ಮತದಾರರ ಓಲೈಕೆಗೆ ಹಣ, ಮದ್ಯ ಮತ್ತಿತರ ಆಮಿಷವೊಡ್ಡಿದರೆ ಕಠಿಣ ಕ್ರಮ: ಶಿವಮೊಗ್ಗ ಡಿಸಿ ದಯಾನಂದ್
ಶಿವಮೊಗ್ಗ, ಏ. 9: 'ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಚುನಾವಣಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು' ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಕೆ.ಎ.ದಯಾನಂದ್ರವರು ಸೂಚಿಸಿದ್ದಾರೆ.
ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಚುನಾವಣಾ ಪ್ರಚಾರ ಕಾರ್ಯಕ್ಕಾಗಿ ಬಳಸುವ ವಾಹನಗಳಿಗೆ ಸಂಬಂಧಿಸಿದಂತೆ, ಕಾರ್ಯಕ್ರಮಗಳ ಆಯೋಜನೆ, ಸ್ಟಾರ್ ಕ್ಯಾಂಪೇನರ್ ಗಳನ್ನು ಬಳಸಿಕೊಂಡು ಆಯೋಜಿಸುವ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ 48 ಗಂಟೆ ಮುಂಚಿತವಾಗಿ ಅನುಮತಿ ಪಡೆಯಬೇಕು. ಒಂದೇ ಸ್ಥಳದಲ್ಲಿ ಇಬ್ಬರು ಕಾರ್ಯಕ್ರಮ ಆಯೋಜಿಸಲು ಮನವಿ ಸಲ್ಲಿಸಿದಲ್ಲಿ, ಮೊದಲು ಬಂದವರಿಗೆ ಅನುಮತಿ ನೀಡಲಾಗುವುದು.
ಒಂದೇ ದಿನ ಐದಾರು ಕಡೆ ಕಾರ್ಯಕ್ರಮ ಆಯೋಜಿಸುವುದಿದ್ದಲ್ಲಿ ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸಿ ಅನುಮತಿ ಪಡೆಯಬೇಕು. ಮತದಾರರನ್ನು ಓಲೈಸಲು ಊಟ, ಹಣ ಮದ್ಯ ಹಂಚಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು. ಅನುಮತಿ ಇಲ್ಲದೇ ರಾತ್ರಿ 10 ರ ನಂತರ ಕಾರ್ಯಕ್ರಮ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.
ಚುನಾವಣಾ ಅಕ್ರಮಗಳು ನಡೆಸದಂತೆ ಹಾಗೂ ಬೇರೆ ಯಾವುದೇ ರಾಜಕೀಯ ಪಕ್ಷಗಳು ಅಥವಾ ಅವರಿಗೆ ಸಂಬಂಧಿಸಿದ ವ್ಯಕ್ತಿಗಳು ಅಕ್ರಮಗಳು ನಡೆಸುತ್ತಿದ್ದಲ್ಲಿ, ಸಿ-ವಿಜಲ್ ಮೂಲಕ ದೂರು ದಾಖಲಿಸಬಹುದಾಗಿದೆ. ಅತ್ಯಲ್ಪ ಸಮಯದಲ್ಲಿ ಅವುಗಳನ್ನು ನಿರ್ವಹಿಸಲಾಗುವುದು. ಅಂತಹವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು. 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಂಚರಿಸುವ ಅಭ್ಯರ್ಥಿಗಳು ತಮ್ಮ ವಾಹನಗಳಿಗೆ ಪರವಾನಿಗೆಯನ್ನು ಸುವಿಧಾದಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಒಟ್ಟಾರೆ ಓರ್ವ ಅಭ್ಯರ್ಥಿಯು 70 ಲಕ್ಷ ರೂ.ಗಳ ಮಿತಿಯಲ್ಲಿ ಚುನಾವಣಾ ವೆಚ್ಚ ನಿರ್ವಹಿಸಬಹುದಾಗಿದೆ. ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಮುನ್ನ ಪ್ರಚಾರ ಕಾರ್ಯ ಸ್ಥಗಿತಗೊಳಿಸಬೇಕು. ಚುನಾವಣಾ ಪ್ರಚಾರಕ್ಕಾಗಿ ಬಂದ ಪ್ರಚಾರಕರು ಕ್ಷೇತ್ರ ಬಿಟ್ಟು ತೆರಳಬೇಕು.
ಲೆಕ್ಕಪತ್ರ: ಪ್ರತಿ ಅಭ್ಯರ್ಥಿಯು ಪ್ರತಿ ಮೂರು ದಿನಗಳಿಗೊಮ್ಮೆ ತಮ್ಮ ಲೆಕ್ಕಪತ್ರವನ್ನು ಚುನಾವಣಾ ಶಾಖೆಯ ಲೆಕ್ಕಪತ್ರ ನಿರ್ವಾಹಕರಲ್ಲಿ ಸಲ್ಲಿಸಿ ದಾಖಲಿಸಿಕೊಳ್ಳಬೇಕು. ತಮ್ಮ ಪ್ರಚಾರ ಸಾಮಾಗ್ರಿ, ಜಾಹಿರಾತುಗಳು ಸೇರಿದಂತೆ ಎಲ್ಲ ರೀತಿಯ ಲೆಕ್ಕಪತ್ರವನ್ನು ಸಕಾಲದಲ್ಲಿ ಸಲ್ಲಿಸಬೇಕು. ರಾಜಕೀಯ ಪಕ್ಷದ ಪರವಾಗಿ ಕಾರ್ಯನಿರ್ವಹಿಸುವ ಕಾರ್ಯಕರ್ತರಿಗೆ ತಮ್ಮ ಜವಾಬ್ದಾರಿಗಳ ಹಾಗೂ ನೀತಿಸಂಹಿತೆಯ ಕುರಿತು ಅರಿವು ಮೂಡಿಸುವುದು ಅಗತ್ಯ ಎಂದರು.
ಪ್ರಸ್ತುತ ಚುನಾವಣೆಯಲ್ಲಿ ರಾಷ್ಟ್ರೀಯ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಮತದಾರರ ಯಾದಿಯನ್ನು ನೀಡಲಾಗುವುದು. ಪಕ್ಷೇತರ ಅಭ್ಯರ್ಥಿಗಳು ಹಣ ಪಾವತಿಸಿ ಯಾದಿಯನ್ನು ಪಡೆದುಕೊಳ್ಳಬೇಕು. ಕ್ರಿಮಿನಲ್ ಪ್ರಕರಣದ ವಿಚಾರಣೆ ಬಾಕಿ ಇರುವ ಅಭ್ಯರ್ಥಿಯು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಸಾರ ಹೊಂದಿರುವ ದಿನಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ 3 ಬಾರಿ ಕಡ್ಡಾಯವಾಗಿ ಜಾಹಿರಾತನ್ನು ನೀಡುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.
ಮತದಾನ: ಪ್ರಸ್ತುತ ಚುನಾವಣೆಯಲ್ಲಿ ಮತದಾರರ ಗುರುತಿನ ಹೊಂದಿರುವವರು ಮತ ಚಲಾಯಿಸುವಂತೆ ಗುರುತಿನ ಚೀಟಿ ಹೊಂದಿರದ ಮತದಾರರು ಚುನಾವಣಾ ಆಯೋಗವು ಸೂಚಿಸಿರುವ ಸಾಕ್ಷ್ಯಗಳನ್ನು ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ ಎಂದ ಅವರು, ಅವುಗಳಲ್ಲಿ ಮುಖ್ಯವಾಗಿ ಪಾಸ್ಪೋರ್ಟ್, ವಾಹನ ಚಾಲನಾ ಪರವಾನಿಗೆ, ಪಾನ್ಕಾರ್ಡ್, ಭಾವಚಿತ್ರವಿರುವ ಪಿಂಚಣಿ ದಾಖಲಾತಿ, ಆಧಾರ್ ಕಾರ್ಡ್, ಕಾರ್ಮಿಕ ಸಚಿವಾಲಯದಿಂದ ನೀಡಲಾದ ಆರೋಗ್ಯ ವಿಮೆ ಸ್ಮಾರ್ಟ್ಕಾರ್ಡ್,
ಪ್ರತ್ಯೇಕ ಕೊಠಡಿ: ಪ್ರಸ್ತುತ ಚುನಾವಣೆಯಲ್ಲಿ ಮತದಾನದ ನಂತರ ಸ್ಟ್ರಾಂಗ್ರೂಮ್ನಲ್ಲಿ ಸಂಗ್ರಹಿಸಿರುವ ಮತಯಂತ್ರಗಳನ್ನು ಕಾಯ್ದುಕೊಳ್ಳಲಿಚ್ಚಿಸುವ ರಾಜಕೀಯ ಪಕ್ಷದ ಅಭ್ಯರ್ಥಿಗಳು ಅಥವಾ ಅವರ ಪರವಾಗಿರುವವರಿಗಾಗಿ ಸ್ಟ್ರಾಂಗ್ರೂಂಗೆ ಸಮೀಪದಲ್ಲಿರುವಂತೆ ಪ್ರತ್ಯೇಕ ಕೊಠಡಿಯನ್ನು ಕಲ್ಪಿಸಿಕೊಡಲಾಗುವುದು. ಅಲ್ಲಿಂದಲೇ ಭದ್ರತಾ ಕೊಠಡಿಯಲ್ಲಿ ಸಂಗ್ರಹಿಸಿಡಲಾಗಿಡುವ ಎಲ್ಲಾ ಮತಗಟ್ಟೆಗಳ ಚಿತ್ರಣವನ್ನು ಕ್ಯಾಮರಾ ಮೂಲಕ ವೀಕ್ಷಿಸಬಹುದಾಗಿದೆ ಎಂದರು.
ಸಭೆಯಲ್ಲಿ ಸಾಮಾನ್ಯ ವೀಕ್ಷಕ ಶಾಹಿದ್ ಮಂಜರ್ ಅಬ್ಬಾಸ್ ರಿಜ್ವಿ, ಪುಷ್ಪೇಂದ್ರ ಸಿಂಗ್, ರಾಜೀವ್ಕುಮಾರ್ ಹಾಗೂ ಪೊಲೀಸ್ ವೀಕ್ಷಕ ರಾಮ್ಸಿಂಗ್, ಮಹಾನಗರಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಸೇರಿದಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಧಾರ್ಮಿಕ ಸ್ಥಳ, ಸರ್ಕಾರಿ ಕಚೇರಿಗಳಲ್ಲಿ ಪ್ರಚಾರ ನಿಷಿದ್ದ
ಸಿನಿಮಾ ಮಂದಿರ, ವಿಡಿಯೋವಾಲ್ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚಾರ ಕೈಗೊಳ್ಳುವ ಅಭ್ಯರ್ಥಿಯು ಪ್ರಚಾರ ಸಾಮಗ್ರಿಯನ್ನು ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲುಸ್ತುವಾರಿ ಸಮಿತಿಯ ಮುಂದೆ ಹಾಜರುಪಡಿಸಿ, ಕಡ್ಡಾಯವಾಗಿ ಅನುಮತಿ ಪಡೆದ ನಂತರವೇ ಪ್ರಚಾರ ಕೈಗೊಳ್ಳಬೇಕು. ಧಾರ್ಮಿಕ ಸ್ಥಳಗಳು, ಸರ್ಕಾರಿ ಕಚೇರಿ-ಕಟ್ಟಡಗಳನ್ನು ಪ್ರಚಾರ ಕಾರ್ಯಕ್ಕೆ ಬಳಸದಂತೆ ಸೂಚಿಸಿದ ಅವರು, ಅಪ್ರಾಪ್ತರನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳದಂತೆ ಜಿಲ್ಲಾಧಿಕಾರಿಗಳು ರಾಜಕೀಯ ಪಕ್ಷಗಳ ಮುಖಂಡರಿಗೆ ಸೂಚಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಪ್ರತಿಯೊಬ್ಬರೂ ಖಚಿತಪಡಿಸಿಕೊಂಡೇ ಮತಕೇಂದ್ರಕ್ಕೆ ಹೋಗುವುದು ಒಳಿತು. ಹಳೆಯ ಗುರುತಿನ ಚೀಟಿಯನ್ನಿಟ್ಟುಕೊಂಡು ತಮ್ಮ ಹೆಸರಿರುವುದನ್ನು ಪರಿಶೀಲಿಸಿಕೊಳ್ಳದೇ ಮತಗಟ್ಟೆಗೆ ಹೋಗಿ ಹೆಸರಿಲ್ಲದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವುದು ತರವಲ್ಲ. ಈ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರು ಇವುಗಳ ಬಗ್ಗೆ ಗಮನಹರಿಸುವಂತೆ ಅವರು ತಿಳಿಸಿದರು.
ಮತದಾನಕ್ಕೆ ನಿಗದಿತ ಗುರುತಿನ ಚೀಟಿ ಹಾಜರಿ ಕಡ್ಡಾಯ
ಅಂಚೆ ಕಚೇರಿ-ಬ್ಯಾಂಕ್ನಿಂದ ಭಾವಚಿತ್ರ ಹೊಂದಿರುವ ಪಾಸ್ಬುಕ್, ಉದ್ಯೋಗ ಖಾತ್ರಿ ಉದ್ಯೋಗ ಚೀಟಿ, ಎನ್.ಪಿ.ಆರ್. ಅಡಿಯಲ್ಲಿ ಆರ್.ಜಿ.ಐ.ರವರು ಎನ್.ಪಿ.ಆರ್. ಅಡಿಯಲ್ಲಿ ನೀಡಿದ ಸ್ಮಾರ್ಟ್ಕಾರ್ಡ್, ಕೇಂದ್ರ ಸರ್ಕಾರ/ರಾಜ್ಯ ಸರ್ಕಾರ/ಪಬ್ಲಿಕ್ ಸೆಕ್ಟರ್ ಅಂಡರ್ ಟೇಕಿಂಗ್ಸ್ ಸಾರ್ವಜನಿಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ನೀಡಿರುವ ಭಾವಚಿತ್ರೆವನ್ನು ಹೊಂದಿರುವ ಸೇವಾ ಗುರುತಿನ ಚೀಟಿಗಳು ಅಥವಾ ಸಂಸದರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರುಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿಯನ್ನು ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ ಎಂದು ಡಿ.ಸಿ ಕೆ.ಎ.ದಯಾನಂದ್ ಮಾಹಿತಿ ನೀಡಿದ್ದಾರೆ.