ಮಂಟಪಕ್ಕೂ ಮುನ್ನ ಮತಗಟ್ಟೆಗೆ ತೆರಳಿದ ವಧು-ವರರು: ತಾಂತ್ರಿಕ ದೋಷದಿಂದಾಗಿ ಮತ ಚಲಾಯಿಸದೆ ಹಿಂದಿರುಗಿದ ಯುವಕ
Update: 2019-04-18 12:17 GMT
ಮಡಿಕೇರಿ,ಎ.18: ಮಡಿಕೇರಿ ತಾಲೂಕಿನ ಬೋಯಿಕೇರಿಯ ನಿವಾಸಿ ಕೃಷ್ಣಪ್ಪ ಅವರ ಪುತ್ರಿ ಯಶ್ವಿತ ಮತ್ತು ಮರಗೋಡಿನ ರಘ ಮತ್ತು ಅಪ್ಪಿ ದಂಪತಿಗಳ ಪುತ್ರ ಚಂದ್ರ ಅವರ ವಿವಾಹ ನಗರದ ಫೀ.ಮಾ.ಕಾರ್ಯಪ್ಪ ವೃತ್ತದ ಬಳಿಯ ಅಂಬೇಡ್ಕರ್ ಭವನದಲ್ಲಿ ಮತದಾನದ ದಿನವಾದ ಗುರುವಾರ ನಡೆಯಿತು.
ವಿವಾಹ ಮಂಟಪಕ್ಕೆ ಮುಂಜಾನೆ ಹೊರಡುವ ಸಂದರ್ಭ ವಧು ಯಶ್ವಿತ ಅವರು ಬೋಯಿಕೇರಿಯ ಮತಗಟ್ಟೆಗೆ ಕುಟುಂಬಸ್ಥರೊಂದಿಗೆ ತೆರಳಿ ಮತದಾನ ಮಾಡಿ ಇತರರಿಗೆ ಮಾದರಿಯಾದರು. ಮತ್ತೊಂದೆಡೆ ವರ ಚಂದ್ರ ಅವರು ಮರಗೋಡಿನ ಮತಗಟ್ಟೆಗೆ ತೆರಳಿ ಮತದಾನ ಮಾಡಿ ವಿವಾಹ ಮಂಟಪಕ್ಕೆ ಬರಲು ನಿರ್ಧರಿಸಿದರಾದರೂ, ಆ ಸಂದರ್ಭ ಮತಗಟ್ಟೆಯ ಮೆಷಿನ್ನ ತಾಂತ್ರಿಕ ದೋಷದಿಂದ ಮತದಾನ ಸಾಧ್ಯವಾಗದೆ ಹೋಯಿತು.
ವಿವಾಹ ಮಂಟಪದಲ್ಲಿ ಯಶ್ವಿತ ಶಾಯಿ ಹಾಕಿದ್ದ ತಮ್ಮ ಬೆರಳನ್ನು ತೋರಿಸಿ ಸಂತಸ ವ್ಯಕ್ತಪಡಿಸಿದರೆ, ವರ ಚಂದ್ರ ಅವರು ಮಧ್ಯಾಹ್ನದ ಬಳಿಕ ಮತಗಟ್ಟೆಗೆ ತೆರಳಿ ಮತದಾನ ಮಾಡುವುದಾಗಿ ತಿಳಿಸಿದರು.