ಫಲಿತಾಂಶ ಏನೇ ಬರಲಿ, ನಿಮ್ಮೊಂದಿಗೆ ಹೆಜ್ಜೆ ಹಾಕುತ್ತೇನೆ: ಮಂಡ್ಯ ಜನತೆಗೆ ಸುಮಲತಾ ಕೃತಜ್ಞತೆ

Update: 2019-04-20 18:36 GMT

ಮಂಡ್ಯ, ಎ.20: ಫಲಿತಾಂಶ ಏನೇ ಬರಲಿ. ಈ ಹೋರಾಟದ ಹಾದಿಯಲ್ಲಿ ನನ್ನೊಂದಿಗೆ ನಿಷ್ಠೆಯಿಂದ ಹೆಜ್ಜೆ ಹಾಕಿದ ಪ್ರತಿಯೊಬ್ಬರಿಗೂ ನನ್ನ ಅಂತರಾಳದ ಕೃತಜ್ಞತೆಗಳು. ನಿಮ್ಮೊಂದಿಗೆ ಸದಾ ಇರುತ್ತೇನೆ. ನಿಮ್ಮೊಂದಿಗೆ ಹೆಜ್ಜೆ ಹಾಕುತ್ತೇನೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಕೃತಜ್ಞತೆ ಸಲ್ಲಿಸಿದ್ದಾರೆ.

ತನ್ನ ಫೇಸ್‍ಬುಕ್ ಪೇಜ್‍ನಲ್ಲಿ ಮಂಡ್ಯ ಜನತೆಗೆ ಕೃತಜ್ಞತೆ ಸಲ್ಲಿಸಿರುವ ಅವರು, ಸುಮಾರು ನಲವತ್ತೆಂಟು ದಿನಗಳ ಹೋರಾಟ ಈ ಕ್ಷಣಕ್ಕೆ ಮುಗಿದಿದೆ. ಇದು ಚುನಾವನೆಯ ಹೋರಾಟವಾಗಿತ್ತು. ಫಲಿತಾಂಶ ಏನೇ ಇರಲಿ, ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದು ಅವರು ಹೇಳಿದ್ದಾರೆ.

ಕೃತಜ್ಞತೆ ಸಲ್ಲಿಸಿಲ್ಲವೆಂದು ತುಂಬಾ ಅಂಬರೀಷ್ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ನಮ್ಮ ಮನೆಯ ಸದಸ್ಯರಂತಿರುವ ಅಂಬರೀಷ್ ಅಭಿಮಾನಿಗಳಿಗೆ ಹೇಗೆ ಕೃತಜ್ಞತೆ ಸಲ್ಲಿಸಲಿ? ಯಾವ ರೀತಿ ರೂಪದಲ್ಲಿ ಕೃತಜ್ಞತೆ ಸಲ್ಲಿಸಲಿ? ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ನನ್ನನ್ನು ಹುರಿದುಂಬಿಸಿದ್ದಾರೆ. ಅಮ್ಮನನ್ನು ಗೆಲ್ಲಿಸಿ, ಅತ್ತಿಗೆಯನ್ನು ಗೆಲ್ಲಿಸಿ, ಅಕ್ಕನನ್ನು ಗೆಲ್ಲಿಸಿ ಎಂದು ಮಂಡ್ಯದ ಜನತೆಯಲ್ಲಿ ಸದಾ ವಿನಂತಿಸಿಕೊಂಡಿದ್ದಾರೆ. ಈ ಪ್ರೀತಿ ಸಂಪಾದಿಸಿರುವ ಅಂಬರೀಷ್ ಆಸ್ತಿಯನ್ನು ಕಾಪಾಡಿಕೊಳ್ಳುವುದು ನನ್ನ ಧರ್ಮವಾಗಿದೆ ಎಂದು ಅವರು ಹೇಳಿದ್ದಾರೆ.

ಅಂಬರೀಷ್ ಎಂಬ ಶಕ್ತಿಯೊಂದಿಗೆ ದರ್ಶನ್, ಯಶ್ ಅನ್ನುವ ಶಕ್ತಿಯೂ ಒಟ್ಟಾಗಿದೆ. ಈಗ ಪ್ರತಿಯೊಬ್ಬರೂ ನಮ್ಮ ಮನೆಯ ಸದಸ್ಯರೇ. ಆ ಸದಸ್ಯರಲ್ಲಿ ಯಾವುದೇ ಭೇದ ಭಾವಗಳಿಲ್ಲ. ಎಲ್ಲರೂ ಒಟ್ಟಾಗಿ ನನ್ನ ಬೆಂಗಾವಲಾಗಿ ನಿಂತು ಬೆಂಬಲಿಸಿದ್ದೀರಿ. ಅಷ್ಟೇ ಅಲ್ಲದೆ ನನ್ನ ಈ ನಡೆಯನ್ನು, ಹೋರಾಟವನ್ನು ಮೆಚ್ಚಿ ಸಾಕಷ್ಟು ಜನ ರಾಜ್ಯದ ಮೂಲೆ ಮೂಲೆಗಳಿಂದ ನನ್ನನ್ನು ಬೆಂಬಲಿಸಿದ್ದಾರೆ. ಅವರಿಗೂ ನನ್ನ ವಿಶೇಷವಾದ ಕೃತಜ್ಞತೆಗಳು ಎಂದು ಸುಮಲತಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News