ಬಾಲಕಿಯ ಅತ್ಯಾಚಾರ ಪ್ರಕರಣ: ಸೈನಿಕನ ಬಂಧನ, ಮತ್ತೊಬ್ಬ ಆರೋಪಿ ಆತ್ಮಹತ್ಯೆಗೆ ಯತ್ನ

Update: 2019-04-30 16:57 GMT
ಕಾರ್ತಿಕ್, ಸಂದೀಪ್

ಸಕಲೇಶಪುರ, ಎ.30: ಬಾಲಕಿಯನ್ನು ಸೈನಿಕ ಮತ್ತು ಆತನ ಸ್ನೇಹಿತ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈನಿಕನನ್ನು ಪೊಲೀಸರು ವಶಕ್ಕೆ ಪಡೆದು, ಆತ್ಮಹತ್ಯೆಗೆ ಯತ್ನಿಸಿದ್ದ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಲು ಮುಂದಾಗಿದ್ದಾರೆ.

ಬಾಳ್ಳುಪೇಟೆ ನಿವಾಸಿಗಳಾದ ಸಂದೀಪ್ (25) ಮತ್ತು ಸೈನಿಕ ಕಾರ್ತಿಕ್ (24) ಇಬ್ಬರ ವಿರುದ್ಧ ಅತ್ಯಾಚಾರ ಪ್ರಕರಣಕ್ಕೆ ಸಂಭಂದಿಸಿದಂತೆ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ: ಬಾಲಕಿ ಬಾಳ್ಳುಪೇಟೆ ಗ್ರಾಮದ ಜೆಪಿ ನಗರದ ಪರಿಚಯಸ್ಥರ ಮಗುವಿನ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಎ.23ರಂದು ತೆರಳಿದ್ದಳು. ಮಗುವನ್ನು ಕರೆದುಕೊಂಡು ಎ.25ರಂದು ಗುರುವಾರ ತಮ್ಮ ಮನೆಗೆ ವಾಪಾಸಾಗಿದ್ದಳು. ಆದರೆ, ಶುಕ್ರವಾರ ಮಗುವನ್ನು ವಾಪಸ್ ಕಳುಹಿಸಲು ಬಾಳ್ಳುಪೇಟೆಗೆ ಬಂದಿಳಿದು ಸುಮಾರು ಒಂದು ಕಿ.ಮೀ. ದೂರದ ಜೆಪಿ ನಗರಕ್ಕೆ ನಡೆದುಕೊಂಡು ಹೋಗುವಾಗ ಪರಿಚಯಸ್ಥನಾದ ಸಂದೀಪ್ ಕಾರಿನಲ್ಲಿ ಮನೆಗೆ ಬಿಡುವುದಾಗಿ ಹೇಳಿ ಹತ್ತಿಸಿಕೊಂಡಿದ್ದಾನೆ ಎನ್ನಲಾಗಿದೆ.
ಕಾರಿನಲ್ಲಿ ಕೂರಿಸಿಕೊಂಡು ಆತ್ಮಿಯವಾಗಿ ಮಾತನಾಡುತ್ತ ಕುಡಿಯಲು ಅಮಲು ಭರಿಸುವ ಪಾನಿಯ ಕೊಟ್ಟಿದ್ದಾನೆ. ಪಾನಿಯ ಕುಡಿದ ಸ್ವಲ್ಪ ಸಮಯದಲ್ಲಿ ಬಾಲಕಿ ಪ್ರಜ್ಞೆಕಳೆದುಕೊಂಡಿದ್ದಾಳೆ. ಮಗುವನ್ನು ಖುದ್ದಾಗಿ ಸಂದೀಪ್ ಕಳುಹಿಸಿ ಹೋಗಿದ್ದಾನೆ. ಈ ವೇಳೆ ಆ ಮನೆಯವರು ಬಾಲಕಿಯ ಬಗ್ಗೆ ಪ್ರಶ್ನಿಸಿದಾಗ, ಅವಳು ಆಗಲೇ ಹೋಗಿದ್ದಾಳೆ ಎಂದು ಸಂದೀಪ್ ಸುಳ್ಳು ಹೇಳಿದ್ದಾನೆ. ಪ್ರಜ್ಞೆ ಕಳೆದುಕೊಂಡು ಕಾರಿನಲ್ಲಿಯೇ ಮಲಗಿದ್ದ ಬಾಲಕಿಯನ್ನು ಸಂದೀಪ್ ಮತ್ತು ಕಾರ್ತಿಕ್ ಶುಕ್ರವಾರ ಮಧ್ಯಾಹ್ನದಿಂದ ಶನಿವಾರ ಬೆಳಗಿನ ಜಾವದ ವರೆಗೂ ಊರಿನ ಸಮೀಪದ ಶಾಲೆಯ ಕಟ್ಟಡದಲ್ಲಿ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ.

ಸುಮಾರು 14 ತಾಸಿಗೂ ಹೆಚ್ಚು ಸಮಯ ತಮ್ಮ ವಶದಲ್ಲಿ ಇದ್ದ ಬಾಲಕಿಯನ್ನು ಅತ್ಯಾಚಾರ ನಡೆಸಿ ಪರಿಚಯಸ್ಥರ ಮನೆಯಲ್ಲಿ ಶನಿವಾರ ಬೆಳಗ್ಗೆ ಬಿಟ್ಟು ಹೊಗಿದ್ದಾರೆ. ಬಾಲಕಿಯ ಸ್ಥಿತಿಯನ್ನು ಕಂಡು ಅನುಮಾನಗೊಂಡು ಬಾಲಕಿಯ ದೇಹವನ್ನು ಪರೀಕ್ಷಿಸಿದಾಗ ಗುಪ್ತಭಾಗಗಳಲ್ಲಿ ಗಂಭೀರ ಸ್ವರೂಪದ ಗಾಯಗಳಾಗಿರುವುದನ್ನು ಗಮನಿಸಿ ಈ ಬಗ್ಗೆ ಪ್ರಶ್ನಿಸಿದಾಗ ಬಾಲಕಿ ನಡೆದ ಘಟನೆ ತಿಳಿಸಿದ್ದಾಳೆ. ಬಳಿಕ ಪಟ್ಟಣದ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಪೋಲಿಸರಿಗೆ ದೂರು ನೀಡಿರುವ ವಿಷಯ ತಿಳಿದ ಆರೋಪಿ ಸಂದೀಪ್ ವಿಷ ಕುಡಿಯುವ ದೃಷ್ಯವನ್ನು ಸೆರೆ ಹಿಡಿದು ತನ್ನ ಆಪ್ತರಿಗೆ ಕಳುಹಿಸುವ ಮೂಲಕ ತಾನು ಅಮಾಯಕ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಮತ್ತೊಬ್ಬ ಆರೋಪಿ ಕಾರ್ತಿಕ್ ಸಹಾಯಕ ಸೈನಿಕನಾಗಿ ಕೆಲಸ ಮಾಡುತ್ತಿದ್ದು, ತನ್ನ ಮದುವೆಯ ರಜೆಯ ಮೇಲೆ ಊರಿಗೆ ಬಂದಿದ್ದ. ಎ.28ರಂದು ರವಿವಾರ ಕಾರ್ತಿಕ್ ಮದುವೆ ನಡೆದಿದ್ದು, ಸೋಮವಾರ ರಾತ್ರಿ ಪೋಲಿಸರು ಬಂಧಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News