ಕರ್ನಾಟಕ ರಾಷ್ಟ್ರ ಸಮಿತಿ 12 ಕ್ಷೇತ್ರಗಳಲ್ಲಿ ಸ್ಪರ್ಧೆ

Update: 2019-04-10 11:37 GMT

ಮಡಿಕೇರಿ,ಎ.10 :ಸ್ವಚ್ಛ, ಪ್ರಾಮಾಣಿಕ ಮತ್ತು ಜನಪರವಾದ ರಾಜಕಾರಣದ ಸಲುವಾಗಿ ಅಸ್ತಿತ್ವಕ್ಕೆ ತರಲಾಗಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಮೈಸೂರು-ಕೊಡಗು ಕ್ಷೇತ್ರ ಸೇರಿದಂತೆ 12 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾ ರೆಡ್ಡಿ ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಂಡು ಬರುತ್ತಿರುವ ವಿವಿಧ ರಾಜಕೀಯ ಪಕ್ಷಗಳ ಜನವಿರೋಧಿ ನಿಲುವುಗಳು, ಭ್ರಷ್ಟಾಚಾರ, ವಂಶಪಾರಂಪರ್ಯವಾದ ಆಡಳಿತವನ್ನು ದಿಕ್ಕರಿಸಿ, ಭ್ರಷ್ಟಾಚಾರ ರಹಿತವಾದ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರುವ ಧ್ಯೇಯೋದ್ದೇಶಗಳಿಂದ, ಪಕ್ಷವನ್ನು ಜನರಿಗೆ ಪರಿಚಯಿಸುವ ಉದ್ದೇಶಗಳ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆಯೆಂದು ಸ್ಪಷ್ಟಪಡಿಸಿದರು.

ಮೈಸೂರು-ಕೊಡಗು ಕ್ಷೇತ್ರಕ್ಕೆ ಕೆ.ಎಸ್. ಸೋಮಸುಂದರಂ ಅವರನ್ನು ಕಣಕ್ಕಿಳಿಸಲಾಗಿದೆ. ಇವರ ಕ್ರಮ ಸಂಖ್ಯೆ 22 ಆಗಿದ್ದು, ಇವರ ‘ವಿಶಲ್’ ಚಿಹ್ನೆಗೆ ಮತ ಹಾಕುವಂತೆ ಮನವಿ ಮಾಡಿಕೊಂಡ ಕೃಷ್ಣಾ ರೆಡ್ಡಿ, ಕರ್ನಾಟಕ ರಾಷ್ಟ್ರ ಸಮಿತಿಯು ಒಂದು ಪಕ್ಷವಾಗಿ ರಾಷ್ಟ್ರೀಯ ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಅಂತಿಮ ಹಂತದಲ್ಲಿರುವುದಾಗಿ ತಿಳಿಸಿದರು.

ಕೊಡಗಿನ ಪರಿಸ್ಥಿತಿಗಳಿಗೆ ಜೆಸಿಬಿ ಕಾರಣ: ಕಳೆದ ಸಾಲಿನ ಪ್ರಾಕೃತಿಕ ವಿಕೋಪದ ಬಳಿಕ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಕಾರ್ಯಗಳು ನಡೆಯದಿರುವುದಕ್ಕೆ, ಜಿಲ್ಲೆ ಕಡೆಗಣಿಸಲ್ಪಡುತ್ತಿರುವುದಕ್ಕೆ ರಾಜ್ಯದಲ್ಲಿನ  ಜೆಸಿಬಿ(ಜನತಾದಳ, ಕಾಂಗ್ರೆಸ್, ಬಿಜೆಪಿ) ಕಾರಣವೆಂದು ತೀಕ್ಷ್ಣವಾಗಿ ನುಡಿದ ಕೃಷ್ಣಾ ರೆಡ್ಡಿ, ಸ್ವಜನಪಕ್ಷಪಾತ, ವಂಶಪಾರಂಪರ್ಯ ರಾಜಕಾರಣಗಳಿಂದ ಇಂದು ಯಾವುದೇ ಪಕ್ಷದಿಂದ ಚುನಾವಣಾ ಸ್ಪರ್ಧೆಗೆ ಅಭ್ಯರ್ಥಿಗಳು ಮೊದಲೇ ನಿಗದಿಯಾಗಿರುತ್ತಾರೆಂದು ಮಾರ್ಮಿಕವಾಗಿ ನುಡಿದರು.

ಪ್ರಸ್ತುತ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆಯಾಗಿರುವ ಕೊಡಗನ್ನು ಕೇವಲ ಮೋಜು ಮಸ್ತಿ ಮಾಡುವ ರೆಸಾರ್ಟ್‍ನಂತೆ ಮಾತ್ರ ನೋಡಲಾಗುತ್ತಿದೆ. ಇಲ್ಲಿನ ಪ್ರಾಕೃತಿಕ ಸಂಪತ್ತು, ಇಲ್ಲಿನ ಜನರ ತ್ಯಾಗ ಬಲಿದಾನಗಳು ನಗಣ್ಯವಾಗಿದೆಯೆಂದು ಬೇಸರ ವ್ಯಕ್ತಪಡಿಸಿ, ಕರ್ನಾಟಕ ರಾಷ್ಟ್ರ ಸಮಿತಿಯು ಹಣ, ಹೆಂಡಗಳನ್ನು ಹಂಚುವ ರಾಜಕೀಯದಿಂದ ದೂರವಿದ್ದು, ಸ್ವಚ್ಛ , ಪ್ರಾಮಾಣಿಕವಾದ ರಾಜಕಾರಣದ ಚಿಂತನೆಗಳನ್ನು ಹೊಂದಿರುವ ಪಕ್ಷವಾಗಿದೆ. ನಮ್ಮ ಪ್ರಯತ್ನಕ್ಕೆ  ಯಶಸ್ಸು ಮುಂದಿನ ದಿನಗಳಲ್ಲಿ ದೊರಕಿಯೇ ತೀರುತ್ತದೆ. ರಾಜ್ಯದಲ್ಲಿ ಬದಲಾವಣೆಯನ್ನು ತಂದೇ ತೀರುವ ದೃಢ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ರಾಷ್ಟ್ರ ಸಮಿತಿಯ ಅಭ್ಯರ್ಥಿ ಸೋಮಸುಂದರ್ ಮಾತನಾಡಿ, ಭ್ರಷ್ಟಾಚಾರ ಮುಕ್ತವಾದ ವ್ಯವಸ್ಥೆಯನ್ನು ಸಮಾಜದಲ್ಲಿ ಕಾಣುವ ಸಲುವಾಗಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿರುವುದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎಸ್., ಸಾಹಿತಿ ಮತ್ತು ರೈತ ಮುಖಂಡ ಜೋಗನಹಳ್ಳಿ ಗುರುಮೂರ್ತಿ, ಮೋಹನ್ ಪರ್ಲಕೋಟಿ, ಮಂಜುಳಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News