ದೇವೇಗೌಡ, ಪ್ರಜ್ವಲ್, ನಿಖಿಲ್ ಸೋಲು ಖಚಿತ: ಹಾಸನ ಬಿಜೆಪಿ ಅಭ್ಯರ್ಥಿ ಎ.ಮಂಜು

Update: 2019-04-21 16:20 GMT

ಶಿವಮೊಗ್ಗ, ಏ. 21: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನನ್ನ ಗೆಲುವು ನಿಶ್ಚಿತ. ಪ್ರಜ್ವಲ್ ರೇವಣ್ಣ ಸೋಲು ಖಚಿತವಾಗಿದೆ. ಹಾಗೆಯೇ ತುಮಕೂರಿನಲ್ಲಿ ಹೆಚ್.ಡಿ.ದೇವೇಗೌಡ ಹಾಗೂ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲನುಭವಿಸಲಿದ್ದಾರೆ ಎಂದು ಹಾಸನ ಬಿಜೆಪಿ ಅಭ್ಯರ್ಥಿ ಎ.ಮಂಜು ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ತಮ್ಮ ಹುಳುಕು ಮುಚ್ಚಿಕೊಳ್ಳಲು, ತಮ್ಮ ರಕ್ಷಣೆಗೆ, ಕುಟುಂಬದ ಆಸ್ತಿ ಭದ್ರ ಮಾಡಿಕೊಳ್ಳಲು, ರಾಜಕೀಯವಾಗಿ ಉಳಿದುಕೊಳ್ಳಲು ಒಟ್ಟಾಗಿದ್ದಾರೆ ವಿನಃ ದೇಶಕ್ಕಾಗಲಿ, ರಾಜ್ಯದ ಅಭಿವೃದ್ಧಿಯಾಗಲಿ ಅಥವಾ ರಾಜ್ಯದ ಜನರ ಹಿತಕ್ಕಾಗಿಯಲ್ಲ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಜೆಡಿಎಸ್‍ನವರು ಮೋಸ ಮಾಡುವುದರಲ್ಲಿ ಎತ್ತಿದ ಕೈ. ಇವರು ಚುನಾವಣೆ ಬಂದಾಗ ಮಾತ್ರ ಜಾತ್ಯತೀತ, ಹಿಂದುಳಿದವರು, ಅಲ್ಪಸಂಖ್ಯಾತರ ಹಿತ ಕಾಯುವವರು ಎನ್ನುತ್ತಾ ಹೇಳಿಕೊಂಡು ಓಡಾಡುತ್ತಾರೆ. ಆದರೆ ಅಧಿಕಾರಕ್ಕೆ ಬಂದಾಗ, ಆಡಳಿತ ನಡೆಸುವಾಗ, ಅಪ್ಪ-ಮಕ್ಕಳು ಹಾಗೂ ಸೊಸೆಯಂದಿರು ಮಾತ್ರ ಇವರಿಗೆ ಕಾಣುತ್ತಾರೆ. ಬೇರೆ ಯಾವ ವರ್ಗದವರೂ ಕಣ್ಣಿಗೆ ಕಾಣುವುದಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್-ಜೆಡಿಎಸ್‍ನವರು ಈ ಹಿಂದೆ ಹೇಗೆಲ್ಲಾ ಬಡಿದಾಡಿಕೊಳ್ಳುತ್ತಿದ್ದರು. ಯಾವ್ಯಾವ ರೀತಿಯಲ್ಲಿ ತಮ್ಮನ್ನು ತಾವು ಕೆಳಮಟ್ಟದಲ್ಲಿ ಟೀಕಿಸಿಕೊಳ್ಳುತ್ತಿದ್ದರು. ಈಗ ಒಂದಾಗಿದ್ದಾರೆ. ಇವರ ಕಮಿಷನ್ ವ್ಯವಹಾರ, ಭ್ರಷ್ಟಾಚಾರ, ಅಧಿಕಾರಿಗಳಿಗೆ ಕೊಟ್ಟ ಕಿರುಕುಳ ಇಡೀ ದೇಶಕ್ಕೆ ಗೊತ್ತಿದೆ ಎಂದು ದೂರಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಒಂದಾಗಿರಬಹುದು. ಆದರೆ ಎರಡೂ ಪಕ್ಷಗಳ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಒಂದಾಗಲು ಸಾಧ್ಯವಿಲ್ಲ. ಕೆಟ್ಟ ಸಂಸ್ಕೃತಿ ಕಂಡು ಅವರ ಕಾರ್ಯಕರ್ತರೇ ರೋಸಿ ಹೋಗಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News