ಸ್ವಲ್ಪವೂ ಕೃತಜ್ಞತೆ ಇಲ್ಲದ ಮನುಷ್ಯ: ಸಚಿವ ತಮ್ಮಣ್ಣ ವಿರುದ್ಧ ಸುಮಲತಾ ವಾಗ್ದಾಳಿ

Update: 2019-04-02 16:45 GMT

ಮಂಡ್ಯ, ಎ.1: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಅಂಬರೀಷ್ ಏನು ಮಾಡಿಲ್ಲ ಅಂತಾರೆ. ಏನು ಮಾಡಿದ್ದಾರೆ ಎಂದು ಅವರೇ ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಲೋಕಸಭೆ ಪಕ್ಷೇತರ ಅಭ್ಯರ್ಥಿ ಸಮಲತಾ ಅಂಬರೀಷ್ ಎದುರೇಟು ನೀಡಿದ್ದಾರೆ.

ಮಂಗಳವಾರ ಮದ್ದೂರು ವಿಧಾನಸಭಾ ಕ್ಷೇತ್ರದ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಅವರು, ಇವತ್ತು ಸಚಿವರಾಗಿ ಅಧಿಕಾರ ನಡೆಸುತ್ತಿರುವುದಕ್ಕೇ ಯಾರು ಕಾರಣ ಎಂದು ಅವರನ್ನೇ ಕೇಳಿ. ಆವತ್ತು ಅಂಬರೀಷ್ ಮನೆಯಲ್ಲಿ ಕುಳಿತು ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಚಡಪಡಿಸುತ್ತಿದ್ದಾಗ ಅಂಬರೀಷ್ ಯಾರಿಗೆ ಫೋನ್ ಮಾಡಿ ಇವರನ್ನು ಮಂತ್ರಿ ಮಾಡಿದರು ಎಂದು ನೆನಪಿಸಿಕೊಳ್ಳಲಿ ಎಂದು ತಮ್ಮ ಸಂಬಂಧಿ ತಮ್ಮಣ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.

ಡಿ.ಸಿ.ತಮ್ಮಣ್ಣ ಅವರನ್ನು ಚಿಕ್ಕವಯಸ್ಸಿನಲ್ಲಿ ಓದಿಸಿ ಬೆಳೆಸಿದ್ದು ಅಂಬರೀಷ್ ಅವರ ತಂದೆ ನಮ್ಮ ಮಾವ ಹುಚ್ಚೇಗೌಡ. ಚಿಕ್ಕ ವಯಸ್ಸಿನಲ್ಲಿ ಅವರನ್ನು ಮನೆಗೆ ತಂದು ಬೆಳೆಸಿ, ಓದಿಸಿದರು. ಅನ್ನ ಹಾಕಿ ಓದಿಸಿ, ಬೆಳೆಸಿದ ಮನೆಗೆ ಈಗ ಇವರು ಏನೆಲ್ಲಾ ಮಾಡ್ತಿದ್ದಾರೆ. ಸ್ವಲ್ಪವೂ ಕೃತಜ್ಞತೆ ಇಲ್ಲದ ಮನುಷ್ಯ. ಇಷ್ಟೆಲ್ಲ ವಯಸ್ಸಾಗಿ ಅನುಭವ ಪಡೆದಿದ್ದರೂ ಹೆಂಗಸರ ಬಗ್ಗೆ ಹೀಗೆ ಮಾತನಾಡುತ್ತಾರೆ ಎಂದು ಸುಮಲತಾ ವಾಗ್ದಾಳಿ ನಡೆಸಿದರು.

ಇವತ್ತು ಅಧಿಕಾರಕ್ಕಾಗಿ ಸಂಬಂಧಗಳನ್ನು ಕಳೆದುಕೊಂಡಿದ್ದಾರೆ. ಇವರಿಗೆ ಅಧಿಕಾರ ಹಾಗೂ ಹಣ ಎರಡನ್ನು ಬಿಟ್ಟರೆ ಸಂಬಂಧಗಳು ಬೇಕಾಗಿಲ್ಲ. ಸಂಬಂಧದಲ್ಲಿ ಅಂಬರೀಷ್ ಅಣ್ಣನಾಗಬೇಕಿದ್ದು, ಈಗ ಅವೆಲ್ಲವನ್ನು ಮರೆತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News