ಮಳೆಗಾಲಕ್ಕೂ ಮೊದಲು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಿ: ಕೊಡಗು ಜಿಲ್ಲಾಡಳಿತಕ್ಕೆ ಶಾಸಕರ ಸಲಹೆ

Update: 2019-04-27 12:53 GMT

ಮಡಿಕೇರಿ ,ಎ.27: ಕಳೆದ ಅತಿವೃಷ್ಟಿ ಅನಾಹುತದಿಂದ ಕಂಗೆಟ್ಟಿರುವ ಜಿಲ್ಲೆಗೆ ಮತ್ತೊಂದು ಮಳೆಗಾಲದ ಆಗಮನದ ಕಾಲ ಸಮೀಪಿಸಿದರೂ ಸಂತ್ರಸ್ತರಿಗೆ ಮನೆ ಮತ್ತು ಅಗತ್ಯ ಮೂಲಭೂತ ಸೌಲಭ್ಯಗಳ ಪೂರೈಕೆ ಕಾರ್ಯ ಸಮರ್ಪಕವಾಗಿ ಸಕಾಲದಲ್ಲಿ ನಡೆಯುತ್ತಿಲ್ಲವೆಂದು ಆರೋಪಿಸಿರುವ ಜಿಲ್ಲೆಯ ಶಾಸಕರು ಶೀಘ್ರ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. 

ಮನವಿಯ ವಿವರ ಹೀಗಿದೆ
ಪ್ರಮುಖವಾಗಿ ಮನೆಯನ್ನು ಕಳೆದುಕೊಂಡ ನಿರಾಶ್ರಿತರಿಗೆ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದ್ದರೂ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಸಂತ್ರಸ್ತರು ಅತಂತ್ರ ಸ್ಥಿತಿಯನ್ನೇ ಎದುರಿಸುತ್ತಿದ್ದಾರೆ. ಮಳೆಗಾಲ ಆರಂಭವಾಗಲು ಇನ್ನು ಒಂದು ತಿಂಗಳಷ್ಟೇ ಬಾಕಿ ಉಳಿದಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ನೂತನ ಮನೆಗಳನ್ನು ಸಂತ್ರಸ್ತರಿಗೆ ಹಸ್ತಾಂತರಿಸಬೇಕು, ಜಿಲ್ಲೆಯಲ್ಲಿನ ರಸ್ತೆಗಳು, ಸೇತುವೆಗಳು, ಕೆರೆ ಕಟ್ಟೆಗಳು ಕೊಚ್ಚಿ ಹೋಗಿದ್ದು, ಈಗಾಗಲೇ ದುರಸ್ತಿ ಕಾರ್ಯ ಕೆಲವೇ ಗ್ರಾಮಗಳಲ್ಲಿ ನಡೆಯುತ್ತಿದೆ. ಇನ್ನುಳಿದ ಗ್ರಾಮಗಳಿಗೆ ಈಗಲೂ ರಸ್ತೆ ಸಂಪರ್ಕ ಇಲ್ಲದೆ ರೈತರು ತಮ್ಮ ಜಮೀನಿಗೆ ಹೋಗಿ ವ್ಯವಸಾಯ ಮಾಡಲು ಸಾಧ್ಯವಾಗದೇ ಸಂಕಷ್ಟದಲ್ಲಿದ್ದಾರೆ. ತಕ್ಷಣ ಹೆಚ್ಚುವರಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಲ್ಲಾ ಗ್ರಾಮಗಳ ರಸ್ತೆಗಳನ್ನು ದುರಸ್ತಿಪಡಿಸಬೇಕು, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಫಿ ಬೆಳೆಗಾರರೇ ವಾಸಿಸುತ್ತಿದ್ದು, ಈ ಬಾರಿ ಜಿಲ್ಲೆಯಲ್ಲಿ ಅಂದಾಜು 9482.61 ಲಕ್ಷ ವೆಚ್ಚದ ಬೆಳೆ ನಷ್ಟವಾಗಿದೆ. ಬೆಳೆಗಾರರು ಹಾಗೂ ರೈತರು ಬೆಳೆನಷ್ಟದಿಂದ ಕಂಗಾಲಾಗಿದ್ದು, ಇಲ್ಲಿಯವರೆಗೆ ಯಾವುದೇ ಪರಿಹಾರ ದೊರೆತಿಲ್ಲ. ಕೆಲವು ರೈತರಿಗೆ ಮಾತ್ರ ಪರಿಹಾರ ದೊರೆತಿದ್ದು, ಬಹುತೇಕರು ವಂಚಿತರಾಗಿದ್ದಾರೆ. ಈ ಕಾರಣದಿಂದ ತಕ್ಷಣ ಬೆಳೆನಷ್ಟ ಪರಿಹಾರವನ್ನು ವಿತರಿಸಬೇಕು, ಜಮೀನು ಕಳೆದುಕೊಂಡ ರೈತರಿಗೆ ಪರ್ಯಾಯ ಭೂಮಿಯನ್ನು ಇಲ್ಲಿಯವರೆಗೆ ನೀಡಿಲ್ಲ, ಖಾಲಿ ಇರುವ ಸರ್ಕಾರಿ ಜಮೀನನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು.

ಜಮೀನು ಕಳೆದುಕೊಂಡ ಗ್ರಾ.ಪಂ ವ್ಯಾಪ್ತಿಯ ಪ್ರತಿಯೊಬ್ಬರಿಗೂ ಬಿಪಿಎಲ್ ಕಾರ್ಡ್ ನೀಡಬೇಕು, ಕೆಲವು ಭಾಗಗಳ ಗುಡ್ಡಗಳು ಬಿರುಕು ಬಿಟ್ಟಿದ್ದು, ಅಪಾಯ ಎದುರಾಗುವ ಮುನ್ಸೂಚನೆ ಇದೆ.  ಈ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಪರ್ಯಾಯವಾಗಿ ಸೂಕ್ತ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಡಬೇಕು, ಗುಡ್ಡಗಳು ಕುಸಿದು ಮಣ್ಣುಗಳು ಒಂದೆಡೆ ಸೇರಿದ್ದು, ಕೆಲವು ಭಾಗದಲ್ಲಿ ಇಳಿಜಾರು ಪ್ರದೇಶ ನಿರ್ಮಾಣವಾಗಿದೆ. ಇದನ್ನು  ಸರ್ಕಾರದ ಅನುದಾನದಲ್ಲಿ ಸಮತಟ್ಟುಗೊಳಿಸಿ ರೈತರಿಗೆ ವ್ಯವಸಾಯ ಮಾಡಲು ಅವಕಾಶ ಕಲ್ಪಿಸಬೇಕು, ಭೂ ಕುಸಿತದಿಂದ ಮರಗಳು ಬಿದ್ದಿದ್ದು, ಅಂತಹ ಮರಗಳನ್ನು ಯಾವುದೇ ನಿರ್ಭಂದವಿಲ್ಲದೆ ರೈತರೇ ಮಾರಾಟ ಮಾಡಲು, ಇಲ್ಲವೇ ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಬೇಕು, ಭೂಕುಸಿತದಿಂದ ಮನೆಯ ದಾಖಲಾತಿಗಳು, ಭೂ ದಾಖಲಾತಿಗಳು, ವಿದ್ಯಾಭ್ಯಾಸಕ್ಕೆ ಸಂಬಂದಿಸಿದ ದಾಖಲಾತಿಗಳು ಮಣ್ಣಿನಲ್ಲಿ ನಾಶವಾಗಿರುವುದರಿಂದ ಸಂಬಂಧಿಸಿದ ಇಲಾಖೆ ದಾಖಲಾತಿಗಳನ್ನು ಮರಳಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.

ಕಳೆದ ವರ್ಷ ಕೊಡಗಿನ ವಿವಿಧೆಡೆ ಸಂಭವಿಸಿದ ಪ್ರಾಕೃತಿಕ ವಿಕೋಪ ಈ ಬಾರಿಯೂ ಸಂಭವಿಸುವ ಸಾಧ್ಯತೆ ಇರುವುದಾಗಿ ಭಾರತೀಯ ಭೂ ವಿಜ್ಞಾನ ಸಮೀಕ್ಷಾ ಸಂಸ್ಥೆಯ ಮಾಜಿ ಉಪನಿರ್ದೇಶಕ ಹೆಚ್.ಎಸ್.ಪ್ರಕಾಶ್ ಅವರು ತಿಳಿಸಿದ್ದು, ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ತಕ್ಷಣ ಜಿಲ್ಲಾಡಳಿತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿಕುಶಾಲಪ್ಪ ಮತ್ತಿತರರು ಪ್ರಬಾರ ಜಿಲ್ಲಾಧಿಕಾರಿ, ಜಿ.ಪಂ ಸಿಇಒ ಲಕ್ಷ್ಮೀಪ್ರಿಯ ಅವರಿಗೆ ಮನವಿ ಪತ್ರ ಸಲ್ಲಿಸಿ ಸರ್ಕಾರದ ಗಮನ ಸೆಳೆಯುವಂತೆ ತಿಳಿಸಿದರು. ನಂತರ ಶಾಸಕ ಅಪ್ಪಚ್ಚುರಂಜನ್ ಮಡಿಕೇರಿ ನಗರದ ಎತ್ತರದ ಪ್ರದೇಶ ಸ್ಟೋನ್‍ಹಿಲ್ ಭಾಗಕ್ಕೆ ತೆರಳಿ ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News