ಸುಮಲತಾ ಪರ ಪ್ರಚಾರ: ಟೀಕಾಕಾರರಿಗೆ ನಟ ಯಶ್ ತಿರುಗೇಟು ನೀಡಿದ್ದು ಹೀಗೆ..

Update: 2019-03-20 17:12 GMT

ಮಂಡ್ಯ, ಮಾ.20: ನಾವು ಸುಮಲತಾ ಅಕ್ಕನಿಗೆ ಪ್ರಚಾರ ಮಾಡುತ್ತಿರುವುದು ತಪ್ಪಲ್ಲ. ಆದರೆ, ಇದು ತಪ್ಪು ಅಂದುಕೊಂಡವರಿಗೆ ನಾವು ಸಾಯುವವರೆಗೂ ಈ ತಪ್ಪು ಮಾಡುತ್ತಿರುತ್ತೇವೆ ಎಂದು ನಟ ಯಶ್ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ಬುಧವಾರ ನಗರದಲ್ಲಿ ನಡೆದ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಪ್ರಚಾರ ಸಮಾವೇಶದಲ್ಲಿ ತಾನು ಮತ್ತು ದರ್ಶನ್ ಚುನಾವಣೆಯಲ್ಲಿ ಸುಮಲತಾ ಪರವಾಗಿ ಬ್ಯಾಟಿಂಗ್ ಮಾಡುತ್ತಿರುವುದನ್ನು ಯಶ್ ಬಲವಾಗಿ ಸಮರ್ಥಿಸಿಕೊಂಡರು.

ನಾವು ಅಧಿಕಾರ, ಮತ್ತೊಂದು ಲಾಭಕ್ಕಾಗಲಿ ಪ್ರಚಾರಕ್ಕೆ ಬಂದಿಲ್ಲ. ನಾವು ಹೊರದೇಶದಿಂದಲೂ ಬಂದವರಲ್ಲ. ಮಂಡ್ಯ ಸೇರಿದಂತೆ ರಾಜ್ಯದ ಜನರ ಋಣ ನಮ್ಮ ಮೇಲಿದೆ. ಅಂಬರೀಷ್ ಅವರು ನಮಗೆ ಒಳ್ಳೆಯದು ಮಾಡಿದ್ದಾರೆ. ಅದಕ್ಕಾಗಿ ನಾವು ಸುಮಲತಾ ಅವರ ಜತೆ ನಿಂತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ಮಂಡ್ಯದ ಜನರು ಈ ಚುನಾವಣೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಮನೆಮಠ ಕಳೆದುಕೊಂಡರೂ ಸರಿಯೇ ಸ್ವಾಭಿಮಾನ ಕಳೆದುಕೊಳ್ಳಬೇಡಿ. ಮನೆಮಗಳನ್ನು ಗೆಲ್ಲಿಸಿ ನಿಮ್ಮ ಜತೆಗಿರುವುದಲ್ಲದೆ, ದಿಲ್ಲಿವರೆಗೂ ನಿಮ್ಮ ದನಿಯಾಗಿರುತ್ತಾರೆ ಎಂದು ಹೇಳಿದರು.

ದರ್ಶನ್ ಮಾತನಾಡಿ, ನಮ್ಮ ಬಗ್ಗೆ ಯಾರು ಏನೇ ಮಾತಾಡಿಕೊಂಡರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅಪ್ಪಾಜಿ ಮೇಲಿರೊ ಪ್ರೀತಿಗೋಸ್ಕರ ಅಮ್ಮನ ಗೆಲುವಿಗೆ ಕೈಜೋಡಿಸಿದ್ದೇವೆ. ನೀವು ನೀಡುತ್ತಿರುವ ಪ್ರೀತಿಯು ಮತಗಳಾಗಿ ಪರಿವರ್ತನೆಯಾಗಲಿ ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News