ಯಾರಿಗೆ ಟಿಕೆಟ್ ನೀಡಿದರೂ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮ: ಶೋಭಾ ಕರಂದ್ಲಾಜೆ

Update: 2019-03-11 12:30 GMT

ಚಿಕ್ಕಮಗಳೂರು, ಮಾ.11: ಉಡುಪಿ -ಚಿಕ್ಕಮಗಳೂರು ಲೋಕಸಭೆ ಚುನಾವಣಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯೇ ಗೆಲುವು ಸಾಧಿಸಲಿದ್ದು, ಈ ಕಾರಣಕ್ಕೆ ತನ್ನಂತೆಯೇ ಇತರರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಇದರಲ್ಲಿ ತಪ್ಪೇನೂ ಇಲ್ಲ. ವರಿಷ್ಠರು ಯಾರಿಗೆ ಟಿಕೆಟ್ ನೀಡುತ್ತಾರೋ ಅವರ ಗೆಲುವಿಗೆ ಎರಡೂ ಜಿಲ್ಲೆಗಳ ಬಿಜೆಪಿ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಲಿದ್ದಾರೆಂದು ಹಾಲಿ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ನಾನು ಹಾಗೂ ಜಯಪ್ರಕಾಶ್ ಹೆಗ್ಡೆ ಟಿಕೆಟ್ ಆಕಾಂಕ್ಷಿಯಾಗಿದ್ದೇವೆ. ನಮ್ಮಿಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂಬುದನ್ನು ವರಿಷ್ಠರು ತೀರ್ಮಾನಿಸಲಿದ್ದಾರೆ. ಈ ಬಗ್ಗೆ ಕ್ಷೇತ್ರ ವ್ಯಾಪ್ತಿಯ ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಟಿಕೆಟ್ ಆಕಾಂಕ್ಷಿಯಾಗಿರುವ ಜಯಪ್ರಕಾಶ್ ಹೆಗ್ಡೆ ಬಿಜೆಪಿಯವರೇ ಆಗಿರುವುದರಿಂದ ಕ್ಷೇತ್ರದಲ್ಲಿ ಸಭೆ, ಪ್ರಚಾರ, ಮುಖಂಡರೊಂದಿಗೆ ಚರ್ಚೆ ನಡೆಸಿದರೆ ಅದರಲ್ಲಿ ತಪ್ಪೇನೂ ಇಲ್ಲ. ವರಿಷ್ಠರು ಅವರಿಗೆ ಟಿಕೆಟ್ ನೀಡಿದರೆ ಅವರ ಗೆಲುವಿಗಾಗಿ ನಾನು ಕೆಲಸ ಮಾಡಲು ಸಿದ್ಧನಿದ್ದೇನೆ. ತನಗೆ ಟಿಕೆಟ್ ನೀಡಿದಲ್ಲಿ ಹೆಗ್ಡೆ ಅವರು ನನ್ನ ಗೆಲುವಿಗೆ ಶ್ರಮಿಸಲಿದ್ದಾರೆ ಎಂದ ಅವರು, ಟಿಕೆಟ್ ಸಿಗದಿದ್ದಾಗ ಪಕ್ಷ ವಿರೋಧಿ ಚಟುವಟಿಕೆ ನಡೆಸುವುದು ತಪ್ಪು ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಗೋಬ್ಯಾಕ್ ಶೋಭಾ ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ಶೋಭಾ, ಇದು ಅತೃಪ್ತರ ಕೆಲಸವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗುವುದಿಲ್ಲ ಎಂಬುದು ಗೊತ್ತಾದ ಕಾರಣಕ್ಕೆ ಹತಾಶೆಯಿಂದ ತನ್ನ ವಿರುದ್ಧ ಅಪಪ್ರಚಾರ ಮಾಡಲು ಇಂತಹ ಪೋಸ್ಟ್ ಗಳನ್ನು ಹರಿಯಬಿಟ್ಟಿದ್ದಾರೆ. ಇಂತಹ ಪಕ್ಷ ವಿರೋಧಿ ಚಟುವಟಿಕೆಗಳನ್ನು ಪಕ್ಷದ ವರಿಷ್ಠರು ಗಮನಿಸುತ್ತಿದ್ದು, ಅಂತವರ ವಿರುದ್ಧ ಶಿಸ್ತುಕ್ರಮವಾಗಲಿದೆ ಎಂದರು.

ಈ ಬಾರಿ ಪಕ್ಷದ ಮತ್ತೆ ತನಗೆ ಟಿಕೆಟ್ ನೀಡಿದಲ್ಲಿ ರಾಜ್ಯದ ಅಭಿವೃದ್ಧಿ ಗುರಿಯೇ ತನ್ನ ಅಜೆಂಡಾವಾಗಿರಲಿದೆ. ರಾಜ್ಯಕ್ಕೆ ವಿವಿಧ ಯೋಜನೆಗಳಡಿಯಲ್ಲಿ ಹೆಚ್ಚು ಅನುದಾನ ಬಿಡುಗಡೆಯಾಗುವಂತೆ ಮಾಡುವುದು, ನೆನೆಗುದಿಗೆ ಬಿದ್ದ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸುವುದು, ದೇಶದ ಭದ್ರತೆ, ಬರಗಾಲ ಪೀಡಿತ ಪ್ರದೇಶಗಳಿಗೆ ಕೇಂದ್ರದಿಂದ ಹೆಚ್ಚು ನೆರವು ಒದಗಿಸುವುದು ತನ್ನ ಆದ್ಯತೆಯಾಗಿರಲಿದೆ ಎಂದ ಅವರು, ಇವುಗಳ ಆಧಾರದ ಮೇಲೆ ಮತಯಾಚನೆ ಮಾಡುವುದಾಗಿ ತಿಳಿಸಿದರು.

ಸಂಸದೆಯಾಗಿದ್ದ ಅವಧಿಯಲ್ಲಿ ಮಾಡಿದ ಕೆಲಸದ ಬಗ್ಗೆ ತೃಪ್ತಿ ಇದೆ. ಈ ಅವಧಿಯಲ್ಲಿ ಕೇಂದ್ರ ಸರಕಾರ ನೀಡಿದ ಗುರುತರ ಜವಬ್ದಾರಿಯಿಂದಾಗಿ ಕ್ಷೇತ್ರಕ್ಕೆ ಹೆಚ್ಚು ಭೇಟಿ ನೀಡಲು ಸಾಧ್ಯವಾಗಿಲ್ಲ, ಆದರೆ ತನ್ನ ಅವಧಿಯಲ್ಲಿ ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೈಗೊಂಡಿರುವು ತೃಪ್ತಿ ತಂದಿದೆ ಎಂದ ಅವರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇಂದ್ರದ ಮುದ್ರಾ ಯೋಜನೆಯಡಿ ಫಲಾನುಭವಿಗಳಿಗೆ ಸಾಲಸೌಲಭ್ಯ ನೀಡಲು ಬ್ಯಾಂಕ್‍ಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಹಿನ್ನಡೆಯಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಜೀವರಾಜ್, ಶಾಸಕ ಡಿ.ಎಸ್.ಸುರೇಶ್, ಕಾಫಿ ಮಂಡಳಿ ಅಧ್ಯಕ್ಷ ಬೋಜೇಗೌಡ, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಉಪಾಧ್ಯಕ್ಷ ಕೆ.ಆರ್.ಆನಂದಪ್ಪ, ಸದಸ್ಯರಾದ ವಿಜಯ್‍ ಕುಮಾರ್, ಜಸಂತಾ ಅನಿಲ್, ಮುಖಂಡರಾದ ಪ್ರೇಮ್‍ ಕುಮಾರ್, ತಮ್ಮಯ್ಯ, ವರಸಿದ್ದಿ ವೇಣುಗೋಪಾಲ್, ರವಿ, ರಾಜಪ್ಪ, ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.

ಹಿಂದಿನ ಯುಪಿಎ ಸರಕಾರ ಅಡಿಕೆ ಬೆಳೆ ಕ್ಯಾನ್ಸರ್ ಕಾರಕ ಎಂದು ಸು.ಕೋ.ಗೆ ಅಫಿದವಿತ್ ಸಲ್ಲಿಸಿದ ಪರಿಣಾಮ ಅಡಿಕೆ ಬೆಳೆಗಾರರ ಸಮಸ್ಯೆ ಬಗೆಹರಿದಿಲ್ಲ. ಆದರೆ ಕೇಂದ್ರದ ಬಿಜೆಪಿ ಸರಕಾರ ಈ ಸಮಸ್ಯೆಗೆ ಪರಿಹಾರ ಒದಗಿಸಲು ಪ್ರಯತ್ನಿಸಿದೆ. ಅಡಿಕೆ ಬೆಳೆ ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂಬುದನ್ನು ರಾಜ್ಯಸ ಸಂಸದರು ಪ್ರಧಾನಿ ಮೋದಿ ಅವರಿಗೆ ಮನವರಿಕೆ ಮಾಡಿದ್ದು, ಮೋದಿ ಅವರೂ ಇದನ್ನು ಒಪ್ಪಿದ್ದಾರೆ. ಅಡಿಕೆ ಬೆಳೆಗಾರರಿಗೆ ತೊಂದರೆಯಾಗದಂತೆ ವಾದಿಸಲು ನ್ಯಾಯಾಲಯದಲ್ಲಿ ಸಮರ್ಥ ವಕೀಲರನ್ನೇ ಕೇಂದ್ರ ಸರಕಾರ ನೇಮಿಸಿದೆ.
-  ಶೋಭಾ ಕರಂದ್ಲಾಜೆ

ಕಸ್ತೂರಿ ರಂಗನ್ ವರದಿ ಜಾರಿಗೆ ರಾಜ್ಯ ಸರಕಾರವೇ ಕಾರಣ. ಸುಪ್ರೀಂ ಕೋರ್ಟ್‍ನ ಸೂಚನೆಯಂತೆ ರಾಜ್ಯ ಸರಕಾರ ಮಲೆನಾಡಿನಲ್ಲಿ ಸರ್ವೇ ಕಾರ್ಯ ಕೈಗೊಳ್ಳದಿರುವುದೇ ನ್ಯಾಯಾಲಯ ಇಂತಹ ಆದೇಶ ನೀಡಲು ಕಾರಣವಾಗಿದೆ. ಕೇರಳ ಸರಕಾರ ನ್ಯಾಯಾಲಯದ ಆದೇಶದಂತೆ ಸರ್ವೇ ವರದಿ ನೀಡಿದ್ದರಿಂದ ಕಸ್ತೂರಿ ರಂಗನ್ ವರದಿ ಜಾರಿಯ ಆತಂಕದಿಂದ ಕೇರಳ ಪಾರಾಗಿದೆ. ಆದರೆ ರಾಜ್ಯದಲ್ಲಿ ಸೂಕ್ತ ಸರ್ವೇ ವರದಿ ನೀಡದಿರುವುದೇ ವರದಿ ಜಾರಿಗೆ ಕಾರಣವಾಗಿದೆ. ರಾಜ್ಯ ಸರಕಾರ ಮಲೆನಾಡು ಭಾಗದಲ್ಲಿ ಬಿಜೆಪಿ ಸಂಸದರಿರುವ ಕಾರಣಕ್ಕೆ ಬಿಜೆಪಿಗೆ ಕೆಟ್ಟ ಹೆಸರು ಬರಲಿ ಎಂಬ ಕಾರಣಕ್ಕೆ ಸರ್ವೇ ವರದಿ ನೀಡಿಲ್ಲ.
- ಶೋಭಾ ಕರಂದ್ಲಾಜೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News