ಎ.14 ರಂದು ಕೊಡವ ಹೊಸ ವರ್ಷ ‘ಎಡಮ್ಯಾರ್’ ಆಚರಣೆ : ಗೋಣಿಕೊಪ್ಪದಲ್ಲಿ ಸಂಜೆ ಪಂಜಿನ ಮೆರವಣಿಗೆ

Update: 2019-04-08 11:09 GMT

ಮಡಿಕೇರಿ,ಎ.8 :ಕೊಡವ ಹೊಸ ವರ್ಷ ‘ಎಡಮ್ಯಾರ್’ ಪ್ರಯುಕ್ತ ಸಿ.ಎನ್.ಸಿ ಆಶ್ರಯದಲ್ಲಿ ಏ.14 ರಂದು ಸಂಜೆ 6.30 ಗಂಟೆಗೆ ಗೋಣಿಕೊಪ್ಪದಲ್ಲಿ 22ನೇ ವರ್ಷದ ಸಾರ್ವತ್ರಿಕ ಬೃಹತ್ ಪಂಜಿನ ಮೆರವಣಿಗೆ - ಪೊಂಬೊಳಕ್ ಮೆರವಣಿಗೆ ನಡೆಯಲಿದೆ. 

ಕೊಡವ ಪಂಚಾಂಗದ ಎಡಮ್ಯಾರ್ ಸೌರಮಾನ ಯುಗಾದಿ ಚಂಗ್ರಾಂದಿಯು ಕೊಡವರ ಹೊಸ ವರ್ಷ ಭಿತ್ತರಿಸುವ ಪವಿತ್ರ ಉತ್ಸವವಾಗಿದ್ದು, ಇದಕ್ಕೆ ವಿಶೇಷವಾದಂತಹ ಮಹತ್ವ ನೀಡಲಾಗಿರುವುದನ್ನು ಕೊಡವ ಜನಪದೀಯ ಚರಿತ್ರೆ ಮತ್ತು ಕಾವ್ಯಗಳಲ್ಲಿ ಕಾಣಬಹುದೆಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ಎ.14 ರ ಬೆಳಗ್ಗೆ 6.30 ಗಂಟೆಗೆ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿರುವ ನಂದಿನೆರವಂಡ ಉತ್ತಪ್ಪನವರ ಭತ್ತದ ಗದ್ದೆಯಲ್ಲಿ ಹೊಸ ವರ್ಷದ ಪ್ರಯುಕ್ತ ಜೋಡೆತ್ತಿನ ಮೂಲಕ ಭೂಮಿ ಉಳುಮೆ ಕಾರ್ಯವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಗುತ್ತದೆಂದು ತಿಳಿಸಿದ್ದಾರೆ.

ಕೊಡವ ಹೊಸ ವರ್ಷ ಈ ಎಡಮ್ಯಾರ್ ಹಬ್ಬವೂ ವರ್ಷದ 6 ಮಾಸಗಳಲ್ಲಿ ಅತ್ಯಂತ ವರ್ಣ ರಂಜಿತ ಮತ್ತು ವಿಶೇಷವಾದ ವಸಂತ ಕಾಲದ ಅಂತಿಮ ಪರ್ವವಾಗಿದ್ದು, ವಸಂತ ಋತು ಫೆಬ್ರವರಿ 15 ರಿಂದ ಆರಂಭವಾಗಿ ಏಪ್ರಿಲ್ 14 ರ ವರೆಗಿರುತ್ತದೆ. ವಸಂತ ಋತುವಿನಲ್ಲೇ ಮರಗಿಡ ಬಳ್ಳಿ ಚಿಗುರಿ ಹೂ ಬಿಡುವ ಫಲಪ್ರದ ಕಾಲವಾಗಿದೆ. ಈ ಎಡಮ್ಯಾರ್ ನಮ್ಮೆಯು ಕೃಷಿ ಪರ್ವದ ಆರಂಭಿಕ ಅಧ್ಯಾಯವಾಗಿದ್ದು ಹಬ್ಬ ಹರಿದಿನಗಳಲ್ಲಿ ಬಿಡುವು ಪಡೆದುಕೊಂಡ ಕೊಡವ ಬುಡಕಟ್ಟು ಸಮುದಾಯ ಮುಂದೆ ಕೃಷಿ ಚಟುವಟಿಕೆ ಪ್ರಾರಂಭಿಸುವ ಕಾಲವಾಗಿದ್ದು, ಎಡಮ್ಯಾರ್ ನಂತರ ಮುಂದಿನ ಮುಂಗಾರು ಭಿತ್ತನೆಗೆ ಕೃಷಿ ಚಟುವಟಿಕೆಗೆ ಕೊಡವ ರೈತರು ತಯಾರಿ ನಡೆಸುತ್ತಾರೆ. ಪ್ರಕೃತಿಯ ವರ್ಷ ಚಕ್ರದ ಪ್ರಕಾರ ಕೊಡವರ 5 ಪ್ರಮುಖ ಹಬ್ಬಗಳಲ್ಲಿ ಎಡಮ್ಯಾರ್ ಮೊದಲನೆಯದಾಗಿದೆ ಎಂದು ನಾಚಪ್ಪ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News