ವಸತಿ ಶಾಲೆಯಲ್ಲಿ ಕಲುಷಿತ ನೀರು ಸೇವನೆ: ಮಕ್ಕಳು ಅಸ್ವಸ್ಥ
ಮಂಡ್ಯ, ಮಾ.11: ಮದ್ದೂರು ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ರವಿವಾರ ರಾತ್ರಿ ಕಲುಷಿತ ನೀರು ಮತ್ತು ಆಹಾರ ಸೇವಿಸಿ ಹಲವು ಮಕ್ಕಳು ಅಸ್ವಸ್ಥಗೊಂಡು ಪಟ್ಟಣದ ಗುರುಶಾಂತಪ್ಪ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ರಾತ್ರಿ ಬೇರೆ ಕಡೆಯಿಂದ ಕುಡಿಯಲು ಶುದ್ಧ ಕುಡಿಯುವ ನೀರು ತರಲಾಗಿತ್ತು. ಆದರೆ, ಮಕ್ಕಳು ಹೆಚ್ಚಿಗೆ ಇದ್ದ ಕಾರಣ ನೀರು ಸಾಕಾಗದೆ ವಸತಿ ಶಾಲೆಯಲ್ಲಿರುವ ಟ್ಯಾಂಕ್ನ ನೀರು ಕುಡಿದ ಪರಿಣಾಮ ಮತ್ತು ಕೋಳಿ ಊಟ ಮಾಡಿ ಅಧಿಕ ಉಷ್ಣ ಉಂಟಾದ ಪರಿಣಾಮ ವಿದ್ಯಾರ್ಥಿಗಳು ಅಸ್ವಸ್ಥಗೊಂಡರು. ನಂತರ ತೀವ್ರವಾಗಿ ಅಸ್ವಸ್ಥಗೊಂಡು 4 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲಾಯಿತು. ಯಾರಿಗೂ ಹೆಚ್ಚಿನ ಮಟ್ಟದಲ್ಲಿ ಆರೋಗ್ಯ ಸಮಸ್ಯೆಯಾಗಿಲ್ಲ ಎಂದು ತಿಳಿದುಬಂದಿದೆ.
ಪೋಷಕರು ಆಕ್ರೋಶ: ಇಷ್ಟೆಲ್ಲ ಘಟನೆ ನಡೆದರು ವಸತಿ ಶಾಲೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಈ ಬಗ್ಗೆ ನಮ್ಮ ಗಮನಕ್ಕೆ ತಂದಿಲ್ಲ ಮತ್ತು ದೂರವಾಣಿ ಕರೆ ಮಾಡಿದರು ನಮಗೆ ತಿಳಿಸಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.