24 ವರ್ಷಗಳ ಬಳಿಕ...
Update: 2019-04-19 18:21 GMT
ಬರೊಬ್ಬರಿ 24 ವರ್ಷಗಳ ಕಾಲದ ದ್ವೇಷಕ್ಕೆ ಅಂತ್ಯ ಹಾಡಿರುವ ಎಸ್ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಹಾಗೂ ಬಿಎಸ್ಪಿ ವರಿಷ್ಠೆ ಮಾಯಾವತಿ ಶುಕ್ರವಾರ ಇಲ್ಲಿನ ಕ್ರಿಶ್ಚಿಯನ್ ಕಾಲೇಜಿನ ಮೈದಾನದಲ್ಲಿ ನಡೆದ ಚುನಾವಣಾ ರ್ಯಾಲಿ ಸಂದರ್ಭ ವೇದಿಕೆ ಹಂಚಿಕೊಂಡಿದ್ದಾರೆ. ಈ ಸಂದರ್ಭ ಮಾತನಾಡಿದ ಮಾಯಾವತಿ, ಎಸ್ಪಿ ಪೋಷಕ ಮುಲಾಯಂ ಸಿಂಗ್ ಯಾದವ್ ಪ್ರಧಾನಿ ನರೇಂದ್ರ ಮೋದಿ ಅವರಂತೆ ಹಿಂದುಳಿದ ವರ್ಗಗಳ ನಕಲಿ ನಾಯಕನಲ್ಲ. ಹಿಂದುಳಿದ ವರ್ಗಗಳ ನಿಜವಾದ ನಾಯಕ ಎಂದರು. 1995ರ ರಾಜ್ಯ ಕುಖ್ಯಾತ ಗೆಸ್ಟ್ ಹೌಸ್ ಘಟನೆಯ ಬಳಿಕ ಎಸ್ಪಿಯೊಂದಿಗೆ ಬಿಎಸ್ಪಿ ನಾಯಕಿ ಮೈತ್ರಿ ಕಡಿದುಕೊಂಡಿದ್ದರು. ಮುಲಾಯಂ ಸಿಂಗ್ ಅವರು ತನ್ನ ಸಂಕ್ಷಿಪ್ತ ಭಾಷಣದಲ್ಲಿ ‘‘ಬಹುಕಾಲದ ಬಳಿಕ ನಾನು ಹಾಗೂ ಮಾಯಾವತಿ ಅವರು ಒಂದೇ ವೇದಿಕೆ ಹಂಚಿಕೊಂಡಿದ್ದೇವೆ. ನಾವು ಅವರನ್ನು ಸ್ವಾಗತಿಸುತ್ತೇವೆ ಹಾಗೂ ಕೃತಜ್ಞತೆ ಸಲ್ಲಿಸುತ್ತೇವೆ.’’ ಎಂದು ಹೇಳಿದರು. ಅಲ್ಲದೆ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡಿದರು.