ಎಮ್ಮೆಮಾಡು ಜಮಾಅತ್‍ನಲ್ಲಿ ಅವ್ಯವಹಾರ ಆರೋಪ: ಸೂಕ್ತ ಕ್ರಮಕ್ಕೆ ಮಾಜಿ ಸದಸ್ಯರ ಆಗ್ರಹ

Update: 2019-03-27 12:03 GMT

ಮಡಿಕೇರಿ, ಮಾ.27: ಎಮ್ಮೆಮಾಡು ಜಮಾಅತ್‍ನಲ್ಲಿ ಕಳೆದ ಮೂರು ವರ್ಷಗಳ ಕಾಲ ಆಡಳಿತ ನಡೆಸಿದ 11 ಸದಸ್ಯರ ಸಮಿತಿ ಭಾರೀ ಅವ್ಯಹಾರ ನಡೆಸಿದೆ ಎಂದು ಆರೋಪಿಸಿರುವ ಮಾಜಿ ಸದಸ್ಯರು ಹಳೆಯ ಸಮಿತಿ ವಿರುದ್ಧ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿ ಜಿಲ್ಲಾಧಿಕಾರಿಗಳು ಹಾಗೂ ವಕ್ಫ್ ಮಂಡಳಿಗೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸದಸ್ಯ ಸಿ.ಎ.ಇಸ್ಮಾಯಿಲ್ 2016 ರಲ್ಲಿ ಚುನಾವಣೆಯ ಮೂಲಕ ಎಮ್ಮೆಮಾಡು ಜಮಾಅತ್‍ಗೆ ಆಯ್ಕೆಯಾದ ಆಡಳಿತ ಮಂಡಳಿ 2017 ರಲ್ಲಿ ಮೊದಲ ಮಹಾಸಭೆ ನಡೆಸಿದಾಗ ಲೆಕ್ಕ ಪರಿಶೋಧನೆಯ ಆಧಾರದಲ್ಲಿ ಅವ್ಯವಹಾರ ಪ್ರಕರಣ ಬೆಳಕಿಗೆ ಬಂದಿದೆ ಎಂದು ಆರೋಪಿಸಿದರು. 

ಜಮಾಅತ್‍ಗೆ ಕೋಟ್ಯಾಂತರ ಹಣ ಸಂದಾಯವಾಲು ಆಧಾರವಾಗಿದ್ದ ಆರು ರಶೀದಿ ಪುಸ್ತಕಗಳು ನಾಪತ್ತೆಯಾಗಿರುವ ವಿಚಾರ ಕೂಡ ಬಹಿರಂಗಗೊಂಡಿದ್ದು, ಸುಮಾರು 3.60 ಲಕ್ಷ ರೂ.ಅವ್ಯವಹಾರವಾಗಿರುವುದನ್ನು ಒಪ್ಪಿಕೊಂಡ ಅಂದಿನ ಕಾರ್ಯದರ್ಶಿ ಆ ಮೊತ್ತವನ್ನು ತಾನೇ ಭರಿಸುವುದಾಗಿ ಒಪ್ಪಿಕೊಂಡಿದ್ದರು. ಈ ನಡುವೆ ಸದಸ್ಯರೊಬ್ಬರು 4.60 ಲಕ್ಷ ದುರುಪಯೋಗ ಪಡಿಸಿಕೊಂಡಿರುವುದು ಬೆಳಕಿಗೆ ಬಂದಿತ್ತು. ಗ್ರಾಮಸ್ಥರ ಒತ್ತಾಯದ ಹಿನ್ನೆಲೆ ಅವರನ್ನು ಸದಸ್ಯತ್ವದಿಂದ ವಜಾಗೊಳಿಸಲಾಗಿತ್ತು. 

ಪ್ರತಿವರ್ಷ ಒಂದು ಮಹಾಸಭೆ ಹಾಗೂ ಒಂದು ವಿಶೇಷ ಸಭೆ ನಡೆಸುವುದು ವಾಡಿಕೆ, ಆದರೆ ಎರಡನೇ ಮಹಾಸಭೆಯನ್ನು 2018 ಡಿಸೆಂಬರ್ ತಿಂಗಳಿನಲ್ಲಿ ನಡೆಸಿದ ಆಡಳಿತ ಮಂಡಳಿ 3.60 ಲಕ್ಷ ರೂ. ಅವ್ಯವಹಾರ ಮತ್ತು ಕೋಟ್ಯಾಂತರ ರೂ.ಗಳಿಗೆ ಸಂಬಂಧಿಸಿದ ರಶೀದಿ ಪುಸ್ತಕ ನಾಪತ್ತೆ ಪ್ರಕರಣದ ಕುರಿತು ಚರ್ಚಿಸಿತು. ಸೂಕ್ತ ನಿರ್ಧಾರಕ್ಕೆ ಬಾರದ ಆಡಳಿತ ಮಂಡಳಿ 2019 ಮಾರ್ಚ್ 30 ರಂದು ಮಹಾಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ತೀರ್ಮಾನಿಸಿತ್ತು. ಈ ಅವಧಿಗೂ ಮುನ್ನವೇ ಜಮಾಅತ್‍ಗೆ ಚುನಾವಣೆ ನಡೆಸುವ ಮೂಲಕ ಹಗರಣಗಳನ್ನು ಮುಚ್ಚಿ ಹಾಕುವ ಯತ್ನ ಮಾಡಲಾಗಿದೆ ಎಂದು ಸಿ.ಎ.ಇಸ್ಮಾಯಿಲ್ ಆರೋಪಿಸಿದರು.

ತಕ್ಷಣ ಜಿಲ್ಲಾಡಳಿತ ಅಧಿಕೃತ ಲೆಕ್ಕಪರಿಶೋಧಕರನ್ನು ನೇಮಿಸಿ ಸಮಗ್ರ ತನಿಖೆ ನಡೆಸಿ ಜಮಾಅತ್‍ನಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರವನ್ನು ಬಯಲಿಗೆಳೆದು ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

ಜಿಲ್ಲಾಡಳಿತ, ಜಿಲ್ಲಾ ವಕ್ಫ ಮಂಡಳಿ ಹಾಗೂ ವಕ್ಫ ಸಲಹಾ ಸಮಿತಿಗಳಿಗೆ ದೂರು ನೀಡಲಾಗುವುದು. ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು. 

ಸುದ್ದಿಗೋಷ್ಠಿಯಲ್ಲಿ ಮಾಜಿ ಸದಸ್ಯ ಎನ್.ಕೆ.ಉಸ್ಮಾನ್, ಪಿ.ಎ.ಆಲಿಕುಟ್ಟಿ, ಕೆ.ಎ.ಉಮ್ಮರ್ ಹಾಗೂ ಕೆ.ಎಂ.ಅಶ್ರಫ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News