ಸೋಮವಾರಪೇಟೆ: ಕತ್ತಿಯಿಂದ ಕೊಚ್ಚಿ ತಾಯಿ ಮಗಳ ಹತ್ಯೆ

Update: 2019-04-30 16:23 GMT
ಕವಿತ, ಜಗಶ್ರೀ

ಸೋಮವಾರಪೇಟೆ: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ತಾಯಿ ಮತ್ತು ಮಗಳನ್ನು ಕತ್ತಿಯಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿ ನಡೆದಿದೆ. ದೊಡ್ಡಮಳ್ತೆ ಗ್ರಾಮದ ದಿ. ವೀರರಾಜು ಅವರ ಪತ್ನಿ ಕವಿತ(45) ಹಾಗೂ ಅವರ ಪುತ್ರಿ ಜಗಶ್ರೀ (17) ಅವರುಗಳೇ ಮೃತಪಟ್ಟವರು.

ಕವಿತ ಅವರ ತಲೆ, ಕುತ್ತಿಗೆ ಕೈ, ಕಾಲು ಹಾಗೂ ಜಗಶ್ರೀಯ ಕೈ ಹಾಗೂ ತಲೆ ಭಾಗಕ್ಕೆ ಗಂಭೀರವಾಗಿ ಕಡಿದಿರುವ ಪರಿಣಾಮ ರಕ್ತದ ಮಡುವಿನಲ್ಲಿಯೇ ಈರ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತನ್ನ ತಾಯಿಯ ಮೊಬೈಲ್‍ಗೆ ಕರೆ ಮಾಡಿದ ಪುತ್ರ ಮೇಘಮದನ್‍ರಾಜ್, ಮೊಬೈಲ್ ಸ್ವಿಚ್‍ಆಫ್ ಆಗಿದ್ದರಿಂದ ತೋಟದ ಬಳಿ ತೆರಳಿದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ.

ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದ ಮೇರೆ, ಸ್ಥಳೀಯರು ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಸೋಮವಾರಪೇಟೆ ಡಿವೈಎಸ್‍ಪಿ ದಿನಕರ್‍ಶೆಟ್ಟಿ, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ಅವರುಗಳು ತೆರಳಿ ಪರಿಶೀಲನೆ ಮಾಡಿದ್ದಾರೆ.

ಸ್ಥಳದಲ್ಲಿ ಶ್ವಾನದಳವಿದ್ದರೂ ಸಹ ಯಾವುದೇ ಪರಿಶೀಲನೆ ನಡೆಸದೇ ಮೃತದೇಹಗಳನ್ನು ಸ್ಥಳಾಂತರಿಸಲು ಪೊಲೀಸರು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಡಿವೈಎಸ್‍ಪಿ ದಿನಕರ್ ಶೆಟ್ಟಿ ಸೇರಿದಂತೆ ಪೊಲೀಸರು ಸ್ಥಳೀಯರನ್ನು ಸಮಾಧಾನಪಡಿಸಿದರು. ಶ್ವಾನದಳದಿಂದ ಪರಿಶೀಲನೆ ನಡೆಸಿದ ನಂತರ ಮೃತದೇಹವನ್ನು ಸಾಗಿಸಲಾಯಿತು.

ಘಟನೆಗೆ ಆಸ್ತಿ ವಿವಾದವೇ ಕಾರಣ ಎನ್ನಲಾಗಿದ್ದು, ಈ ಹಿಂದೆ ದಾರಿಗೆ ಸಂಬಂಧಿಸಿದಂತೆ ತಕರಾರು ನಡೆಸುತ್ತಿದ್ದ ಸ್ಥಳೀಯ ಮೂವರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿರುವ ಬಗ್ಗೆ ತಿಳಿದುಬಂದಿದೆ.

ಮೃತೆ ಜಗಶ್ರೀ ಹಾಸನದ ಸಂತ ಫಿಲೋಮಿನಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ರಜೆಯ ಹಿನ್ನೆಲೆ ಮನೆಗೆ ಆಗಮಿಸಿದ್ದಳು. ಇದರೊಂದಿಗೆ ಪುತ್ರ ಮೇಘಮದನ್‍ರಾಜ್ ವೀರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News