×
Ad

ಮೋದಿ ಸುಳ್ಳು ಹೇಳುವುದರಲ್ಲಿ ಎಕ್ಸ್‌ಪರ್ಟ್: ಎಚ್.ಕೆ.ಪಾಟೀಲ್

Update: 2019-04-17 21:45 IST

ಧಾರವಾಡ, ಎ.17: ರೈತರು, ಬಡವರನ್ನು ಸಂಕಷ್ಟದಿಂದ ಪಾರು ಮಾಡಲು ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಅಧಿಕಾರಕ್ಕೆ ತರಬೇಕೆಂದು ರಾಜ್ಯ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ಬುಧವಾರ ಧಾರವಾಡದ ಮಾಡರ್ನ್ ಹಾಲ್‌ನಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದ ಜನರಿಗೆ 5 ವರ್ಷಗಳಲ್ಲಿ ಸಾಕಷ್ಟು ತೊಂದರೆ ನೀಡಿದೆ. ಎಲ್ಲ ಸಮುದಾಯದವರು ಈ ಬಾರಿ ಯಾವುದೇ ಕಾರಣಕ್ಕೂ ಬಿಜೆಪಿಯನ್ನ ಬೆಂಬಲಿಸಬಾರದು ಎಂದರು.

ಪ್ರಧಾನಿ ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿದ್ದಾರೆ. ಬಿಜೆಪಿಗೆ ಮತ್ತೆ ಅಧಿಕಾರ ನೀಡಿದರೆ ಇನ್ನಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವಿರುವುದರಿಂದ ದೇಶದ ಹಿತದೃಷ್ಟಿಯಿಂದ ಈ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾದ ವಿನಯ್ ಕುಲಕರ್ಣಿ ಅವರನ್ನು ಬೆಂಬಲಿಸಿ ಎಂದು ಕರೆ ನೀಡಿದರು.

ಬಿಜೆಪಿ ಸರಕಾರದಿಂದ ಜನ ಸಂಕಷ್ಟಕ್ಕೀಡಾಗಿದ್ದಾರೆ. ನೋಟು ಅಮಾನ್ಯೀಕರಣ, ಜಿಎಸ್ಟಿ, ಅಡುಗೆ ಅನಿಲ ಬೆಲೆ ಹೆಚ್ಚಳ ಇತ್ಯಾದಿ ಮೂಲ ಅವಶ್ಯಕತೆಗಳ ಬೆಲೆ ಹೆಚ್ಚಳದಿಂದ ಜನರು ರೋಸಿಹೋಗಿದ್ದಾರೆ. ಬಿಜೆಪಿ ಕೇವಲ ಸುಳ್ಳು ಭರವಸೆ ನೀಡುವುದರಲ್ಲಿ 5 ವರ್ಷ ಕಾಲಹರಣ ಮಾಡಿದೆ. ಅದು ಹೇಳಿದಂತೆ ನಡೆದಿಲ್ಲ. ವಿದೇಶದಿಂದ ಕಪ್ಪು ಹಣ ವಾಪಸ್ ತಂದು ಪ್ರತಿಯೊಬ್ಬರ ಬಡವರ ಖಾತೆಗೆ ಹಣ ಹಾಕಲಾಗುವುದು ಎಂದು ಹೇಳಲಾಗಿತ್ತು. ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಸಾಲ ಮನ್ನಾ ಸೇರಿದಂತೆ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದ ಯಾವ ಸಂಗತಿಯನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು.

ಸಭೆಯಲ್ಲಿ ಲೋಕಸಭಾ ಮೈತ್ರಿ ಅಭ್ಯರ್ಥಿ ವಿನಯ್ ಕುಲಕರ್ಣಿ, ಇಸ್ಮಾಯಿಲ್ ತಮಟಗಾರ, ಪ್ರಕಾಶ ಘಾಟಗೆ, ಹೇಮಂತ ಗುರ್ಲಹೂಸೂರ, ರಾಬರ್ಟ್ ದದ್ದಾಪುರಿ, ರಘು ಲಕ್ಕಣ್ಣವರ, ಸುಭಾಸ್ ಶಿಂಧೆ, ದಾನಪ್ಪ ಕಬ್ಬೇರ, ಶಾಂತಮ್ಮ ಗುಜ್ಜಳ, ಬಸವರಾಜ ಮಲಕಾರಿ, ಸ್ವಾತಿ ಮಾಳಗಿ, ಆನಂದ ಸಿಂಗನಾಥ, ಆನಂದ ಮುಶನ್ನವರ, ಯಾಶಿನ ಹಾವೇರಿಪೇಟ್, ಪ್ರಕಾಶ ಪವಾರ, ಶಿವಶಂಕರ ಹಪ್ಪನ್ನವರ, ಶೈಲಾ ಕಾಮರೆಡ್ಡಿ ಸೇರಿದಂತೆ ವಿವಿಧ ಘಟಕದ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News