ಮಂಡ್ಯ ಜಿಲ್ಲಾಧಿಕಾರಿಯನ್ನು ಅಮಾನತ್ತು ಮಾಡಲು ಶ್ರೀರಾಮುಲು ಒತ್ತಾಯ

Update: 2019-03-31 12:51 GMT

ಬಳ್ಳಾರಿ, ಮಾ.31: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರ ದುರಪಯೋಗ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಯ ಮಗನನ್ನು ರಕ್ಷಣೆ ಮಾಡಿರುವ ಮಂಡ್ಯ ಜಿಲ್ಲಾಧಿಕಾರಿಯನ್ನು ಈ ಕೂಡಲೇ ಅಮಾನತ್ತುಗೊಳಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು ಒತ್ತಾಯಿಸಿದರು.

ರವಿವಾರ ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಪರವಾಗಿ ಪ್ರಚಾರ ನಡೆಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚುತ್ತಿದೆ, ಸಿದ್ದರಾಮಯ್ಯ ಚುನಾವಣಾ ಪ್ರಚಾರದಲ್ಲಿ ಎಲ್ಲೂ ಕಾಣಸಿಗುತ್ತಿಲ್ಲ ಎಂದರು.

ಕನಿಷ್ಠ ಕಾಂಗ್ರೆಸ್ ಪಕ್ಷದ ಫ್ಲೆಕ್ಸ್‌ಗಳಲ್ಲೂ ಸಿದ್ದರಾಮಯ್ಯ ಕಾಣಿಸುತ್ತಿಲ್ಲ. ಅವರನ್ನು ಯಾರಾದರೂ ಸ್ವಲ್ಪ ಹುಡುಕಿಕೊಡಿ. ಬಳ್ಳಾರಿಯ ಹಿರಿಯ ಕಾಂಗ್ರೆಸ್ ನಾಯಕರು ಕಲಬುರ್ಗಿಗೆ ಪ್ರಚಾರಕ್ಕೆ ಹೋಗುತ್ತಿದ್ದಾರೆ. ಹೀಗಾಗಿ ಉಗ್ರಪ್ಪ ಬಳ್ಳಾರಿಯಲ್ಲಿ ಒಂಟಿಯಾಗಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ಬಳ್ಳಾರಿ ಬಿಜೆಪಿಯ ಲೋಕಸಭಾ ಅಭ್ಯರ್ಥಿ ವೈ.ದೇವೇಂದ್ರಪ್ಪ ಮಾತನಾಡಿ, ನಾನು ಗೆಲ್ಲಬೇಕೆಂದು ನನ್ನ ಪತ್ನಿ ಸುಶೀಲಮ್ಮ ಪಾದಯಾತ್ರೆ ಮೂಲಕ ಮತಯಾಚಿಸುತ್ತಿದ್ದಾರೆ. ಹಡಗಲಿಯ ಮದಲಗಟ್ಟೆ ಆಂಜನೇಯ ದೇವಸ್ಥಾನದಿಂದ ನೂರಕ್ಕೂ ಹೆಚ್ಚು ಮಹಿಳೆಯರೊಂದಿಗೆ ಪಾದಯಾತ್ರೆ ಮಾಡ್ತಿದ್ದಾರೆ ಎಂದರು.

ಹೀಗಾಗಿ ನನ್ನ ಪತ್ನಿ ಕಾಂಗ್ರೆಸ್‌ನಲ್ಲಿ ಉಳಿಯಲಿಕ್ಕೆ ಇನ್ನೇನು ಉಳಿದಿದೆ. ಎಲ್ಲ ವಿಚಾರಗಳನ್ನು ನನ್ನ ಬಾಯಿಯಿಂದ ಹೊರಡಿಸುವ ಪ್ರಯತ್ನ ಬೇಡ ನನ್ನ ಪತ್ನಿಯನ್ನೇ ಪ್ರಶ್ನಿಸಿ. ಅವರು ಸರಿಯಾದ ಉತ್ತರವನ್ನು ನೀಡಲಿದ್ದಾರೆ ಎಂದು ದೇವೇಂದ್ರಪ್ಪ ಹೇಳಿದರು.

ಕಂಪ್ಲಿ ವಿಧಾನಸಭಾ ಕ್ಷೇತ್ರದ ಎಚ್.ವೀರಾಪುರ, ಗುತ್ತಿಗನೂರು, ಎಮ್ಮಿಗನೂರು, ಸಾಣಾಪುರ, ಮುದ್ದಾಪುರ, ಮೇಟ್ರಿ, ದೇವಲಾಪುರ ಹಾಗೂ ಕಂಪ್ಲಿಯಲ್ಲಿ ಅವರು ಪ್ರಚಾರ ಕೈಗೊಂಡರು. ಈ ವೇಳೆ ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ಸೇರಿದಂತೆ ಹಲವು ಪ್ರಮುಖ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News