ಕುಮಾರಸ್ವಾಮಿಗೆ ಕೊನೆಗಾಲ ಆರಂಭ: ಕೆ.ಎಸ್.ಈಶ್ವರಪ್ಪ

Update: 2019-04-11 14:42 GMT

ಬಾಗಲಕೋಟೆ, ಎ.11: ಸುದ್ದಿ ಮಾಡುವವರ ಸುದ್ದಿಗೆ ಇದೀಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಂದಿದ್ದು, ಅವರಿಗೆ ಕೊನೆಗಾಲ ಆರಂಭವಾಗಲಿದೆ ಎಂಬುದರ ಮುನ್ಸೂಚನೆ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ಜಿಲ್ಲೆಯ ಗುಳೇದಗುಡ್ಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆಯಾದರೆ ಅದಕ್ಕೆ ನಾನು ಜವಾಬ್ದಾರನಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.

ಕುಮಾರಸ್ವಾಮಿ ಅತಿ ಶೀಘ್ರದಲ್ಲೇ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತಾರೆ. ಕುಮಾರಸ್ವಾಮಿಗೆ ಇದರ ಮುನ್ಸೂಚನೆ ಸಿಕ್ಕಿದೆ. ಅದಕ್ಕಾಗಿಯೇ ಎಲ್ಲರ ಮೇಲೆ ಆರೋಪಗಳ ಸುರಿಮಳೆಗರೆಯುತ್ತಿರುವುದು ಎಂದು ಕೆ.ಎಸ್.ಈಶ್ವರಪ್ಪ ಇದೇ ವೇಳೆ ವಾಗ್ದಾಳಿ ನಡೆಸಿದರು.

ಬಿಜೆಪಿ ಎಂದಿಗೂ ಮಾಧ್ಯಮದವರ ರಕ್ಷಣೆ ನಿಂತಿದೆ. ಆದರೆ, ಕಾಂಗ್ರೆಸ್-ಜೆಡಿಎಸ್ ಮಾಧ್ಯಮಗಳ ವಿರುದ್ಧವಾಗಿವೆ ಎಂದ ಈಶ್ವರಪ್ಪ, ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯಲ್ಲಿ ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡಲು ಪ್ರಯತ್ನಿಸಿದ್ದರು. ಆಗ ನಾವು ಅದರ ವಿರುದ್ಧ ಹೋರಾಡಿ ಜೈಲಿಗೆ ಹೋಗಿದ್ದೆವು.

ನಂತರ ಇಂದಿರಾಗಾಂಧಿ ಸರಕಾರ ಕಳೆದುಕೊಂಡರು. ಇದೀಗ ಕುಮಾರಸ್ವಾಮಿ ಸರದಿ. ಮಾಧ್ಯಮ ಪ್ರತಿನಿಧಿಗಳ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶವಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ ಈಶ್ವರಪ್ಪ, ಕುಮಾರಸ್ವಾಮಿ ಸರಕಾರಕ್ಕೆ ಶೀಘ್ರವೆ ಕೊನೆಗಾಲ ಬರಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News