ಅಂಬೇಡ್ಕರ್ ಜಗತ್ತು ಕಂಡ ಮಹಾ ಮಾನವತಾವಾದಿ: ಮ.ಬೆಟ್ಟ ಎಎಸ್ಐ ವೀರಭದ್ರಯ್ಯ
Update: 2019-04-27 18:05 GMT
ಹನೂರು,ಎ.27: ಬಾಬಾ ಸಾಹೇಬ್ ಅಂಬೇಡ್ಕರ್ ಜಗತ್ತು ಕಂಡ ಮಹಾ ಮಾನವತಾವಾದಿ ಹಾಗೂ ವಿಶ್ವಜ್ಞಾನಿ ಎಂದು ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಎಎಸ್ಐ ವೀರಭದ್ರಯ್ಯ ತಿಳಿಸಿದರು.
ಶುಕ್ರವಾರ ರಾತ್ರಿ ಮಲೆ ಮಹದೇಶ್ವರ ಬೆಟ್ಟ ಪುದೂರು ಅಂಬೇಡ್ಕರ್ ಬಡಾವಣೆಯಲ್ಲಿ ಏರ್ಪಡಿಸಲಾಗಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮಾತನಾಡಿದರು. ಅಂಬೇಡ್ಕರ್ ಶೋಷಿತ, ಹಿಂದುಳಿದ ಜನಾಂಗ ಸಮಾಜದಲ್ಲಿ ಸಮಾನತೆಯಿಂದ ಬದುಕಲು ಅವಕಾಶ ಮಾಡಿಕೊಟ್ಟರು. ಅವರು ರಚಿಸಿರುವ ಸಂವಿಧಾನ ಜಗತ್ತಿನ ಶ್ರೇಷ್ಠ ಸಂವಿಧಾನವಾಗಿದೆ. ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ಇಂದಿನ ಯುವಕರು ಮೈಗೂಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದು ತಿಳಿಸಿದರು.
ಬಳಿಕ ಅಂಬೇಡ್ಕರ್ ಸಂಘದ ವತಿಯಿಂದ ಆಕರ್ಷಕ ಪಲ್ಲಕ್ಕಿ ಉತ್ಸವದ ಮೂಲಕ ಮೆರವಣಿಗೆಯನ್ನು ನಡೆಸಲಾಯಿತು. ಪುದುನಗರ ದೇವಸ್ಥಾನ ರಸ್ತೆ, ಬಸ್ ನಿಲ್ದಾಣ ಸೇರಿದಂತೆ ಮಲೆ ಮಹದೇಶ್ವರ ಬೆಟ್ಟದ ಪ್ರಮುಖ ಬೀದಿಗಳಲ್ಲಿ ತಮಟೆ ಮೇಳಗಳೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ಸಾಗಿತು.