ಮಾ.25 ರಂದು ಶಕ್ತಿ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಕೆ: ನಿಖಿಲ್ ಕುಮಾರಸ್ವಾಮಿ

Update: 2019-03-21 16:05 GMT

ಮಂಡ್ಯ, ಮಾ.21: ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಮಾ.25 ರಂದು ಭಾರೀ ಜನರೊಂದಿಗೆ ಬಂದು ನಾಮಪತ್ರ ಸಲ್ಲಿಸಲಿದ್ದು, ಐತಿಹಾಸಿಕ ಕ್ಷಣಕ್ಕೆ ಮಂಡ್ಯ ಸಾಕ್ಷಿಯಾಗಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯ ವಿಧಾನಸಭಾ ಕ್ಷೇತ್ರದ ಬಸರಾಳು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿ ಮತಯಾಚಿಸಿದ ಅವರು, ಕಾರಣಾಂತರದಿಂದ ಇಂದು ನಾಮಪತ್ರ ಸಲ್ಲಿಸುವುದನ್ನು ಮುಂದೂಡಲಾಯಿತು ಎಂದರು.

ಆ ದಿನದ ಶಕ್ತಿ ಪ್ರದರ್ಶನ ಹೇಗಿರುತ್ತೆ ಅನ್ನೋದನ್ನು ನೀವೇ ನೋಡಿ. ನಮ್ಮನ್ನು ಪ್ರೀತಿಸುವವರು ತುಂಬಾ ಜನ ಇದ್ದಾರೆ. ಎಷ್ಟು ಜನ ಬರುತ್ತಾರೆ ನೀವೆ ನೀವೆ ನೋಡುವಿರಿ. ಈಗಾಗಲೇ ನಾನು ಜಿಲ್ಲೆಯ ಹಲವಾರು ತಾಲೂಕಿಗೆ ಭೇಟಿ ಕೊಟ್ಟಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಎಂದು ಅವರು ತಿಳಿಸಿದರು.

ಮಂಡ್ಯ ಲೋಕಸಭೆ ಕ್ಷೇತ್ರದ 8 ಶಾಸಕರು, ಜನಪ್ರತಿನಿಧಿಗಳು ಒಮ್ಮತದಿಂದ ನನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ನಾನು ಹುಡುಗಾಟ ಆಡಲಿಕ್ಕೆ ರಾಜಕಾರಣಕ್ಕೆ ಬಂದಿಲ್ಲ. ಬದ್ಧತೆ ಇಟ್ಟು ಕೆಲಸ ಮಾಡಲು ಬಂದಿದ್ದೇನೆ. ಜಿಲ್ಲೆಯ ಜನತೆಯ ಸೇವಕನಾಗಿ ಸೇವೆ ಮಾಡಲು ಬಂದಿದ್ದೇನೆ ಎಂದು ಅವರು ಹೇಳಿಕೊಂಡರು.

ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನು ಜಿಲ್ಲೆಯ ಜನತೆ ಸದಾ ಬೆಂಬಲಿಸುತ್ತಿದ್ದು, ರಾಜಕಾರಣದಲ್ಲಿ ಹೋರಾಟ ಮಾಡಲು ಶಕ್ತಿ ತುಂಬಿದ್ದೀರಿ. ನಾನು ಕೂಡ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ದುಡಿದಿದ್ದೇನೆ. ಆಶೀರ್ವಾದ ಮಾಡಬೇಕು. ನನ್ನ ಕೊನೆ ಉಸಿರು ಇರುವವರೆಗೂ ನಿಮ್ಮ ಕೈ ಬಿಡುವುದಿಲ್ಲ ಎಂದು ಅವರು ಮನವಿ ಮಾಡಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಈಗಾಗಲೇ 8,761 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ. ಇತಿಹಾಸದಲ್ಲೇ ಇಷ್ಟು ದೊಡ್ಡಮಟ್ಟದ ಅನುದಾನ ನೀಡಿರಲಿಲ್ಲ ಎಂದು ಅವರು ಹೇಳಿದರು. ಕುಮಾರಸ್ವಾಮಿ ಅವರು ಮೊದಲ ಬಾರಿ ಸಿಎಂ ಆದಾಗಲೂ ಜಿಲ್ಲೆಯಲ್ಲಿ 5 ಸೀಟು ಗೆಲ್ಲಿಸಿಕೊಟ್ಟಿದ್ದೀರಿ. ಈ ಬಾರಿ 7ಕ್ಕೆ 7 ಸ್ಥಾನ ಆಯ್ಕೆ ಮಾಡಿ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಪಣ ತೊಟ್ಟಿದ್ದೀರಿ. ನಿಮ್ಮ ಸೇವೆ ಮಾಡುವುದು ನಮ್ಮ ಕರ್ತವ್ಯ. ಇದಕ್ಕಾಗಿಯೇ ದೇವರು ನನ್ನನ್ನು ಇಲ್ಲಿಗೆ ಕಳುಹಿಸಿ ಕೊಟ್ಟಿರಬಹುದು ಎಂದು  ಅವರು ತಿಳಿಸಿದರು.

ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಮಾ.25ರಂದು ಬೆಳಗ್ಗೆ 10 ಗಂಟೆಗೆ ಕಾಳಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನಂತರ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸ ಲಾಗುವುದು. ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಬಸರಾಳು ಹೋಬಳಿಯ ದೊಡ್ಡ ಗರುಡನಹಳ್ಳಿ, ಬೇಬಿ, ಮುತ್ತೆಗೆರೆ, ಹಲ್ಲೇಗೆರೆ, ಬಸರಾಳು, ಚಂದಗಾಲು, ಕಂಬದಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ನಿಖಿಲ್ ಪ್ರಚಾರ ನಡೆಸಿದರು.

ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ಎಂ.ಜಿ.ತಿಮ್ಮೇಗೌಡ, ಜಿಪಂ ಮಾಜಿ ಸದಸ್ಯ ಕೆ.ಎಸ್.ವಿಜಯಾನಂದ, ತಾಪಂ ಸದಸ್ಯರಾದ ಮಂಜುಳಾ ಆನಂದ್, ಎಂ.ಆರ್..ಪ್ರಕಾಶ್, ಮುಖಂಡರಾದ ಅಶೋಕ್ ಜಯರಾಂ, ಕೆಂಚನಹಳ್ಳಿ ಪುಟ್ಟಸ್ವಾಮಿ, ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News