ಮೈಸೂರು-ಕೊಡಗು ಕ್ಷೇತ್ರ: ನನ್ನ ಗೆಲುವು ನಿಶ್ಚಿತ- ಕಾಂಗ್ರೆಸ್ ಅಭ್ಯರ್ಥಿ ವಿಜಯ್ ಶಂಕರ್ ವಿಶ್ವಾಸ

Update: 2019-04-20 18:09 GMT

ಮೈಸೂರು,ಎ.20: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹಿಂದೆಂದಿಗಿಂತ ಈ ಬಾರಿ ಹೆಚ್ಚು ಮತದಾನವಾಗಿದ್ದು, ನನ್ನ ಗೆಲುವು ನಿಶ್ಚಿತ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಪ್ರದೇಶಗಳಿಗಿಂತ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ಮತದಾನವಾಗಿದ್ದು, ಇದು ನನಗೆ ಅನುಕೂಲಕರವಾದ ವಾತಾವರಣವಿರುವುದಕ್ಕೆ ಸಾಕ್ಷಿ ಎಂದು ತಿಳಿಸಿದರು. ಕಾಂಗ್ರೆಸ್ ಕಾರ್ಯಕರ್ತರ ಜತೆಗೆ, ಜೆಡಿಎಸ್ ಕಾರ್ಯಕರ್ತರು, ಮುಖಂಡರು ಕೂಡ ಕೈಜೋಡಿಸಿದ್ದು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಹುಣಸೂರು, ಪಿರಿಯಾಪಟ್ಟಣ್ಣ, ಚಾಮುಂಡೇಶ್ವರಿ, ಎನ್.ಆರ್.ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಮತಗಳು ಬರಲಿದೆ. ಬಿಜೆಪಿಗೆ ಹೆಚ್ಚು ಅನುಕೂಲಕರ ಎನ್ನುವ ಕೆ.ಆರ್ ಹಾಗೂ ಚಾಮರಾಜ ಕ್ಷೇತ್ರಗಳಲ್ಲಿ ಮತದಾನ ಕುಂಠಿತವಾಗಿರುವುದು ಪಕ್ಷಕ್ಕೆ ಪೂರಕವಾಗಿದೆ ಎಂದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಪಕ್ಷಗಳಲ್ಲಿಯೂ ಹಲವಾರು ಆಕಾಂಕ್ಷಿಗಳಿದ್ದರು. ಅಭ್ಯರ್ಥಿ ಘೋಷಣೆ ನಂತರ ಎರಡು ಪಕ್ಷದ ಕಾರ್ಯಕರ್ತರು ಯಾವುದೇ ಬಂಡಾಯವಿಲ್ಲದೆ ಸಹಕರಿಸಿದ್ದು, ಅನಗತ್ಯ ಚರ್ಚೆ, ಸಂಘರ್ಷಕ್ಕೆ ಎಡೆಯಾಗದೆ ಮುಖಂಡರು ಎಚ್ಚರ ವಹಿಸಿದ್ದರು ಎಂದರು. ಇದು ನನ್ನ 6ನೇ ಲೋಕಸಭಾ ಚುನಾವಣೆಯಾಗಿದ್ದು, ಗ್ರಾಮೀಣ ಭಾಗದ ಮತದಾರರ ನಾಡಿ ಮಿಡಿತ ಬಲ್ಲೆ. ಮೇ 23 ರಂದು ನಿಶ್ಚಿತ ಶುಭ ಸುದ್ದಿಯೊಂದಿಗೆ ಭೇಟಿ ಮಾಡುವ ಆಶಾಭಾವವವನ್ನು ಅವರು ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಆರ್.ಜಿ.ನರಸಿಂಹ ಅಯ್ಯಂಗಾರ್, ರಘು, ಎಂ.ರಮೇಶ್, ಈಶ್ವರ್ ಚಕ್ಕಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News