ಬಟ್ಟೆ ತೊಳೆಯಲು ಹೋಗಿದ್ದ ಬಾಲಕಿಯರಿಬ್ಬರು ಕೆರೆಗೆ ಬಿದ್ದು ಮೃತ್ಯು

Update: 2019-03-12 13:09 GMT

ಎನ್.ಆರ್.ಪುರ, ಮಾ.11: ತಾಲೂಕಿನ ಮುತ್ತಿನಕೊಪ್ಪ ಗ್ರಾ.ಪಂ ವ್ಯಾಪ್ತಿಯ ಆಲ್ದಾರ ಗ್ರಾಮದಲ್ಲಿ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ಇಬ್ಬರು ಬಾಲಕಿಯರು ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆಲ್ದಾರ ಗ್ರಾಮದ ಶಿಲ್ಪಾ(17) ಹಾಗೂ ತೇಜಸ್ವಿನಿ(7) ಮೃತರು. ಕಳೆದ ರವಿವಾರ ಸಂಜೆ ವೇಳೆಯಲ್ಲಿ ಮನೆ ಸಮೀಪದ ಕೆರೆಯಲ್ಲಿ ಬಟ್ಟೆ ತೊಳೆಯಲ ಶಿಲ್ಪಾ ಹಾಗೂ ತೇಜಸ್ವಿನಿ ತೆರಳಿದ್ದರು. ಈ ವೇಳೆ ತೇಜಸ್ವಿನಿ ಕೆರೆಗೆ ಇಳಿದು ನೀರಿನಲ್ಲಿ ಮುಳುಗಿ ಒದ್ದಾಡುತ್ತಿದ್ದುದನ್ನು ಕಂಡ ಶಿಲ್ಪಾ ಆಕೆಯನ್ನು ರಕ್ಷಿಸಲು ನೀರಿಗಿಳಿದಿದ್ದಳು. ಈ ವೇಳೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. 

ಬಟ್ಟೆ ತೊಳೆಯಲು ಹೋದ ಸಹೋದರಿಯರಿಬ್ಬರು ತುಂಬಾ ಹೊತ್ತು ಕಳೆದರೂ ಮನೆಗೆ ಮರಳಿರಲಿಲ್ಲ. ಗದ್ದೆಯಲ್ಲಿ ದನ ಮೇಯಿಸುತ್ತಿದ್ದವರು ಕೆರೆಯ ಬಳಿ ಆಗಮಿಸಿದಾಗ ಕೆರೆಯಲ್ಲಿ ಬಟ್ಟೆ ತೇಲುತ್ತಿರುವುದನ್ನು ಕಂಡು ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. 

ಸ್ಥಳಕ್ಕೆ ಕುಟುಂಬದವರು ಬಂದು ನೋಡಿದಾಗ ಮಕ್ಕಳಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು ಕಂಡು ಬಂದಿದೆ. ಮೃತರು ಆಲ್ದಾರ ಗ್ರಾಮದ ವಾಗು ಮತ್ತು ಅಮ್ಮು ಎಂಬ ಸಹೋದರರ ಪುತ್ರಿಯರಾಗಿದ್ದಾರೆ. ಘಟನೆ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News