ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ: ತಾಯಿಯ ಹಾಲಿನಲ್ಲಿ ಬಿರುಕು ಮೂಡಿಸುವ ಪ್ರಯತ್ನ- ನರೇಂದ್ರ ಮೋದಿ

Update: 2019-04-18 14:08 GMT

ಬಾಗಲಕೋಟೆ, ಎ.18: ಕಾಂಗ್ರೆಸ್‌ಗೆ ತನ್ನ ಅಸ್ತಿತ್ವದ ಸಮಾಜವನ್ನು ಒಡೆದು ಆಳುವ ಕಾಂಗ್ರೆಸ್ ಪಕ್ಷದ ಆಟದ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಧರ್ಮಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡಲಾಗಿತ್ತು ಎಂದು ಪ್ರಧಾನಿ ನರೇಂದ್ರಮೋದಿ ವಾಗ್ದಾಳಿ ನಡೆಸಿದರು.

ಗುರುವಾರ ಬಾಗಲಕೋಟೆಯಲ್ಲಿ ವಿಜಯಪುರ ಹಾಗೂ ಬಾಗಲಕೋಟೆ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಆಯೋಜಿಸಲಾಗಿದ್ದ ‘ವಿಜಯ ಸಂಕಲ್ಪ ರ‍್ಯಾಲಿ’ಯನ್ನುದ್ದೇಶಿಸಿ ಅವರು ಮಾತನಾಡಿದರು.

ಲಿಂಗಾಯತ ಧರ್ಮವನ್ನು ಒಡೆಯಲು ಪ್ರಯತ್ನಿಸಲಾಯಿತು. ತಾಯಿಯ ಹಾಲಿನಲ್ಲಿ ಬಿರುಕು ಮೂಡಿಸಲು ಕಾಂಗ್ರೆಸ್‌ನವರು ಮುಂದಾದರು. ಇದನ್ನು ಇವರ ಸಚಿವರೇ ಒಪ್ಪಿಕೊಂಡಿದ್ದಾರೆ. ಅಧಿಕಾರಕ್ಕಾಗಿ ಲಿಂಗಾಯತರನ್ನು ವಿಭಜಿಸಲು ಮುಂದಾದರು. ಇವತ್ತು ಇದೇ ವಿಚಾರದಲ್ಲಿ ಇವರ ಸಚಿವರು ಪರಸ್ಪರ ಕಚ್ಚಾಡುತ್ತಿದ್ದಾರೆ. ಇವರು ಎಷ್ಟೇ ಕುತಂತ್ರಗಳನ್ನು ನಡೆಸಿದರೂ ತಾಯಿಯ ಹಾಲು ಎರಡು ಭಾಗ ಆಗಲು ಸಾಧ್ಯವೇ? ಎಂದರು.

ಜಮ್ಮು ಕಾಶ್ಮೀರದ ನಾಯಕನೊಬ್ಬ ಹೇಳುತ್ತಾನೆ, ಅಲ್ಲಿಗೆ ಬೇರೆ ಪ್ರಧಾನಿ ಬೇಕಂತೆ. ಒಂದು ದೇಶದಲ್ಲಿ ಇಬ್ಬರು ಪ್ರಧಾನಿಗಳ ಅಗತ್ಯವಿದೆಯೇ? ದೇಶದ್ರೋಹಿಗಳಿಗೆ ಬಹಿರಂಗವಾಗಿ ಬೆಂಬಲ ನೀಡುವ ಕಾಂಗ್ರೆಸ್, ಮೋದಿಯನ್ನು ಕಳ್ಳ ಎಂದು ಹೇಳಲು ಹೋಗಿ ಇಡೀ ಹಿಂದುಳಿದ ವರ್ಗಕ್ಕೆ ಅವಮಾನ ಮಾಡುವ ಕೆಲಸ ಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮೇ 23ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಬಂದು, ಮತ್ತೊಮ್ಮೆ ಮೋದಿ ಸರಕಾರ ರಚನೆಯಾದಲ್ಲಿ, ಎಲ್ಲ ವರ್ಗಗಳ ಕಲ್ಯಾಣಕ್ಕಾಗಿ ಸಂಕಲ್ಪ ಮಾಡಿದ್ದೇವೆ. ಭಾರತವನ್ನು ಭಯೋತ್ಪಾದನೆ ಹಾಗೂ ನಕ್ಸಲ್‌ವಾದದಿಂದ ಮುಕ್ತಗೊಳಿಸಲಾಗುವುದು. 2022ರವರೆಗೆ ಎಲ್ಲ ಬಡವರಿಗೆ ಮನೆ ಹಾಗೂ ರೈತರ ಆದಾಯ ದ್ವಿಗುಣಗೊಳಿಸಲಾಗುವುದು ಎಂದು ಮೋದಿ ಹೇಳಿದರು.

ಪ್ರಧಾನಮಂತ್ರಿ ಫಸಲ್‌ಬಿಮಾ ಯೋಜನೆಯಡಿಯಲ್ಲಿ ರಾಜ್ಯದ ಫಲಾನುಭವಿ ರೈತರ ಪಟ್ಟಿಯನ್ನು ಈ ಸರಕಾರ ನಮಗೆ ನೀಡಲಿ. ಬರಗಾಲವನ್ನು ಸಮರ್ಥವಾಗಿ ಎದುರಿಸಲು ಜಲಶಕ್ತಿ ಮಂತ್ರಾಲಯ ರಚನೆ ಮಾಡಲಾಗುವುದು. ಅಲ್ಲದೇ, ದೇಶದ ನದಿಗಳು ಹಾಗೂ ಸಮುದ್ರದ ನೀರನ್ನು ತಂತ್ರಜ್ಞಾನದ ನೆರವಿನೊಂದಿಗೆ ಅಗತ್ಯ ಪ್ರದೇಶಗಳಿಗೆ ತಲುಪಿಸಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಅನೇಕ ಯೋಜನೆಗಳ ಬಗ್ಗೆ ನಾವು ಕೆಲಸ ಮಾಡುತ್ತಿದ್ದೇವೆ. ಹನಿ ನೀರಾವರಿಗೆ ಉತ್ತೇಜನ ನೀಡಲಾಗಿದೆ. ಆಲಮಟ್ಟಿ ಅಣೆಕಟ್ಟು ಸ್ವಚ್ಛತೆಗೆ ಎಲ್ಲ ನೆರವು ನೀಡಲು ನಾವು ಸಿದ್ಧವಿದ್ದೇವೆ. ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲು ಕಬ್ಬಿನಿಂದ ಎಥೆನಾಲ್ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದೆ. ಇದರಿಂದ ಕಬ್ಬು ಬೆಳೆಗಾರರಿಗೆ ಹೆಚ್ಚಿನ ಆದಾಯ ಸಿಗುತ್ತದೆ ಎಂದು ಮೋದಿ ಹೇಳಿದರು.

ಬಾಗಲಕೋಟೆಯಲ್ಲಿ ಇಳಕಲ್ ಸೀರೆ ಸಿದ್ಧಪಡಿಸುವ ಕಾರ್ಮಿಕರಿಗೆ ಪ್ರಧಾನಮಂತ್ರಿ ಕರ್ಮಯೋಗಿ ಯೋಜನೆಯಡಿ ಪ್ರತಿ ತಿಂಗಳು 3 ಸಾವಿರ ರೂ.ಪಿಂಚಣಿ ಸೌಲಭ್ಯ ಸಿಗುವಂತೆ ಕ್ರಮ ಕೈಗೊಳ್ಳಲಾಗಿದೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬುದು ನಮ್ಮ ಧ್ಯೇಯವಾಗಿದೆ. ದಿಲ್ಲಿಯಲ್ಲಿ ಮತ್ತೆ ಸಂಪೂರ್ಣ ಬಹುಮತದ ಸರಕಾರ ಬರಬೇಕು. ಅದಕ್ಕಾಗಿ, ನೀವೆಲ್ಲ ಸಹಕಾರ ನೀಡಬೇಕು ಎಂದು ಮೋದಿ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News