ಕೃಷಿ ಹೊಂಡಕ್ಕೆ ಬಿದ್ದು ಯುವಕ ಸಾವು
ಮಳವಳ್ಳಿ,ಎ.28: ಕೃಷಿ ಹೊಂಡದಲ್ಲಿ ಮುಳುಗಿ ಯುವಕ ಸಾವನ್ನಪ್ಪಿರುವ ಘಟನೆಯೊಂದು ತಾಲೂಕಿನ ಬಾಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸೋಮಶೇಖರ್ ಎಂಬವರ ಮಗನಾದ ನಾಗೇಂದ್ರ ಕುಮಾರ್ (29) ಮೃತಪಟ್ಟ ವ್ಯಕ್ತಿ. ಇಂದು ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಗ್ರಾಮದ ಹೊರವಲಯದಲ್ಲಿ ಬಹಿರ್ದೆಸೆಗೆ ಎಂದು ತೆರಳಿದ್ದ ಈತ ನಂತರ ಇದೇ ಗ್ರಾಮದ ಚೌಡೇಗೌಡ ಎಂಬುವರ ಕೃಷಿ ಹೊಂಡದಲ್ಲಿ ನೀರು ತೆಗೆದುಕೊಳ್ಳಲೆಂದು ಇಳಿದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ಬಹಿರ್ದೆಸೆಗೆ ಎಂದು ಹೋದ ಮಗ ಎಷ್ಟು ಹೊತ್ತಾದರೂ ಮನೆಗೆ ಬಾರದಿರುವುದೇ ಆದರೂ ಮೊಬೈಲ್ ಕರೆಗೆ ಉತ್ತರಿಸದಿರುವ ಹಿನ್ನೆಲೆಯಲ್ಲಿ ಗಾಬರಿಯಾದ ತಾಯಿ ಪುಟ್ಟಸಿದ್ದಮ್ಮ ಅವರು ಕೃಷಿ ಹೊಂಡದ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಧಾಮಿಸಿದ ಗ್ರಾಮಸ್ಥರು ನೀರಿನಿಂದ ದೇಹವನ್ನು ಹೊರಗೆತ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.