ಶಿವರಾಮೇಗೌಡರ ಟೀಕೆ ಅವರ ಸಿಲ್ಲಿ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ: ನಟ ಯಶ್

Update: 2019-04-02 16:58 GMT

ಮಂಡ್ಯ, ಎ.2: ಸುಮಲತಾ ಅಂಬರೀಷ್ ಗೌಡ್ತಿ ಅಲ್ಲ, ಆಕೆ ನಾಯ್ಡು ಎಂದು ಹೇಳುತ್ತಿರುವ ಸಂಸದ ಶಿವರಾಮೇಗೌಡರಿಗೆ ನಟ ಯಶ್ ತಿರುಗೇಟು ನೀಡಿದ್ದು,  ಮದುವೆ ಆದಮೇಲೆ ನೀವು ಯಾರ ಮನೆಗೆ ಸೇರುತ್ತೀರ ಎಂದು ಹಳ್ಳಿಗಳಲ್ಲಿರುವ ಹೆಣ್ಣು ಮಕ್ಕಳಲ್ಲಿ ಕೇಳಿ ಎಂದು ತಿರುಗೇಟು ನೀಡಿದರು.

ಕಿರಗಂದೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಶ್, ಶಿವರಾಮೇಗೌಡರ ಟೀಕೆ ಅವರ ಸಿಲ್ಲಿ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಯಾರೇ ವೈಯಕ್ತಿಕ ಟೀಕೆ ಮಾಡಿದರೂ ತಪ್ಪು. ಇನ್ನು ಜಾತಿ ವಿಚಾರ ಇಟ್ಕೊಂಡು ಟೀಕೆ ಮಾಡೋದೂ ದೊಡ್ಡ ತಪ್ಪು. ಈ ಮಟ್ಟಕ್ಕೆ ಯಾರೂ ಇಳಿಯಬಾರದು. ರಾಜಕೀಯದಲ್ಲಿ ಯಾರೂ ಶತ್ರುವಲ್ಲ ಎಂದರು.

ಈ ರೀತಿ ಹೇಳಿಕೆ ಕೊಡುವ ಎಲ್ಲರನ್ನೂ ನೋಡಿದ್ದೇವೆ. ಅಂಬರೀಷಣ್ಣ ಇದ್ದಾಗ ಅವರ ಮನೆಯಲ್ಲಿ ಇವರೆಲ್ಲಾ ಹೇಗೇಗೆ ಇದ್ದರು ಅನ್ನೋದು ಗೊತ್ತಿದೆ. ಓರ್ವ ಹೆಣ್ಣು ಮಗಳು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅದನ್ನು ಎಲ್ಲರೂ, ಮುಖ್ಯವಾಗಿ ಹೆಣ್ಣು ಮಕ್ಕಳು ಪ್ರೋತ್ಸಾಹಿಸಬೇಕು ಎಂದು ಅವರು ಮನವಿ ಮಾಡಿದರು.

ಗಂಡನ ಕಳೆದುಕೊಂಡ ಹೆಣ್ಣು ಬೀದಿಗೆ ಬರಲೇ ಬಾರದು, ಮಂಡ್ಯಕ್ಕೆ ಹೆಜ್ಜೆ ಇಡಲೇಬಾರದು ಎಂಬ ಬೆದರಿಕೆ ನೋಡಿಕೊಂಡು ನಾವು ಕೂರಬೇಕಿತ್ತೆ ಎಂದು ಕಿಡಿಕಾರಿದ ಯಶ್, ನಮಗಿರುವುದು ಜನಬಲ. ಕೊನೆಯ ಮೂರು ದಿನದಲ್ಲಿ ಏನೋ ಮಾಡುತ್ತೇವೆಂಬ ಧೈರ್ಯದ ಮೇಲೆ ಕುಳಿತವರಲ್ಲ. ಜನರಿಗೆ ನಮ್ಮ ನಿಲುವು, ಅನಿಸಿಕೆ ತಿಳಿಸಿ ಮತ ಕೇಳುತ್ತೇವೆ ಎಂದರು.

ಕಳೆದ ಚುನಾವಣೆಯಲ್ಲಿ ಕೆ.ಆರ್.ನಗರದಲ್ಲಿ ಒಬ್ಬರ ಪರ ಪ್ರಚಾರ ಮಾಡಿದ್ದೆ. ಅಂಬರೀಷ್ ಅವರು ನಮ್ಮ ಮೇಲಿಟ್ಟಿದ್ದ ಪ್ರೀತಿಗಾಗಿ ನಿಯತ್ತಿನಿಂದ ಅವರ ಪರವಾಗಿ ಮಕ್ಕಳಾಗಿ ಇಲ್ಲಿ ನಿಂತಿದ್ದೇವೆ. ಬೇರೆಯವರಿಗೆ ಬೇಜಾರು ಮಾಡುವ ಉದ್ದೇಶ ನಮ್ಮಲಿಲ್ಲ. ಎಲ್ಲವನ್ನೂ ಜನರೇ ನಿರ್ಧಾರ ಮಾಡುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News