ಆಂಧ್ರ-ಕರ್ನಾಟಕವನ್ನು ಬಿಜೆಪಿಯಿಂದ ರಕ್ಷಿಸಬೇಕು: ಚಂದ್ರಬಾಬು ನಾಯ್ಡು
ಕೊಪ್ಪಳ, ಎ. 21: ರಾಷ್ಟ್ರಪಿತ ಮಹಾತ್ಮ ಗಾಂಧಿ ಹುಟ್ಟಿದ ಊರಿನಲ್ಲಿ ಜನಿಸಿದ ಮೋದಿ ಸುಳ್ಳು ಹೇಳುತ್ತಿದ್ದಾರೆ. ಆದರೆ, ಮಹಾತ್ಮ ಗಾಂಧಿ ಎಂದೂ ಸುಳ್ಳು ಹೇಳಲಿಲ್ಲ ಎಂದು ಟೀಕಿಸಿರುವ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಆಂಧ್ರ ಮತ್ತು ಕರ್ನಾಟಕ ರಾಜ್ಯಗಳನ್ನು ಬಿಜೆಪಿಯಿಂದ ರಕ್ಷಿಸಬೇಕು ಎಂದು ಕರೆ ನೀಡಿದ್ದಾರೆ.
ರವಿವಾರ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಮೈತ್ರಿ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಪರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ದೇಶದ ಜನರಿಗೆ ಮಾಡಿರುವ ಮೋಸವನ್ನು ತಿಳಿಸಲು ಬಂದಿದ್ದೇನೆ. ಆಂಧ್ರದ ಅಮರಾವತಿಯನ್ನು ಅಭಿವೃದ್ಧಿ ಮಾಡಿದಂತೆ ಹೈ.ಕ.ದ ಅಭಿವೃದ್ಧಿ ಮಾಡಬೇಕಿದೆ ಎಂದರು.
ತುಂಗಭದ್ರಾ ನದಿ ನೀರಿನ ಸಮಸ್ಯೆ ಕುರಿತು ಕರ್ನಾಟಕ ಸರಕಾರದ ಜೊತೆಗಿದ್ದು ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಲಿದ್ದೇವೆ ಎಂದ ಅವರು, ಈ ಬಾರಿ ಕೇಂದ್ರದಲ್ಲಿ ನಮ್ಮ ಸರಕಾರ ರಚನೆಯಾಗಲಿದೆ. ಈ ಬಗ್ಗೆ ಸಂಶಯ ಬೇಡ. ರಾಜ್ಯದಲ್ಲಿಯೂ ಬಿಜೆಪಿಯನ್ನು ಓಡಿಸಬೇಕು ಎಂದು ಸಲಹೆ ಮಾಡಿದರು.