ತಲೆಮರೆಸಿಕೊಂಡಿದ್ದ ಸರಣಿ ಕೊಲೆ ಆರೋಪಿ ಬಂಧನ

Update: 2019-04-25 16:50 GMT

ಮೈಸೂರು,ಎ.25: ಮೈಸೂರು ನಗರ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಕುವೆಂಪುನಗರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಎ.24 ರಂದು ವಿಶೇಷ ಕಾರ್ಯಾಚರಣೆ ನಡೆಸಿ ಮೈಸೂರು ನಗರದಲ್ಲಿ ಐದು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಮೈಸೂರಿನ ಲಷ್ಕರ್ ಮೊಹಲ್ಲಾದ ಅತೀಕ್ ಅಹಮದ್ ಷರೀಫ್ ಅಲಿಯಾಸ್ ಟಿಂಬರ್ ಅತೀಕ್ (39) ಎಂದು ಗುರುತಿಸಲಾಗಿದೆ. ಈತನನ್ನು   ಬುಧವಾರ ದಸ್ತಗಿರಿ ಮಾಡಿದ್ದು, ಈತನು ಈ ಹಿಂದೆ ಮೈಸೂರಿನ 5 ಪ್ರಕರಣಗಳಲ್ಲಿ ಭಾಗಿಯಾಗಿ, ಸುಮಾರು 5 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ. ಈತನನ್ನು ದಸ್ತಗಿರಿ ಮಾಡಿ ಎ.24 ರಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈಗ ಮೈಸೂರು ನಗರದ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿದ್ದಾನೆ.

ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಮೈಸೂರು ನಗರದ ಡಿಸಿಪಿ ಮುತ್ತುರಾಜು ಎಂ ಮತ್ತು ಸಿಸಿಬಿಯ ಎಸಿಪಿ ಮರಿಯಪ್ಪ.ವಿ ಅವರ ನೇತೃತ್ವದಲ್ಲಿ ಕುವೆಂಪುನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಾಜು ಜಿ.ಸಿ, ಸಿಬ್ಬಂದಿಗಳಾದ ನಿರಂಜನ್, ರಾಜೇಂದ್ರ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News