ಬೆಳಗಾವಿ ಜನತೆಗೆ ಮೋಸ ಮಾಡಿದ ಸುರೇಶ್ ಅಂಗಡಿ: ಲಕ್ಷ್ಮಿ ಹೆಬ್ಬಾಳ್ಕರ್

Update: 2019-04-15 17:05 GMT

ಬೆಳಗಾವಿ, ಎ.15: ಬೆಳಗಾವಿ ಸಂಸದ ಸುರೇಶ್ ಅಂಗಡಿಗೆ ಕ್ಷೇತ್ರದ ಜನ ಮೂರು ಬಾರಿ ಸೇವೆ ಮಾಡಲು ಅವಕಾಶ ನೀಡಿದ್ದೀರಾ. 15 ವರ್ಷದಲ್ಲಿ ನಿಮ್ಮೂರಿಗೆ ಇವರು ಎಷ್ಟು ಸಲ ಬಂದಿದ್ದಾರೆ? ಯಾರ ಸುಖ, ದುಃಖಗಳನ್ನು ಆಲಿಸಿದ್ದಾರೆ? ಅವರು ನಿಮ್ಮ ಊರಿಗೆ ಮಾಡಿದ್ದೇನು? ಇವೆಲ್ಲ ಪ್ರಶ್ನೆಗಳಿಗೆ ನೀವೇ ಉತ್ತರ ಹುಡುಕಿ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಸೋಮವಾರ ಸವದತ್ತಿ ತಾಲೂಕಿನ ಹೂಲಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ವಿ.ಎಸ್. ಸಾಧುನವರ್ ಪರವಾಗಿ ಮತ ಯಾಚನೆ ಮಾಡುವ ವೇಳೆ ಅವರು ಗ್ರಾಮಸ್ಥರೊಂದಿಗೆ ಮಾತನಾಡಿದರು.

ಸುರೇಶ್ ಅಂಗಡಿ ಆಡಳಿತ ಪಕ್ಷದಲ್ಲಿದ್ದರೂ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರಲಿಲ್ಲ. ತಮ್ಮ ಅಧಿಕಾರದ ಅವಧಿಯಲ್ಲಿ ತಮ್ಮ ಸ್ವಂತ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಿಕೊಂಡ ಅಂಗಡಿ, ಜನ ಸಾಮಾನ್ಯರಿಗೆ ಏನೂ ಮಾಡಲಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಟೀಕಾ ಪ್ರಹಾರ ನಡೆಸಿದರು.

15 ವರ್ಷಗಳಿಂದ ಬೆಳಗಾವಿ ಕ್ಷೇತ್ರದ ಜನತೆಗೆ ಮೋಸ ಮಾಡಿರುವ ಸುರೇಶ್ ಅಂಗಡಿ, ಈಗ ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ನಮ್ಮೂರಿನ ಸಮಸ್ಯೆ ಆಲಿಸಲು ಸುರೇಶ್ ಅಂಗಡಿಗೆ ಬರಲು ಸಾಧ್ಯವಾಗಿಲ್ಲ. ನಮ್ಮೂರಿನ ಸಮಸ್ಯೆ ಬಗೆಹರಿಸಲು ನರೇಂದ್ರ ಮೋದಿ ಬರಲು ಸಾಧ್ಯವೆ ಎಂದು ಅವರು ಪ್ರಶ್ನಿಸಿದರು.

ಹಳ್ಳಿಯ ಜನ ಗಲ್ಲಿ ನೋಡಿ ಮತ ಹಾಕಬೇಕು, ದಿಲ್ಲಿ ನೋಡಿ ಮತ ಹಾಕುವುದು ಬೇಡ. ಸಾಧುನವರ್ ಅವರಿಗೆ ನಿಮ್ಮೆಲ್ಲರ ಸೇವೆ ಮಾಡುವ ಒಂದು ಅವಕಾಶ ಕೊಡಿ ಎಂದು ಮತದಾರರರಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಡಾ.ವಿ.ಎಸ್.ಸಾಧುನವರ್ ಮಾತನಾಡಿ, ಸಂಸದ ಸುರೇಶ್ ಅಂಗಡಿ ಅವರಿಗೆ ಮತಯಾಚಿಸಲು ಯಾವುದೇ ಬಂಡವಾಳವೇ ಇಲ್ಲ. ಹದಿನೈದು ವರ್ಷದಲ್ಲಿ ಕ್ಷೇತ್ರದ ಜನ ಅಂಗಡಿ ಅವರ ಕಾರ್ಯವೈಖರಿ ನೋಡಿ ಸುಸ್ತಾಗಿದ್ದಾರೆ. ಕ್ಷೇತ್ರದಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ. ಈ ಚುನಾವಣೆಯಲ್ಲಿಯೂ ಬಿಜೆಪಿಯ ಸುಳ್ಳು ಭಾಷಣಕ್ಕೆ ಮತದಾರರು ಮರಳಾಗುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಸವದತ್ತಿ ತಾಲೂಕಿನ ಎಲ್ಲ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News