ನನ್ನ ಗೆಲುವಿಗೆ ಸಿದ್ದರಾಮಯ್ಯನವರೇ ಆನೆ ಬಲ: ಸಂಸದ ಆರ್.ಧ್ರುವನಾರಾಯಣ್

Update: 2019-03-13 17:06 GMT

ಮೈಸೂರು,ಮಾ.13: ನನ್ನ ಗೆಲುವಿಗೆ ಕಾಂಗ್ರೆಸ್ ಪಕ್ಷವೇ ದೊಡ್ಡ ಆಸ್ತಿ, ಸಿದ್ದರಾಮಯ್ಯನವರೆ ನನಗೆ ಆನೆ ಬಲ, ನಾನು ಮಾಡಿರುವ ಕೆಲಸಗಳೇ ನನಗೆ ಶ್ರೀರಕ್ಷೆ ಎಂದು ಸಂಸದ ಆರ್.ಧ್ರುವನಾರಾಯಣ್ ತಿಳಿಸಿದರು.

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗತೆ ಮಾತನಾಡಿದ ಅವರು, ಇತ್ತೀಚೆಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಧ್ರುವ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡುತ್ತೇವೆ ಎಂಬ ಹೇಳಿಕೆ ನೀಡಿದ್ದ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ನನ್ನ ಗೆಲುವಿಗೆ ಕಾಂಗ್ರೆಸ್ ಪಕ್ಷವೇ ದೊಡ್ಡ ಆಸ್ತಿ, ನನ್ನ ಬೆನ್ನಿಗೆ ಸಿದ್ದರಾಮಯ್ಯ ಇದ್ದಾರೆ. ಅವರು ಆನೆ ಬಲ ಇದ್ದಹಾಗೆ, ನಾನು ಮಾಡಿರುವ ಕೆಲಸ ನನಗೆ ಶ್ರೀರಕ್ಷೆ, ನಾನು ಸಂಸದನಾದ ದಿನದಿಂದಲೂ ಒಂದು ದಿನವೂ ಕಾಲ ವ್ಯರ್ಥ ಮಾಡಿಲ್ಲ. ನನ್ನ ಕ್ಷೇತ್ರದ ಜನರಿಗೆ ತಲುಪಬೇಕಾದ ಅನುದಾನವನ್ನು ಪ್ರಾಮಾಣಿಕವಾಗಿ ತಲುಪಿಸಿದ್ದೇನೆ. ನನ್ನ ಕ್ಷೇತ್ರದ ಜನ ಪ್ರಭುದ್ದರು, ಅವರು ನನ್ನನ್ನು ಈ ಬಾರಿ 2 ಲಕ್ಷಕ್ಕೂ ಅತ್ಯಧಿಕ ಮತಗಳಿಂದ ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಅನುದಾನ ಬಳಕೆಯಲ್ಲಿ ನಾನೇ ನಂಬರ್ ಒನ್ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಧ್ರುವನಾರಾಯಣ್, ಬರೀ ಮಾತಿನಿಂದ ಹೇಳಿದರೆ ಸಾಲದು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಾಖಲೆಗಳಿರುತ್ತವೆ. ಅದರ ಆಧಾರದ ಮೇಲೆ ಸಾಬೀತು ಪಡಿಸಬೇಕು ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News