‘ಡಿ ಬಾಸ್’ ಅಭಿಮಾನಿಗಳು ಕೊಟ್ಟ ಭಿಕ್ಷೆ: ನಟ ದರ್ಶನ್

Update: 2019-03-27 16:44 GMT

ಬೆಂಗಳೂರು, ಮಾ.27: ಮನೆಯಲ್ಲಿ ನನಗೆ ‘ದರ್ಶನ್’ ಎಂದು ಹೆಸರಿಟ್ಟಿದ್ದಾರೆ. ‘ಡಿ ಬಾಸ್’ ಅನ್ನೋದು ಅಭಿಮಾನಿಗಳು ಪ್ರೀತಿಯಿಂದ ಕೊಟ್ಟಿರುವ ಭಿಕ್ಷೆಯೇ ಹೊರತು, ಬೇರೆ ಯಾರೋ ಕೊಟ್ಟಿದ್ದಲ್ಲ ಎಂದು ನಟ ದರ್ಶನ್ ತಿರುಗೇಟು ನೀಡಿದ್ದಾರೆ.

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ದರ್ಶನ್ ಪ್ರಚಾರ ನಡೆಸುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅದೇನೋ ಡಿ ಬಾಸ್ ಅಂತೆ, ನಾಲ್ಕು ಜನ ಕೊಟ್ಟಿರುವ ಹೆಸರನ್ನು ಇಟ್ಟುಕೊಂಡಿದ್ದಾರೆ. ಸಿನಿಮಾದಲ್ಲಿ ಡಿ ಬಾಸ್, ಜನರ ಮುಂದೆ ಅವೆಲ್ಲ ನಡೆಯಲ್ಲ ಎಂದು ಟೀಕಿಸಿದ್ದರು.

ಈ ಸಂಬಂಧ ಬುಧವಾರ ನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ದರ್ಶನ್, ಡಿ ಬಾಸ್ ಅನ್ನುವುದು ನನಗೆ ಅಭಿಮಾನಿಗಳು ಕೊಟ್ಟಿರುವ ಭಿಕ್ಷೆಯೇ ಹೊರತು, ಬೇರೆ ಯಾರೋ ಕೊಟ್ಟಿದ್ದಲ್ಲ. ಅದನ್ನು ಪ್ರೀತಿಯಿಂದ ಇಟ್ಟುಕೊಂಡಿದ್ದೇನೆ ಎಂದರು.

ಈಗ ನಮ್ಮ ತಲೆ ಮೇಲೆ ಒಂದು ಕೈ ಇಲ್ಲ(ಅಂಬರೀಷ್), ಅದಕ್ಕೆ ಈಗ ಎಲ್ಲರೂ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ನನ್ನ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಇದಕ್ಕೆ ನಾನು ಏನು ಹೇಳಲಿ? ಎಂದು ದರ್ಶನ್ ಹೇಳಿದರು.

ಇದು ನಾನು ಪ್ರಚಾರ ಮಾಡುತ್ತಿರುವ ಮೊದಲ ಚುನಾವಣೆಯಲ್ಲ. ನಾಲ್ಕು ಚುನಾವಣೆಗಳಲ್ಲಿ ಪ್ರಚಾರ ಮಾಡಿದ್ದೇನೆ. ಈ ಹಿಂದೆ ಯಾವತ್ತೂ ಕೇಳಿರದಂತಹ ಮಾತುಗಳನ್ನು ಈ ಬಾರಿ ಕೇಳುತ್ತಿದ್ದೇನೆ. ಈಗ ನಮ್ಮ ತಲೆ ಮೇಲೆ ಆ ಒಂದು ಕೈ ಇಲ್ಲ ಎಂದು ಏನು ಬೇಕಾದರೂ ಮಾತನಾಡುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಾನು ಅವತ್ತು ಮಂಡ್ಯದಲ್ಲಿಯೇ ಹೇಳಿದ್ದೀನಿ, ನಮ್ಮ ವಿರುದ್ಧ ಟೀಕೆಗಳನ್ನು ಮಾಡುವವರ ಬಗ್ಗೆ ನಾನು ಏನೂ ಮಾತನಾಡಲ್ಲ, ಕೋಪಾನೂ ಮಾಡಿಕೊಳ್ಳಲ್ಲ, ನೋವು ಮಾಡಿಕೊಳ್ಳಲ್ಲ. ಹೀಗಾಗಿ ಯಾರು ಏನೇ ಅಂದರೂ ಬೇಜಾರು ಮಾಡಿಕೊಳ್ಳಲ್ಲ. ನನ್ನ ಕೆಲಸ ಮಾಡುತ್ತೇನೆ ಅಷ್ಟೇ ಎಂದು ದರ್ಶನ್ ಹೇಳಿದರು.

ಮಂಡ್ಯ ಚುನಾವಣೆಯಲ್ಲಿ ಸುಮಲತಾ ಅನ್ನೋ ಹೆಸರಿನಲ್ಲಿ 3 ಜನ ನಿಂತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಚುನಾವಣೆಗೆ ನಿಂತಿಲ್ಲ. ಕೇವಲ ಪ್ರಚಾರ ನಡೆಸುತ್ತಿದ್ದೇನೆ. ಹೀಗಾಗಿ, ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News