ಈಶ್ವರಪ್ಪಗೆ ಮಾನ-ಮರ್ಯಾದೆ ಇದ್ದರೆ, ಬಿಜೆಪಿ ಬಿಟ್ಟು ಹೊರಬರಲಿ: ಸಿದ್ದರಾಮಯ್ಯ ಸವಾಲು

Update: 2019-04-03 15:30 GMT

ಹಾವೇರಿ, ಎ. 3: ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಹೀಗಾಗಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಮನವಿ ಮಾಡಿದ್ದಾರೆ.

ಬುಧವಾರ ನಗರದಲ್ಲಿ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ ಪರವಾಗಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದೇವೆ ಎಂದರು.

ಅಮಾವಾಸ್ಯೆ: ಬಾಬಾ ಸಾಹೇಬ್ ಅಂಬೇಡ್ಕರ್ ರೂಪಿಸಿದ ಸಂವಿಧಾನ ಎಲ್ಲರೂ ಸಮಾನರು ಎಂದು ಪ್ರತಿಪಾದಿಸಿದೆ. ಆದರೆ, ಅಂಬೇಡ್ಕರ್ ಪ್ರತಿಮೆ ನಾಶ ಮಾಡಿ, ಸಂವಿಧಾನವನ್ನು ಸುಟ್ಟು ಹಾಕಿ ಎಂದು ಹೇಳಿಕೆ ನೀಡಿದವನೇ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾನೆಂದು ವಾಗ್ದಾಳಿ ನಡೆಸಿದರು.

ಆ ಅಭ್ಯರ್ಥಿ ಸೂರ್ಯನೋ, ಚಂದ್ರನೋ ಗೊತ್ತಿಲ್ಲ. ಆದರೆ, ಅವನಿಗೆ ಅಮಾವಾಸ್ಯೆ ಎಂದು ಹೆಸರು ಇಡಬೇಕಿತ್ತು ಎಂದು ಲೇವಡಿ ಮಾಡಿದ ಸಿದ್ದರಾಮಯ್ಯ, ಮೋದಿ, ಶಾ ಅನುಮತಿ ಇಲ್ಲದೆ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ, ಸಂವಿಧಾನ ಬದಲು ಮಾಡುತ್ತೇನೆಂದು ಹೇಳಲು ಸಾಧ್ಯವಿಲ್ಲ. ಸಂವಿಧಾನದ ಬಗ್ಗೆ ಗೌರವ ಇಲ್ಲದವರು ಭಾರತದ ಪ್ರಜೆಯಾಗಲು ಯೋಗ್ಯರಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳಿಂದ ಹಿಂದುಳಿದವರಿಗೆ 7, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ 7 ಹಾಗೂ ಇತರರಿಗೆ 14 ಸ್ಥಾನ ನೀಡಿದ್ದೇವೆ. ಬಿಜೆಪಿಯವರು 28 ಕ್ಷೇತ್ರಗಳ ಪೈಕಿ ಒಂದೆ ಒಂದು ಕಡೆ ಹಿಂದುಳಿದವರಿಗೆ ಟಿಕೆಟ್ ನೀಡಿಲ್ಲ. ಬಿಜೆಪಿ ಮುಖಂಡ ಈಶ್ವರಪ್ಪಗೆ ಮಾನ-ಮರ್ಯಾದೆ ಇದ್ದರೆ, ಬಿಜೆಪಿ ಬಿಟ್ಟು ಹೊರಬರಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು. ಬಿಜೆಪಿ ಸಂಸದರು ತನ್ನ ಸಾಧನೆ ಆಧರಿಸಿ ಮತವನ್ನು ಕೇಳದೆ ಮೋದಿಗಾಗಿ ಮತ ನೀಡಿ ಎಂದು ಕೇಳುತ್ತಿರುವುದು ನಾಚಿಕೆಗೇಡು. ಮೋದಿ ಆಡಳಿತದಿಂದ ದೇಶದ ಜನತೆ ಈಗಾಗಲೆ ಭ್ರಮನಿರಸನರಾಗಿದ್ದಾರೆ. ಅಚ್ಚೇದಿನ್ ಬಂದಿದ್ದು ಅಂಬಾನಿ, ಅದಾನಿ, ಚೋಕ್ಸಿ, ನೀರವ್ ಮೋದಿಗೆ ಮಾತ್ರ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಸಂಸದ ಶಿವಕುಮಾರ ಉದಾಸಿ ಸಂಸತ್ತಿನಲ್ಲಿ ರೈತರ ಬಗ್ಗೆ ಒಂದೇ ಒಂದು ಪ್ರಶ್ನೆ ಕೇಳಿಲ್ಲ. ಅಂತವರಿಗ್ಯಾಕೆ ಪದೇಪದೆ ವೋಟು ಕೊಡ್ತಿದ್ದೀರಿ? ಇಂಥವರನ್ನ ಬಿಟ್ಟು ಡಿ.ಆರ್.ಪಾಟೀಲ ಅಂಥವರಿಗೆ ವೋಟು ಕೊಡಿ. ಪಾಟೀಲರನ್ನ ಆಯ್ಕೆ ಮಾಡಿದ್ರೆ ನಿಮ್ಮ ದನಿ ದಿಲ್ಲಿಯಲ್ಲಿ ಪ್ರತಿಧ್ವನಿಸುತ್ತೆ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್, ಸಚಿವ ಝಮೀರ್ ಅಹ್ಮದ್ ಖಾನ್, ಮಾಜಿ ಸಚಿವ ಬಸವರಾಜ ಹೊರಟ್ಟಿ, ಕೋನರೆಡ್ಡಿ, ಶಾಸಕರಾದ ಎನ್.ಎ.ಹಾರಿಸ್, ಬಿ.ಸಿ.ಪಾಟೀಲ್, ಕೆ.ಬಿ.ಕೋಳಿವಾಡ, ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ್ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.

ಅಪ್ಪನ ನೋಡಿ ಮಗಳ ಕೊಡ್ತಾರಾ:

‘ಏನೂ ಕೆಲಸ ಮಾಡದ ಬಿಜೆಪಿ ಸಂಸದರು, ಮೋದಿ ನೋಡಿ ವೋಟು ಕೊಡಿ ಎನ್ನುತ್ತಿದ್ದಾರೆ. ಹುಡುಗನ ನೋಡಿ ಹೆಣ್ಣು ಕೊಡೋದು ವಾಡಿಕೆ. ಆದರೆ, ಹುಡುಗನ ಅಪ್ಪನ ನೋಡಿ ಹೆಣ್ಣು ಕೊಡ್ತಾರಾ? ಬಿಜೆಪಿಯಲ್ಲಿ ಚುನಾವಣೆ ತನಕ ಯಡಿಯೂರಪ್ಪ ಹಿಂದೂ, ಅಧಿಕಾರ ಬಂದರೆ ಹೆಗಡೆ ಮುಂದು. ಅಂಬೇಡ್ಕರ್ ಪ್ರತಿಮೆ ನಾಶ ಮಾಡಬೇಕೆಂದು ತೇಜಸ್ವಿ ಸೂರ್ಯ ಹೇಳಿಕೆ ಕೊಡ್ತಾನೆ. ಆದರೂ, ಬಿಜೆಪಿಯಿಂದ ವಿ.ಶ್ರೀನಿವಾಸ ಪ್ರಸಾದ್ ಸ್ಪರ್ಧಿಸುತ್ತಾರೆ’

-ಸಿ.ಎಂ.ಇಬ್ರಾಹೀಂ ಕಾಂಗ್ರೆಸ್ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News