ಮತದಾನಕ್ಕೆ 48 ಗಂಟೆಗಳ ಮುನ್ನ ವಾಹನ ಪರವಾನಿಗೆ ಮುಕ್ತಾಯ: ಧಾರವಾಡ ಡಿಸಿ ದೀಪಾ ಚೋಳನ್

Update: 2019-04-17 16:06 GMT

ಧಾರವಾಡ, ಎ.17: ಇದೇ ತಿಂಗಳ 23ರಂದು ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಕ್ಷೇತ್ರದ ಮತದಾರರಲ್ಲದವರು ಮತದಾನಕ್ಕೆ 48 ಗಂಟೆಗಳ ಪೂರ್ವದಲ್ಲಿ ಕ್ಷೇತ್ರದಿಂದ ಹೊರ ನಡೆಯಬೇಕು. ಮತಗಟ್ಟೆಗಳಿಗೆ ಯಾರೂ ಕೂಡ ಮೊಬೈಲ್ ತೆಗೆದುಕೊಂಡು ಬರಕೂಡದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಅಭ್ಯರ್ಥಿಗಳು ಮತ್ತು ಏಜೆಂಟರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮತಗಟ್ಟೆಗೆ 200 ಮೀಟರುಗಳ ಅಂತರದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ತಮ್ಮ ಟೆಂಟ್ ಹಾಕಿಕೊಳ್ಳಬಹುದು ಎಂದು ಹೇಳಿದರು.

ಮತದಾನದ ಮುನ್ನಾ ದಿನವಾದ ಎ.22 ಹಾಗೂ ಮತದಾನ ದಿನ ಎ.23ರಂದು ಮುದ್ರಣ ಮಾಧ್ಯಮಗಳೂ ಸೇರಿದಂತೆ ಯಾವುದೇ ರೀತಿಯ ವಿದ್ಯುನ್ಮಾನ ಮಾಧ್ಯಮಗಳು, ಬಲ್ಕ್ ಎಸ್‌ಎಂಎಸ್, ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಪ್ರಕಟಿಸಲು ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಸಮಿತಿಯ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಅವರು ತಿಳಿಸಿದರು.

ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಜಾಹೀರಾತಿನ ಪ್ರತಿ ಲಗತ್ತಿಸಿ ಎ.20ರೊಳಗಾಗಿ ಸಮಿತಿಗೆ ಸಲ್ಲಿಸಬೇಕು. ಮತದಾನ ಪೂರ್ವದ ಅವಧಿಯಲ್ಲಿ ಯಾವುದೇ ಕಲ್ಯಾಣ ಮಂಟಪ, ಸಮುದಾಯ ಭವನ, ಸಾರ್ವಜನಿಕ ಸ್ಥಳಗಳಲ್ಲಿ ಊಟ, ಉಪಾಹಾರ ಏರ್ಪಡಿಸಿದರೆ, ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ದೀಪಾ ಚೋಳನ್ ಹೇಳಿದರು.

ಮತದಾನಕ್ಕೆ ಬರುವಾಗ ಭಾವಚಿತ್ರವುಳ್ಳ ಮತದಾರರ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗ ಸೂಚಿಸಿರುವ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ಮತ ಚಲಾಯಿಸಬಹುದು. ಚುನಾವಣಾ ಪ್ರಚಾರಕ್ಕೆ ಪರವಾನಗಿ ಪಡೆದಿರುವ ವಾಹನಗಳ ಅವಧಿಯು ಎ.21 ರ ಸಂಜೆ ಮುಕ್ತಾಯಗೊಳ್ಳುತ್ತದೆ. ನಂತರ ಅಭ್ಯರ್ಥಿ ಹಾಗೂ ಏಜೆಂಟ್‌ರ ಬಳಕೆಗೆ ಒಂದು ವಾಹನಕ್ಕೆ ಮಾತ್ರ ಪರವಾನಗಿ ಇರುತ್ತದೆ ಎಂದು ಅವರು ತಿಳಿಸಿದರು.

ಇವಿಎಂ, ವಿವಿಪ್ಯಾಟ್‌ಗಳ ರ್ಯಾಂಡಮೈಸೇಷನ್, ಚುನಾವಣಾ ಚಿಹ್ನೆಗಳನ್ನು ಅಪ್‌ಲೋಡ್ ಮಾಡುವಾಗ ಅಭ್ಯರ್ಥಿಗಳು ಅಥವಾ ಅವರ ಏಜೆಂಟ್‌ರು ತಪ್ಪದೇ ಹಾಜರಿರಬೇಕು ಎಂದು ದೀಪಾ ಚೋಳನ್ ಕೋರಿದರು.

ಇದೇ ಸಂದರ್ಭದಲ್ಲಿ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕುರಿತ ವಿವರಗಳನ್ನು ಜಿಲ್ಲಾಧಿಕಾರಿಗಳು ರಾಜಕೀಯ ಪಕ್ಷಗಳಿಗೆ ಒದಗಿಸಿದರು. ಕೇಂದ್ರ ಚುನಾವಣಾ ಆಯೋಗದ ವೀಕ್ಷಕ ಭಾನುಪ್ರಕಾಶ್ ಏಟೂರು, ಅಪರ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ ಸೇರಿದಂತೆ, ವಿವಿಧ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News