ಚಿಕ್ಕಮಗಳೂರು: ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಬರ್ಬರ ಹತ್ಯೆ

Update: 2019-03-12 12:04 GMT

ಚಿಕ್ಕಮಗಳೂರು, ಮಾ.12: ಯುವಕರ ಗುಂಪೊಂದು ಯುವಕನ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತರೀಕೆರೆ ಪಟ್ಟಣದ ಗಣಪತಿ ಪೆಂಡಾಲ್ ಬಳಿ ಸೋಮವಾರ ರಾತ್ರಿ ವರದಿಯಾಗಿದೆ.  ಅರುಣ್‍ ಕುಮಾರ್(23) ಹತ್ಯೆಯಾದ ಯುವಕ ಎಂದು ಪೊಲೀಸರು ಗುರುತಿಸಿದ್ದಾರೆ.

ಅರುಣ್‍ ಕುಮಾರ್ ತರೀಕೆರೆ ಪಟ್ಟಣದ ಕನಮನಹಟ್ಟಿ ಬಡಾವಣೆಯ ನಿವಾಸಿ ಎಂದು ತಿಳಿದುಬಂದಿದ್ದು, ಇತ್ತೀಚೆಗೆ ಕನಮನಹಟ್ಟಿಯಲ್ಲಿ ನಡೆದ ಜಾತ್ರೆ ಸಂದರ್ಭ ಅರುಣ್‍ ಕುಮಾರ್ ಹಾಗೂ ಕೆಲ ಯುವಕರ ನಡುವೆ ಜಗಳ ನಡೆದಿತ್ತು. ಈ ಘಟನೆಯ ದ್ವೇಷದಿಂದಲೇ ಮೂರರಿಂದ ನಾಲ್ವರು ಅಪರಿಚಿತ ಯುವಕರ ಗುಂಪು ಸೋಮವಾರ ರಾತ್ರಿ ಅರುಣ್‍ ಕುಮಾರ್ ನನ್ನು ಪಟ್ಟಣದ ಗಣಪತಿ ಪೆಂಡಾಲ್ ಬಳಿ ಅಡ್ಡಗಟ್ಟಿದೆ. ಈ ವೇಳೆ ಅರುಣ್‍ ಕುಮಾರ್ ಗೆ ಥಳಿಸಿದ ಯುವಕರ ಗುಂಪು ನೆಲಕ್ಕೆ ಕೆಡವಿಕೊಂಡು ಆತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅರುಣ್‍ನನ್ನು ಕೂಡಲೇ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ತೀವ್ರ ರಕ್ತಸ್ರಾವದಿಂದ ಮಾರ್ಗಮಧ್ಯೆ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.

ಶಿವಮೊಗ್ಗದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಆತನ ಕುಟುಂಬಕ್ಕೆ ಮೃತದೇಹ ಹಸ್ತಾಂತರಿಸಲಾಗಿದೆ. ಘಟನೆ ಬಳಿಕ ಹತ್ಯೆ ಆರೋಪಿಗಳು ನಾಪತ್ತೆಯಾಗಿದ್ದಾರೆಂದು ತಿಳಿದು ಬಂದಿದ್ದು, ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆಂದು ತಿಳಿದು ಬಂದಿದೆ.

ಯುವಕ ಅರುಣ್ ಹತ್ಯೆ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆರೋಪಿಗಳ ಪತ್ತೆಗೆ ಪೊಲೀಸರ ಎರಡು ತಂಡಗಳನ್ನು ನೇಮಿಸಲಾಗಿದೆ. ಹತ್ಯೆಗೆ ವೈಯಕ್ತಿಕ ದ್ವೇಷ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News