ಹಣ ಪಡೆದ ನಮ್ಮ ಶಾಸಕರು ದಿಲ್ಲಿ, ಮುಂಬೈಯಲ್ಲಿ ಓಡಾಡುತ್ತಿದ್ದಾರೆ: ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ, ಎ.19: ಬಿಜೆಪಿಯಿಂದ ಕೋಟ್ಯಂತರ ರೂ. ಹಣ ಪಡೆದಿರುವ ನಮ್ಮ ಪಕ್ಷದ ಕೆಲ ಶಾಸಕರು ಮುಂಬೈ ಹಾಗೂ ಹೊಸದಿಲ್ಲಿಗೆ ಓಡೋಡಿ ಹೋಗುತ್ತಿದ್ದಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಪ್ರಸ್ತಾಪಿಸದೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಉರುಳಿಸಲು ಬಿಜೆಪಿ ನಮ್ಮ ಕೆಲ ಶಾಸಕರಿಗೆ 20, 30 ಹಾಗೂ 40 ಕೋಟಿ ರೂ. ಹಣ ನೀಡಿದ್ದಾರೆ. ಈ ಎಲ್ಲ ಶಾಸಕರು ಮುಂಬೈ ಹಾಗೂ ಹೊಸದಿಲ್ಲಿಗೆ ಓಡಾಡುತ್ತಿದ್ದಾರೆ ಎಂದು ಹೆಸರು ಪ್ರಸ್ತಾಪಿಸದೇ ರಮೇಶ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಯವರು ನಮಗೆ ಕ್ಷೇತ್ರದಲ್ಲಿ ಕೆಲಸ ಮಾಡಲು ಬಿಡುತ್ತಿಲ್ಲ. ಸಂಕಷ್ಟದ ಪರಿಸ್ಥಿತಿಯಲ್ಲಿ ಕ್ಷೇತ್ರ ಅಭಿವೃದ್ಧಿ ಮಾಡುತ್ತಿದ್ದೇನೆ. ಮೋದಿ ಅವರ ಅಚ್ಛೆ ದಿನವೂ ಬರಲಿಲ್ಲ, 15 ಲಕ್ಷ ಅಕೌಂಟಿಗೂ ಬರಲಿಲ್ಲ. ಅವರ ಅವಧಿಯಲ್ಲಿ 10 ಲಕ್ಷ ಸೂಟ್ಬೂಟ್ ಹಾಕಿಕೊಂಡು ವಿದೇಶದಲ್ಲಿ ಓಡಾಡಿದ್ದಾರೆ ಎಂದು ದೂರಿದರು.