ಮೋದಿಗೆ ಮತ ಕೇಳುವವರು ವಾರಣಾಸಿಗೆ ಹೋಗಿ ಮತ ಯಾಚಿಸಿ: ಪ್ರಮೋದ್ ಮಧ್ವರಾಜ್

Update: 2019-03-31 17:59 GMT

ಬಣಕಲ್, ಮಾ.31: ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಬಹುಮತದಿಂದ ಗೆಲ್ಲಿಸಿದರೆ ಕಾಂಗ್ರೆಸ್,ಜೆಡಿಎಸ್,ಕಮ್ಯುನಿಸ್ಟ್ ಪಕ್ಷ ಹಾಗೂ ಕ್ಷೇತ್ರದ ಅಭಿವೃದ್ದಿಗಾಗಿ ಜನತೆಯ ಸೇವಕನಾಗಿ ದುಡಿಯುತ್ತೇನೆ ಎಂದು ಕಾಂಗ್ರೆಸ್,ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

 ಬಣಕಲ್‌ನಲ್ಲಿ ನಡೆದ ಕಾಂಗ್ರೆಸ್, ಜೆಡಿಎಸ್,ಕಮ್ಯೂನಿಸ್ಟ್ ಮೈತ್ರಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಜೆಡಿಎಸ್ ಪಕ್ಷದ ಮೈತ್ರಿ ಮಾಡಿಕೊಳ್ಳುವಾಗ ನಾನು ಕಾಂಗ್ರೆಸ್ ವರಿಷ್ಠರ ಒಪ್ಪಿಗೆ ಮೇರೆಗೆ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸುತ್ತಿದ್ದೇನೆ. ಇದಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷವೂ ಕೂಡ ಸಾಥ್ ನೀಡಿದೆ. ಕಾಂಗ್ರೆಸ್, ಜೆಡಿಎಸ್‌ ಪಕ್ಷದ ಮೈತ್ರಿ ತೆಂಗಿನ ಎಣ್ಣೆ ಮತ್ತು ನೀರಿನ ಮಿಶ್ರಣದ ಸಂಬಂಧವಲ್ಲ, ಅದು ಹಾಲು ಜೇನಿನ ಸಂಪೂರ್ಣ ಮಿಶ್ರಣವಾಗಿದೆ. ನೀವು ಗೆಲ್ಲಿಸಿದ ಶೋಭಾ ಕರಂದ್ಲಾಜೆ ಐದು ವರ್ಷದಲ್ಲಿ ಯಾವುದೇ ಕೆಲಸ ಮಾಡಲಿಲ್ಲ. ಮೋದಿ ಹೆಸರು ಬಳಸಿ ಮತ ಕೇಳುತ್ತಿದ್ದಾರೆ. ಅವರು ಮೋದಿ ಹೆಸರು ಕೇಳಿ ಮತ ಪಡೆಯುವುದಾದರೆ ವಾರಣಾಸಿಗೆ ಹೋಗಲಿ ಎಂದರು.

ಕಾಫಿ ಬೆಳೆಗಾರರ ಸಮಸ್ಯೆ,ರೈತರ ಸಮಸ್ಯೆ, ಕ್ಷೇತ್ರದ ಸಮಸ್ಯೆ ಬಗ್ಗೆ ಶೋಭಾ ಕರಂದ್ಲಾಜೆ ಸ್ಪಂದಿಸಲಿಲ್ಲ. ಅದಕ್ಕಾಗಿ ಸ್ವಪಕ್ಷದವರೇ ಶೋಭಾ ವಿರುದ್ಧ, ‘ಗೋ ಬ್ಯಾಕ್ ಶೋಭಾ’ ಎಂದು ಅಭಿಯಾನ ಪ್ರಾರಂಭಿಸಿದರು. ಅದನ್ನು ಸಂಪೂರ್ಣ ಯಶಸ್ವಿಗೊಳಿಸಬೇಕಾದ ಕೆಲಸ ಕಾರ್ಯಕರ್ತರು ಹಾಗೂ ಮತದಾರರಿಂದ ಮಾತ್ರ ಸಾಧ್ಯವಾಗಿದೆ. ನಾನು ಈ ಹಿಂದೆ ಕೆಲಸ ಮಾಡಿ ತೋರಿಸಿದ್ದೇನೆ. ಶೋಗಾಗಿ ಸ್ಪರ್ಧಿಸಿಲ್ಲ. ಹಾಗಾಗಿ ನನ್ನ ಕ್ಷೇತ್ರದ ನಿರ್ವಹಣೆ ನೋಡಿ ನನಗೆ ಇಂದು ಈ ಕ್ಷೇತ್ರದಲ್ಲಿ ಸ್ಪರ್ಧಿಸುವ ಹೊಣೆ ಕೊಟ್ಟಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷದ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರಿಗೆ ಋಣಿಯಾಗಿದ್ದೇನೆ. ಹಾಗಾಗಿ ಈಬಾರಿ ಮೈತ್ರಿ ಪಕ್ಷಗಳು ಮಿಶ್ರಣವಾಗಿರುವುದರಿಂದ ತೆನೆಹೊತ್ತ ಚಿಹ್ನೆಗೆ ಮತದಾನ ಮಾಡುವ ಮೂಲಕ ನನ್ನನ್ನು ಗೆಲ್ಲಿಸಿ ಪಕ್ಷ ಹಾಗೂ ಕಾರ್ಯಕರ್ತರ,ಮತದಾರರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಯುಪಿಎ ನೇತೃತ್ವದ ಸರಕಾರವು ಕೇಂದ್ರದಲ್ಲಿ ಬಂದರೆ ರಾಹುಲ್ ಗಾಂಧಿ ಪ್ರತಿ ಬಿಪಿಎಲ್ ಕುಟುಂಬಕ್ಕೆ ಅರ್ಹತೆ ಮೇರೆಗೆ ತಿಂಗಳಿಗೆ 6 ಸಾವಿರ ರೂ. ನಂತೆ ವರ್ಷಕ್ಕೆ 72 ಸಾವಿರ ರೂ. ನೇರವಾಗಿ ಬಡವರ ಖಾತೆಗೆ ಬರಲಿದೆ.ಕಾಂಗ್ರೆಸ್ ಸರಕಾರ ತನ್ನದೇ ಆದ ಇತಿಹಾಸ ಹೊಂದಿದ್ದು, ಮಧ್ವರಾಜ್ ಕಾಂಗ್ರೆಸ್‌ನ ಕಟ್ಟಾಳು, ಅವರ ಕುಟುಂಬವೂ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಾ ಬಂದಿದೆ. ಮಧ್ವರಾಜ್‌ಗೆ ರಾಜಕೀಯದ ಉತ್ತಮ ಅನುಭವವಿದೆ ಎಂದರು.

ಕೆಪಿಸಿಸಿ ರಾಜ್ಯ ಪ್ರ.ಕಾರ್ಯದರ್ಶಿ ಎಂ.ಎಲ್.ಮೂರ್ತಿ ಮಾತನಾಡಿ, ಗೊಡ್ಡು ಎಮ್ಮೆಗೆ ಮತ ಕೊಡುವ ಬದಲು ಗೀರ್ ತಳಿಯಂತಿರುವ ಪ್ರಮೋದ್ ಮಧ್ವರಾಜ್‌ಗೆ ಮತ ನೀಡುವ ಮೂಲಕ ರಾಹುಲ್ ಗಾಂದಿಯ ಕೈಬಲ ಪಡಿಸಿದರೆ ಉತ್ತಮ. ಏಕೆಂದರೆ ಬಿಜೆಪಿಯ ಶೋಭಾ ಕರಂದ್ಲಾಜೆಗೆ ಪಕ್ಷದಲ್ಲೇ ವಿರೋಧವಿದ್ದು, ಪಕ್ಷದವರೇ ಆಕೆ ಸ್ಪಂದಿಸುತ್ತಿಲ್ಲ ಎಂದು ದೂರುತ್ತಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಎಲ್.ವಿಜಯಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಲಕ್ಷ್ಮಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರಗೌಡ, ಎಂ.ಎಸ್.ಅನಂತು, ನಯನ ಮೋಟಮ್ಮ, ಮಾಜಿ ಜಿ.ಪಂ.ಉಪಾಧ್ಯಕ್ಷೆ ಕೆ.ರಾಜಮ್ಮ, ಜೆಡಿಎಸ್‌ನ ಮಾಜಿ ಶಾಸಕ ಬಿ.ಬಿ.ನಿಂಗಯ್ಯ, ವಿಪ ಸದಸ್ಯ ಎಸ್.ಎಲ್. ಭೋಜೇಗೌಡ, ಎಚ್.ಎಚ್.ದೇವರಾಜ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಟಿ.ಎಂ.ಸುಬ್ರಮಣ್ಯ, ಅಲ್ಪ ಸಂಖ್ಯಾತರ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಲಸ್ರಾದೊ,ಜೆಡಿಎಸ್ ಜಿಲ್ಲಾ ಅಧ್ಯಕ್ಷ ರಂಜನ್ ಅಜಿತ್‌ಕುಮಾರ್,ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಎಸ್.ಲಕ್ಷ್ಮಣ್,ಜೆಡಿಎಸ್ ಹೋಬಳಿ ಅಧ್ಯಕ್ಷ ಮಹೇಶ್‌ಗೌಡ,ಕೆಜಿಎಪ್ ಅಧ್ಯಕ್ಷ ಬಿ.ಎಸ್.ಜಯರಾಮಗೌಡ,ತಾಲೂಕು ಅಧ್ಯಕ್ಷ ಬಾಲಕೃಷ್ಣ, ಕಾಂಗ್ರೆಸ್ ಕಾಯದರ್ಶಿ ಮನೋಜ್,ಹೋಬಳಿ ಕಾರ್ಯದರ್ಶಿ ಬಿ.ಎ.ಉಮರ್, ಸಬ್ಲಿ ದೇವರಾಜ್,ಜಿಲ್ಲಾ ಎಸ್.ಸಿ.ಘಟಕದ ಅಧ್ಯಕ್ಷ ಹೂವಪ್ಪ,ಸಿಪಿಐನ ದೇವರುಂದ ರವಿ, ರಾಜು, ಬಿ.ಎಲ್ ಅಶ್ವಥ್,ಮಡ್ಡಿಕೆರೆ ಹರೀಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News