ನಾನು ಕ್ರಿಯಾಶೀಲ ರಾಜಕಾರಣಿಯೇ ಹೊರತು, ರಾಜಕೀಯ ಸನ್ಯಾಸಿಯಲ್ಲ: ಸಿದ್ದರಾಮಯ್ಯ

Update: 2019-04-20 17:05 GMT

ದಾವಣಗೆರೆ, ಎ.20: ‘ನಾನೇನೂ ರಾಜಕೀಯ ಸನ್ಯಾಸಿಯಲ್ಲ. ನಾನು ನಾಳೆ ಮತ್ತೆ ಸಿಎಂ ಆಗುತ್ತೇನೆ ಎಂದು ಹೇಳಿದ್ದೇನೆ. ಹಾಗಂತ ನಾಳೆಯೇ ಸಿಎಂ ಆಗುತ್ತೇನೆ ಎಂದು ಅಲ್ಲ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನು ಮುಖ್ಯ ಮಂತ್ರಿಯಾಗುತ್ತೇನೆ ಅಂದಿದ್ದೆ. ಅದರಲ್ಲಿ ತಪ್ಪೇನಿದೆ? ರಾಜಕೀಯ ಸನ್ಯಾಸಿಯಾಗಿದ್ದರೆ ಉರಿ ಬಿಸಿಲಲ್ಲಿ ರಾಜ್ಯಾದ್ಯಂತ ಯಾಕೆ ಸುತ್ತುತ್ತಿದ್ದೆ ಎಂದು ಪ್ರಶ್ನಿಸಿದ ಅವರು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನು ಮುಖ್ಯಮಂತ್ರಿಯಾಗಿ ರಾಜ್ಯದ ಬಡ ಕುಟುಂಬಗಳಿಗೆ ಅನ್ನ ಭಾಗ್ಯ ಯೋಜನೆಯಡಿ 7 ಕೆಜಿ ಬದಲಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದೇನೆ. ನಾನು ಕ್ರಿಯಾಶೀಲ ರಾಜಕಾರಣಿಯೇ ಹೊರತು, ರಾಜಕೀಯ ಸನ್ಯಾಸಿಯಲ್ಲ ಎಂದು ಪುನರುಚ್ಛರಿಸಿದರು.

ಮೇ 23ರ ನಂತರ ಮೈತ್ರಿ ಸರಕಾರ ಪತನವಾಗುತ್ತದೆ ಎಂದು ಯಡಿಯೂರಪ್ಪ ಸೇರಿದಂತೆ ಬಿಜೆಪಿಯವರು ಹೇಳುತ್ತಿದ್ದಾರೆ. ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಇದೇ ರೀತಿ ಹೇಳಿಕೊಂಡೇ ಬರುತ್ತಿದ್ದಾರೆ. ಮೈತ್ರಿ ಸರಕಾರ ಪತನವಾಯಿತೇ ಎಂದು ಅವರು ಪ್ರಶ್ನಿಸಿದರು.

ರಾಜ್ಯದ 28 ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಸಿಂಗಲ್ ಡಿಜಿಟ್ ಸಹ ದಾಟುವುದಿಲ್ಲ. ಇನ್ನು ಡಬಲ್ ಡಿಜಿಟ್ ಮಾತಾದರೂ ಎಲ್ಲಿಂದ ಬರಬೇಕು? ಶಿವಮೊಗ್ಗದಲ್ಲೂ ಬಿಜೆಪಿ ಅಭ್ಯರ್ಥಿ ಸೋಲು ನಿಶ್ಚಿತ. ಯಡಿಯೂರಪ್ಪನಿಗೆ ಮಾಧ್ಯಮದವರು ಪ್ರಶ್ನೆಗಳನ್ನು ಕೇಳುವುದಿಲ್ಲ ಅನಿಸುತ್ತೆ. ಅದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೋದಲ್ಲೆಲ್ಲಾ ಪೆದ್ದನಂತೆ ಹೇಳಿಕೆ ನೀಡುವುದು, ಮಾತಾಡುವುದನ್ನು ಮಾಡುತ್ತಾರೆ ಎಂದು ಟೀಕಿಸಿದರು.

ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ವಿಪ ಸದಸ್ಯರಾದ ಕೆ.ಅಬ್ದುಲ್ ಜಬ್ಬಾರ್, ಮೋಹನ ಕೊಂಡಜ್ಜಿ, ಕಾಂಗ್ರೆಸ್ ಅಭ್ಯರ್ಥಿ ಎಚ್.ಬಿ. ಮಂಜಪ್ಪ, ಸೈಯದ್ ಸೈಫುಲ್ಲಾ, ಡಾ.ನಸೀರ್ ಅಹ್ಮದ್ ಮತ್ತಿತರರಿದ್ದರು.

ಸಿಟಿ ರವಿ ಅಲ್ಲ; ಲೂಟಿ ರವಿ

ಬಿಜೆಪಿ ಶಾಸಕ ಸಿ.ಟಿ.ರವಿ ಅಲ್ಲ; ಆತ ಲೂಟಿ ರವಿ ಅಷ್ಟೇ. ಬರೀ ಬೂಟಾಟಿಕೆ ಮಾಡುತ್ತಾನೆ. ಕೆ.ಎಸ್.ಈಶ್ವರಪ್ಪ, ಲೂಟಿ ರವಿ, ಶೋಭಾ ಕರಂದ್ಲಾಜೆ ಇಂತಹವರ ಬಗ್ಗೆ ನಾನು ಮಾತನಾಡುವುದಿಲ್ಲ. ಇಂತಹವರ ಬಗ್ಗೆ ನಾನು ಮಾತನಾಡದಿರುವುದೇ ಒಳ್ಳೆಯದು ಎಂದು ಮೈತ್ರಿ ಸರಕಾರಕ್ಕೆ ಸಿದ್ದರಾಮಯ್ಯ ಟೈಂ ಬಾಂಬ್ ಫಿಕ್ಸ್ ಮಾಡಿದ್ದಾರೆಂಬ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ 5 ವರ್ಷದ ಅವಧಿ ಪೂರ್ಣಗೊಳಿಸಲಿದ್ದು, ಮೈತ್ರಿ ಸುಭದ್ರವಾಗಿರುತ್ತದೆ. ಯಡಿಯೂರಪ್ಪಗೆ ಮಾನ ಮರ್ಯಾದೆಯೇ ಇಲ್ಲ. 2 ದಿನ ಮುಖ್ಯಮಂತ್ರಿಯಾದರು. ಆಮೇಲೆ ಬಹುಮತ ಸಾಬೀತುಪಡಿಸುವಲ್ಲಿ ಫೇಲ್ ಆದರು. ಯಡಿಯೂರಪ್ಪನಿಗೆ ಅಧಿಕಾರದ ಹುಚ್ಚು ಹಿಡಿದಿದೆ.
-ಸಿದ್ದರಾಮಯ್ಯ , ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News