯಕರಿಂದಲೂ ಅಂತರ ಕಾಯ್ದುಕೊಂಡಿದ್ದ ರವೀಂದ್ರ ಶ್ರೀಕಂಠಯ್ಯರ ನಡೆಯಿಂದ ಪಕ್ಷಕ್ಕೆ ಹಾನಿಯಾಗಬಹುದು ಎಂದು ಅಂದಾಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವಪಕ್ಷೀಯ ಶಾಸಕನ ಅತೃಪ್ತಿ ಶಮನಕ್ಕೆ ಅನಿತಾ ಕುಮಾರಸ್ವಾಮಿ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ಅನೌಪಚಾರಿಕವಾಗಿ ಮನೆಗೆ ಆಗಮಿಸಿದ್ದ ಅನಿತಾ ಕುಮಾರಸ್ವಾಮಿ, ನಿಖಿಲ್ ಅವರ ಜತೆ ಲೋಕಸಭಾ ಚುನಾವಣೆಯ ರೂಪುರೇಷೆಗಳ ಬಗ್ಗೆ ಕೆಲ ಹೊತ್ತು ಮಾತನಾಡಿದ್ದಾಗಿ ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News