ಶೋಬಾ ಕರಂದ್ಲಾಜೆ ಚುನಾವಣೆ ಸಂದರ್ಭ ಮಾತ್ರ ಕಾಣಿಸುತ್ತಿದ್ದಾರೆ: ಪ್ರಮೋದ್ ಮಧ್ವರಾಜ್ ಟೀಕೆ

Update: 2019-04-08 14:50 GMT

ಶೃಂಗೇರಿ, ಎ.8: ಉಡುಪಿಯಲ್ಲಿ ಶಾಸಕನಾಗಿದ್ದ ಸಂದರ್ಭದಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ನೂರಾರು ಕೋಟಿ ಅನುದಾನಗಳನ್ನು ತಂದು ಅಭಿವೃದ್ಧಿ ಮಾಡಿದ್ದೇನೆ. ರಾಜ್ಯದ ನಂ.1 ಶಾಸಕನಾಗಿ ಹೊರಹೊಮ್ಮಿರುವ ದಾಖಲೆ ನನ್ನದಾಗಿದೆ. ಆದರೆ ಸಂಸದೆ ಶೋಭಾ ಕರಂದ್ಲಾಜೆ ಚುನಾವಣೆ ಸಂದರ್ಭದಲ್ಲಿ ಜನರಿಗೆ ಕಾಣಿಸಿಕೊಳ್ಳುತ್ತಾರೆ. ಅಂತವರು ಬಡವರ ಆಶಯಗಳಿಗೆ ಸ್ಪಂದಿಸಲಾರರು ಉಡುಪಿ-ಚಿಕ್ಕಮಗಳೂರು ಲೋಕಸಭೆ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ತಿಳಿಸಿದರು.

ಅವರು ಶೃಂಗೇರಿಯಲ್ಲಿ ಸೋಮವಾರ ಕುರುಬಕೇರಿ ಸರ್ಕಲ್‍ನಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ನನಗೆ ಎಂಟು ವಿಧಾನ ಸಭಾ ಕ್ಷೇತ್ರಕ್ಕೆ ಕೆಲಸ ಮಾಡುವ ಅವಕಾಶ ದೊರಕಿದೆ. ಸಂಸದೆ ಶೋಭಾ ಕರಂದ್ಲಾಜೆ ಈ ಕ್ಷೇತ್ರವು ಕಾಂಗ್ರೆಸ್ ಪಕ್ಷದಿಂದ ಮುಕ್ತವಾಗಿದೆ ಎಂಬ ಹೇಳಿಕೆ ನೀಡಿದ್ದಾರೆ. ಮುಂದೆ ಮೈತ್ರಿ ಪಕ್ಷವು ಬಿಜೆಪಿಗೆ ಪೈಪೋಟಿ ನೀಡುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಹೇಗೆ ಗೆಲ್ಲಬೇಕು, ಬೇರೆಯವರನ್ನು ಹೇಗೆ ಸೋಲಿಸಬೇಕು ಎಂಬುದು ಚೆನ್ನಾಗಿ ಗೊತ್ತಿದೆ ಎಂದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ದೇಶದ 25 ಕೋಟಿ ಬಿಪಿಎಲ್ ಕಾರ್ಡುದಾರರಿಗೆ ವಾರ್ಷಿಕ 72 ಸಾವಿರ ರೂ. ಆದಾಯ ನೀಡುವ ನ್ಯಾಯ್ ಯೋಜನೆಯನ್ನು ರಾಹುಲ್ ಗಾಂಧಿ ಚುನಾವಣಾ ಪ್ರನಾಳಿಕೆಯಲ್ಲಿ ಈಗಾಗಲೇ ಘೋಷಿಸಿದ್ದಾರೆ. ಈ ಯೋಜನೆಯಿಂದಾಗಿ ದೇಶದಲ್ಲಿ ಬಡವರಿಗೆ ಸಾಕಷ್ಟು ನೆರವಾಗಲಿದೆ ಎಂದ ಅವರು, ಈ ಯೋಜನೆಯ ಜಾರಿಗಾಗಿ ಈ ಬಾರಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಗೆ ಮತದಾರರು ಬೆಂಬಲ ನೀಡಬೇಕೆಂದು ಮನವಿ ಮಾಡಿದರು. 

ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ರಾಜೇಗೌಡ ಅವರು ಉತ್ತಮ ಕಾರ್ಯಮಾಡುತ್ತಿದ್ದಾರೆ. ಶೋಭಾ ಕರಂದ್ಲಾಜೆ ಅವರು ನಾಮಪತ್ರದಲ್ಲಿ ಬೆಂಗಳೂರು ವಿಳಾಸವನ್ನು ನಮೂದಿಸಿದ್ದಾರೆ. ನಾನು ಉಡುಪಿ ಚಿಕ್ಕಮಗಳೂರಿನಲ್ಲಿ ಕಾರ್ಯನಿರ್ವಹಿಸಲ್ಲಿದ್ದೇನೆ. ಎ.17ರ ತನಕ ನನ್ನ ಜವಾಬ್ದಾರಿ ನಿಮ್ಮದಾಗಿದೆ. ಬಳಿಕ ನಿಮ್ಮ ಜವಾಬ್ದಾರಿ ನನ್ನದಾಗಲಿದೆ ಎಂದ ಅವರು, ಶಾಸಕನಾಗಿದ್ದ ಅವಧಿಯಲ್ಲಿ ಉಡುಪಿ ಕ್ಷೇತ್ರದಲ್ಲಿ 65 ಜನಸಂಪರ್ಕ ಸಭೆಯನ್ನು ನಡೆಸಿದ್ದೇನೆ. ಬಡವರ ಸಮಸ್ಯೆಗಳನ್ನು ಆಲಿಸಿದ್ದೇನೆ. ಇದರಿಂದಾಗಿ ನನಗೆ ಬಡವರ ನೋವು ಅರ್ಥವಾಗುತ್ತದೆ. ಬಡವರ ನೋವು ಅರ್ಥವಾಗದವರು ಅಧಿಕಾರ ಪಡೆದು ರಾಷ್ಟ್ರರಾಜಕಾರಣಿಯಾಗಲು ಹೋಗುತ್ತಾರೆಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, "ರೈತರು ಹಾಗೂ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಸಮ್ಮಿಶ್ರ ಸರಕಾರ ಹೆಚ್ಚು ಅನುದಾನ ನೀಡಿದೆ.  ರೈತರ ಹಾಗೂ ಜನಸಾಮಾನ್ಯರ ಶ್ರೇಯೋಭಿವೃದ್ಧಿಗೆ ಮೈತ್ರಿ ಸರಕಾರ ಅವಿರತವಾಗಿ ದುಡಿಯುತ್ತಿದೆ. ಮಲೆನಾಡಿನ ಜಲ್ವಂತ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದೆ. ಹಂತಹಂತವಾಗಿ ಜನತೆಯ ಆಶಯಗಳಿಗೆ ಸ್ಪಂದಿಸಲಿದ್ದೇವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೃಷಿಕರ 46 ಸಾವಿರ ಕೋಟಿ ಸಾಲ ಮನ್ನಾದ ಹಣವನ್ನು ಬಿಡುಗಡೆ ಮಾಡಿದ್ದಾರೆ. ಕಾರ್ಯಕರ್ತರು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು  ಎಂದರು.

ಸಭೆಗೂ ಮುನ್ನ ಮುಖ್ಯಬೀದಿಯಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮತಯಾಚಿಸಿದರು. ಶಾಸಕ ಟಿ.ಡಿ.ರಾಜೇಗೌಡ,ಕಾಂಗ್ರೆಸ್ ಮುಖಂಡರಾದ ನಟರಾಜ್ ಮಾರನಕೂಡಿಗೆ, ಕೆ.ಸಿ.ವೆಂಕಟೇಶ್, ಮೇಗಳಬೈಲು ಚಂದ್ರಶೇಖರ್, ಜೆಡಿಎಸ್ ಮುಖಂಡರಾದ ವಿವೇಕಾನಂದ ಸುಂಕುರ್ಡಿ, ಗಿಣಕಲ್ ಭರತ್ ಸೇರಿದಂತೆ ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲೂಕುಗಳ ಕಾಂಗ್ರೆಸ್, ಜೆಡಿಎಸ್ ಮುಖಂಡರು ಕಾರ್ಯಕರ್ತರು ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News