ರೈತರನ್ನು ಸುಸ್ಥಿರ, ಆರ್ಥಿಕ ಸದೃಢತೆ ಹೊಂದಿದ ಕೃಷಿರನ್ನಾಗಿ ರೂಪಿಸಿ: ಆರ್.ವಿ.ದೇಶಪಾಂಡೆ

Update: 2019-04-09 17:13 GMT

ಬೆಂಗಳೂರು, ಎ.9: ರೈತರ ಸಾಲ ಮನ್ನಾ ಮಾಡಿ ಋಣಮುಕ್ತರನ್ನಾಗಿ ಮಾಡುವ ಬದಲಿಗೆ ಅವರನ್ನು ಸುಸ್ಥಿರ ಮತ್ತು ಆರ್ಥಿಕವಾಗಿ ಸದೃಢತೆ ಹೊಂದಿದ ಕೃಷಿಕರನ್ನಾಗಿ ರೂಪಿಸುವ ಅಗತ್ಯವಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು.

ಮಂಗಳವಾರ ನಗರದಲ್ಲಿ ನಡೆದ ಹೈಡ್ರೊಫೋನಿಕ್ (ಮಣ್ಣು ರಹಿತ ಜಲಕೃಷಿ ಪದ್ಧತಿ) ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ನಗರದ ಫಾರ್ಮ್ಸ್ 2050 ಮತ್ತು ಅಮೆರಿಕದ ಆ್ಯಮ್‌ಹೈಡ್ರೊ ಕಂಪೆನಿಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕುವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದಿನೇ ದಿನೇ ಕೃಷಿಭೂಮಿ ಸಂಕುಚಿತವಾಗುತ್ತಿದ್ದು, ಭವಿಷ್ಯದಲ್ಲಿ ಊರ್ಧ್ವಮುಖಿ ಕೃಷಿಯತ್ತ ಗಮನ ಹರಿಸುವ ಅಗತ್ಯವಿದೆ. ನಗರೀಕರಣ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಹೈಡ್ರೊಫೋನಿಕ್ ಕೃಷಿ ತಂತ್ರಜ್ಞಾನ ರೈತರ ಪಾಲಿನ ಆಶಾಕಿರಣವಾಗಿದೆ ಎಂದರು.

ಕೃಷಿ ಸಚಿವ ಶಿವಶಂಕರ ರೆಡ್ಡಿ ಮಾತನಾಡಿ, ಕಡಿಮೆ ಸಂಪನ್ಮೂಲದ ಸೂಕ್ಷ್ಮ ಕೃಷಿ ಪದ್ಧತಿ ವೇಗವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ರಾಜ್ಯದಲ್ಲಿಯೂ ಹೈಡ್ರೊಫೋನಿಕ್ ಕೃಷಿಯನ್ನು ಉತ್ತೇಜಿಸುವ ಅಗತ್ಯವಿದೆ ಎಂದರು.

ಫಾರ್ಮ್ಸ್ 2050 ಕಂಪನಿಯ ಮುಖ್ಯಸ್ಥರಾದ ಬಿ.ಎಂ.ಪಾಟೀಲ ಅವರು, ಮಧ್ಯಮ ವರ್ಗದ ಕೃಷಿಕರು ಆಧುನಿಕ ತಂತ್ರಜ್ಞಾನವನ್ನು ಸರಳವಾಗಿ ಬಳಸಿಕೊಳ್ಳುವತ್ತ ಮುಖ ಮಾಡಬೇಕು. ಭವಿಷ್ಯದಲ್ಲಿ ಎದುರಾಗಲಿರುವ ನೀರಿನ ಅಭಾವದಲ್ಲಿ, ಸುಲಭ ವಿಧಾನಗಳ ಮೂಲಕ ಹೇಗೆ ಕೃಷಿ ಮಾಡಬೇಕು ಎಂಬುದರತ್ತ ಹೆಚ್ಚಿನ ಗಮನ ಹರಿಸಬೇಕು ಎಂದರು.

ಆ್ಯಮ್‌ಹೈಡ್ರೊ ಕಂಪೆನಿಯ ಮುಖ್ಯ ಕಾರ್ಯ ನಿರ್ವಾಹಕಿ ಜೆನ್ನಿ ಹ್ಯಾರಿಸ್ ಮತ್ತು ತಾಂತ್ರಿಕ ನಿರ್ದೇಶಕ ಜೋ ಸ್ವಾರ್ಟ್ಸ್ ಪ್ರಶ್ನೋತ್ತರ ಸಂವಾದ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಗಹ ಸಚಿವ ಎಂ.ಬಿ.ಪಾಟೀಲ್, ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ, ಆ್ಯಮ್‌ಹೈಡ್ರೊ ಕಂಪೆನಿಯ ಸಿಇಒ ಜೆನ್ನಿ ಹ್ಯಾರಿಸ್, ತಾಂತ್ರಿಕ ನಿರ್ದೇಶಕ ಜೋ ಸ್ಪಾರ್ಟ್ಸ್ ಹಾಗೂ ಬಿ.ಎಂ.ಪಾಟೀಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News